ಮಾರ್ಚ್ 27ರಿಂದ ಜರುಗಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಳಗ್ಗೆ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಚಹಾ ತೋಟದ ಕಾರ್ಮಿಕರ ಜತೆ ಚಹಾ ಗಿಡಗಳ ಕುಡಿಗಳನ್ನು ಬಿಡಿಸಿದ್ದಾರೆ.
ಚಹಾ ತೋಟದಲ್ಲಿ ಚಹಾ ಗಿಡಗಳ ಕುಡಿಗಳನ್ನು ಬಿಡಿಸುವ ಕೆಲಸ ನಿರ್ವಹಿಸುವ ಮಹಿಳೆಯರ ಜತೆ ಸಂವಾದ ನಡೆಸುತ್ತ ಚಹಾ ಗಿಡಗಳ ಕುಡಿಗಳನ್ನು ಬಿಡಿಸಿದ ಅವರು ನಂತರ ಚಹಾ ಸವಿದಿದ್ದಾರೆ.
ಟೀ ಪ್ಲಾಂಟೇಶನ್ ಕಾರ್ಮಿಕರ ಜೀವನ ಕ್ರಮವನ್ನು ಪ್ರಿಯಾಂಕಾ ಗಾಂಧಿ ವಿವರವಾಗಿ ತಿಳಿದುಕೊಂಡಿದ್ದಾರೆ.
ನೆಲದ ಮೇಲೆ ಕುಳಿತು ಟೀ ಕಾರ್ಮಿಕರ ಸುಖ ದುಃಖಗಳನ್ನು ಆಲಿಸಿದ್ದಾರೆ ಕಾಂಗ್ರೆಸ್ ವರಿಷ್ಠೆ.
ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯರ ಜತೆ ನಿನ್ನೆಯಿಂದಲೂ ಬೆರೆಯುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಿನ್ನೆ ಅಸ್ಸಾಂನ ಸಾಂಪ್ರದಾಯಿಕ ನೃತ್ಯ ಝುಮುರ್ಗೆ ಹೆಜ್ಜೆ ಹಾಕಿದ್ದರು.
ಇಂದು ಸಹ ಚಹಾ ತೋಟದ ಮಹಿಳಾ ಕಾರ್ಮಿಕರ ಜತರೆ ಸಾಂಪ್ರದಾಯಿಕವಾಗಿ ಹೆಜ್ಜೆ ಹಾಕಿದ ಅವರು, ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರ ಶ್ರಮವನ್ನು ಶ್ಲಾಘಿಸಿದ್ದಾರೆ.
ಚಹಾ ಗಿಡಗಳ ಕುಡಿಗಳನ್ನು ಸ್ವತಃ ಬಿಡಿಸಲು ಮುಂದಾದ ಅವರು, ಕೆಲಸದ ಜವಾಬ್ದಾರಿಗಳನ್ನು ತಿಳಿದುಕೊಂಡಿದ್ದಾರೆ.
‘ಚಹಾ ತೋಟದ ಕಾರ್ಮಿಕರು ಸರಳತೆ ಮತ್ತು ಸತ್ಯದ ಪ್ರತಿಪಾದಕರು. ಅವರು ಪಡೆಯಬೇಕಾದ ಹಕ್ಕುಗಳಿಗಾಗಿ ನಾನು ಧ್ವನಿ ಎತ್ತುತ್ತೇನೆ. ಅವರ ಪರವಾಗಿ ಹೋರಾಡುತ್ತೇನೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಅಸ್ಸಾಂಗೆ ಪ್ರಚಾರ ನಿಮಿತ್ತ ಆಗಮಿಸಿದ್ದ ಅವರಿಗೆ ಭವ್ಯ ಸ್ವಾಗತ ದೊರೆತಿತ್ತು.
ಟೀ ಕಾರ್ಮಿಕರ ಮನೆಗೆ ಬೇಟಿ ನೀಡಿದ ಅವರು, ಕಾರ್ಮಿಕ ಜೀವನಕ್ರಮವನ್ನು ಅವಲೋಕಿಸಿದ್ದಾರೆ. ಟೀ ಕಾರ್ಮಿಕರ ಅಭಿವೃದ್ಧಿಗಾಗಿ ಧ್ವನಿ ಎತ್ತುವುದಾಗಿ ಅವರು ಹೇಳಿದ್ದಾರೆ.