E- Bhagavad Gita: ಇ- ಭಗವದ್ಗೀತೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ಪವಿತ್ರ ಗ್ರಂಥದ ಗುಣಗಾನ

| Updated By: ರಶ್ಮಿ ಕಲ್ಲಕಟ್ಟ

Updated on: Mar 11, 2021 | 12:15 PM

ಇತ್ತೀಚೆಗೆ ಜಗತ್ತಿಗೆ ಅಗತ್ಯವಿದ್ದ ಕೊವಿಡ್ ಔಷಧವನ್ನು ಭಾರತದಿಂದ ಹಲವು ದೇಶಗಳಿಗೆ ರವಾನೆ ಮಾಡಲಾಗಿದೆ. ಇಂತಹ ಭಾರತದಲ್ಲೇ ತಯಾರಿಸಿದ ಔಷಧಗಳನ್ನು ವಿಶ್ವಕ್ಕೆ ನೀಡುವ ಉದಾರ ಬುದ್ಧಿಗೆ, ಭಗವದ್ಗೀತೆ ಕಲಿಸಿದ ಮೌಲ್ಯಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

E- Bhagavad Gita: ಇ- ಭಗವದ್ಗೀತೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ಪವಿತ್ರ ಗ್ರಂಥದ ಗುಣಗಾನ
ಪ್ರಧಾನಮಂತ್ರಿ ನರೇಂದ್ರ ಮೋದಿ
Follow us on

ದೆಹಲಿ: ಭಗವದ್ಗೀತೆ ನಮ್ಮ ಮನಸ್ಸು ಮೌಢ್ಯತೆಯಿಂದ ಇರಲು ಕೊಡದೇ ಚಿಂತನೆಗಳಿಂದ ತುಂಬುವಂತೆ ಮಾಡುತ್ತದೆ. ಪ್ರಶ್ನೆ ಮಾಡಲು ನಮಗೆ ಪ್ರೇರೇಪಣೆ ನೀಡುತ್ತದೆ. ಭಗವದ್ಗೀತೆಯ ಪ್ರತಿ ಸಾಲುಗಳೂ ನಮ್ಮ ಮನಸ್ಸನ್ನು ತೆರೆದಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ. ಸ್ವಾಮಿ ಚಿದ್ಭಾವನಾನಂದರ ರಚನೆಯ ಭಗವದ್ಗೀತೆಯ ಇ- ಆವೃತ್ತಿಯನ್ನು ಉದ್ಘಾಟಿಸಿದ ಅವರು, ಆಧುನಿಕ ಜಗತ್ತಿನಲ್ಲಿ ಭಗವದ್ಗೀತೆಯ ಅನಿವಾರ್ಯತೆಯನ್ನು ಉಲ್ಲೇಖಿಸಿದರು.

ಭಗವದ್ಗೀತೆಯನ್ನು ಓದಿ ಅಧ್ಯಯನ ಮಾಡಿ ಪ್ರೇರಣೆ ಹೊಂದಿರುವವರು ತಮ್ಮ ಬದುಕಿನಲ್ಲಿ ಸಹಾನುಭೂತಿ ಹೊಂದಿರುತ್ತಾರೆ. ಅವರು ಮನೋಧರ್ಮದಲ್ಲಿ ಪ್ರಜಾಪ್ರಭುತ್ವವಾದಿ ಅಂಶಗಳನ್ನು ಅನುಸರಿಸುತ್ತಾರೆ. ಇತ್ತೀಚೆಗೆ ಜಗತ್ತಿಗೆ ಅಗತ್ಯವಿದ್ದ ಕೊವಿಡ್  ಔಷಧವನ್ನು ಭಾರತದಿಂದ ಹಲವು ದೇಶಗಳಿಗೆ ರವಾನೆ ಮಾಡಲಾಗಿದೆ. ಇಂತಹ ಭಾರತದಲ್ಲೇ ತಯಾರಿಸಿದ ಔಷಧಗಳನ್ನು ವಿಶ್ವಕ್ಕೆ ನೀಡುವ ಉದಾರ ಬುದ್ಧಿಗೆ, ಭಗವದ್ಗೀತೆ ಕಲಿಸಿದ ಮೌಲ್ಯಗಳೇ ಕಾರಣ. ಈ ಉದಾತ್ತ ಕಾವ್ಯ ನಮಗೆ ಜೀವನ ಪಾಠಗಳನ್ನು ಕಲಿಸುತ್ತದೆ ಎಂದು ವ್ಯಾಖ್ಯಾನಿಸಿದರು.

ಇತ್ತೀಚಿಗಷ್ಟೇ ಭಗವದ್ಗೀತೆಯ 11 ಸಂಪುಟ ಬಿಡುಗಡೆ ಮಾಡಿದ್ದ ಪ್ರಧಾನಿ
ದೇಶದ 21 ಘನ ವಿದ್ವಾಂಸರು ಬರೆದಿರುವ ಭಗವದ್ಗೀತೆಯ ವ್ಯಾಖ್ಯಾನದ ಹಸ್ತಪ್ರತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಮಾರ್ಚ್ 9) ನಗರದ ಲೋಕ್ ಕಲ್ಯಾಣ್ ಮಾರ್ಗದಲ್ಲಿ ಬಿಡುಗಡೆಗೊಳಿಸಿದ್ದರು. 11 ಸಂಪುಟವನ್ನು ಒಳಗೊಂಡಿರುವ ಭಗವದ್ಗೀತೆಯ ಈ ಹಸ್ತಪ್ರತಿಯು ಶ್ಲೋಕಾರ್ಥ ಸಹಿತವಾಗಿದೆ. ಈ ಕೃತಿಯ ಬಿಡುಗಡೆ ವೇಳೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕಾಂಗ್ರೆಸ್ ನಾಯಕ ಹಾಗೂ ಡಾ. ಕರಣ್ ಸಿಂಗ್ ಧರ್ಮಾರ್ಥ ಟ್ರಸ್ಟ್​ನ ಮುಖ್ಯಸ್ಥರೂ ಆಗಿರುವ ಡಾ. ಕರಣ್ ಸಿಂಗ್ ಹಾಜರಿದ್ದರು.

ಭಗವದ್ಗೀತೆಯು ಇಡೀ ಜಗತ್ತಿನದು. ಗೀತೆಯನ್ನು ವಿಶ್ವದ ಹಲವು ಭಾಷೆಗಳಿಗೆ ಭಾಷಾಂತರಿಸಲಾಗಿದೆ. ವಿವಿಧ ದೇಶಗಳು ಭಗವದ್ಗೀತೆಯ ಮೇಲೆ ಅಧ್ಯಯನ ಕೈಗೊಂಡಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಭಾರತೀಯ ಸಂತ ಹಾಗೂ ತತ್ವಜ್ಞಾನಿಗಳಾಗಿದ್ದ ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಸ್ವಾಮಿ ವಿವೇಕಾನಂದರಂಥವರು ಹೇಗೆ ಭಗವದ್ಗೀತೆಯನ್ನು ಗ್ರಹಿಸಿದರು. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಮತ್ತು ಬಾಲಗಂಗಾಧರ ತಿಲಕರು ಗೀತೆಯನ್ನು ಹೇಗೆ ಕಂಡರು ಎಂಬ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದರು.

ಭಾರತವನ್ನು ಏಕತೆ ಎಂಬ ಒಂದು ದಾರದ ಮೂಲಕ ಬಂಧಿಸಿದ್ದ ಆದಿ ಶಂಕರಾಚಾರ್ಯರು ಗೀತೆಯನ್ನು ಆಧ್ಯಾತ್ಮಿಕ ಪ್ರಜ್ಞೆಯಾಗಿ ಕಂಡರು. ರಾಮಾನುಜಾಚಾರ್ಯರು ಗೀತೆಯನ್ನು ಧಾರ್ಮಿಕ ಜ್ಞಾನಭಂಡಾರವಾಗಿ ಮುಂದಿಟ್ಟರು. ಸ್ವಾಮಿ ವಿವೇಕಾನಂದರು ಭಗವದ್ಗೀತೆಯನ್ನು ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲವಾಗಿ ನೋಡಿದರು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು.

ಭಾರತೀಯ ಯುವಸಮುದಾಯವು ಭಗವದ್ಗೀತೆಯಂಥ ಕೃತಿಗಳನ್ನು ಓದಬೇಕು. ಜನರು ಅದನ್ನು ಹೊಸ ತಲೆಮಾರಿಗೆ ಪರಿಚಯಿಸಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಗೀತೆ ಹೇಗೆ ಶಕ್ತಿ ತುಂಬಿತು. ಆಧ್ಯಾತ್ಮಿಕ ಬಂಧನದಲ್ಲಿ ಗೀತೆ ದೇಶವನ್ನು ಹೇಗೆ ಒಟ್ಟಾಗಿರಿಸಿತು ಎಂದು ನಾವು ತಿಳಿಯಬೇಕು. ಅಧ್ಯಯನ ನಡೆಸಬೇಕು, ಬರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಇದನ್ನೂ ಓದಿ: ಅರ್ಹರು ಕೊವಿಡ್-19 ಲಸಿಕೆ ಪಡೆಯುವಂತೆ ಸಹಕರಿಸಿ: ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ