ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿ ಸಭೆಯಿಂದ ಹೊರನಡೆದ ರಾಹುಲ್ ಗಾಂಧಿ

ಸಮಿತಿ ಸಭೆಯಲ್ಲಿ ಸಮವಸ್ತ್ರದ ಬಗ್ಗೆ ಚರ್ಚೆ ನಡೆಸುವಾಗ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ, ಸಮಿತಿ ಸದಸ್ಯರು ಈ ರೀತಿಯ ವಿಷಯಗಳನ್ನು ಚರ್ಚಿಸಿ ಹಿರಿಯ ಅಧಿಕಾರಿಗಳ ಸಮಯ ವ್ಯರ್ಥ ಮಾಡಬಾರದು. ನೈಜ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಮೊದಲಾದ ಗಂಭೀರ ವಿಷಯಗಳನ್ನು ಸಮಿತಿ ಸದಸ್ಯರು ಚರ್ಚಿಸಬೇಕು ಎಂದು ಹೇಳಿದ್ದಾರೆ.

ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿ ಸಭೆಯಿಂದ ಹೊರನಡೆದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated By: ಸಾಧು ಶ್ರೀನಾಥ್​

Updated on: Dec 17, 2020 | 12:08 PM

ನವದೆಹಲಿ: ರಾಷ್ಟ್ರೀಯ ಭದ್ರತೆ ವಿಷಯವನ್ನು ಚರ್ಚಿಸುವ ಬದಲು ಸಶಸ್ತ್ರ ಪಡೆಗಳ ಸಮವಸ್ತ್ರ ಮತ್ತು ಶ್ರೇಣಿ ಬಗ್ಗೆ ಚರ್ಚಿಸಿ ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿ ಸಭೆಯಿಂದ ಹೊರನಡೆದಿದ್ದಾರೆ.

ಬುಧವಾರ ಈ ಸಭೆ ನಡೆದಿದ್ದು, ರಾಹುಲ್ ಜತೆಗೆ ಸಮಿತಿಯಲ್ಲಿದ್ದ ಇಬ್ಬರು ಕಾಂಗ್ರೆಸ್ ಸದಸ್ಯರು ಹೊರ ನಡೆದಿದ್ದಾರೆ. ಸಭೆಯಲ್ಲಿ ಯಾಕೆ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು.

ಸಮಿತಿ ಸಭೆಯಲ್ಲಿ ಸಮವಸ್ತ್ರದ ಬಗ್ಗೆ ಚರ್ಚೆ ನಡೆಸುವಾಗ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ, ಸಮಿತಿ ಸದಸ್ಯರು ಈ ರೀತಿಯ ವಿಷಯಗಳನ್ನು ಚರ್ಚಿಸಿ ಹಿರಿಯ ಅಧಿಕಾರಿಗಳ ಸಮಯ ವ್ಯರ್ಥ ಮಾಡಬಾರದು. ನೈಜ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಮೊದಲಾದ ಗಂಭೀರ ವಿಷಯಗಳನ್ನು ಸಮಿತಿ ಸದಸ್ಯರು ಚರ್ಚಿಸಬೇಕು ಎಂದು ಹೇಳಿದ್ದಾರೆ.

ಸಮಿತಿ ಸಭೆಯ ಅಜೆಂಡಾ ರಕ್ಷಣಾ ಪಡೆಯಲ್ಲಿನ ಶ್ರೇಣಿ ವ್ಯವಸ್ಥೆ, ಸಮವಸ್ತ್ರ, ಸ್ಟಾರ್ ಮತ್ತು ಬ್ಯಾಡ್ಜ್ ಆಗಿತ್ತು. ಈ ಬಗ್ಗೆ ರಕ್ಷಣಾ ಖಾತೆ ಸಚಿವಾಲಯದ ಪ್ರತಿನಿಧಿಗಳು ಸಭೆಯಲ್ಲಿ ವಿವರಣೆ ನೀಡಿದ್ದರು. ಈ ವೇಳೆ ರಕ್ಷಣಾ ಪಡೆಯ ಸಮವಸ್ತ್ರ ಮತ್ತು ಬ್ಯಾಡ್ಜ್ ಗೆ ಅದರದ್ದೇ ಆದ ಇತಿಹಾಸವಿದೆ ಎಂದು ಹೇಳಿ ರಾಹುಲ್ ಮಧ್ಯ ಪ್ರವೇಶಿಸಿದ್ದಾರೆ. ಸಮಿತಿ ಅಧ್ಯಕ್ಷ ಜುವಾಲ್ ಓರಾಮ್ Jual Oram ಮಾತಿಗೆ ತಡೆಯೊಡ್ಡಿದಾಗ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿ ರಾಹುಲ್ ಸಭೆಯಿಂದ ಹೊರನಡೆದಿದ್ದಾರೆ.

ರಾಹುಲ್ ಜತೆ ಕಾಂಗ್ರೆಸ್ ಸದಸ್ಯರಾದ ರಾಜೀವ್ ಸತವ್ ಮತ್ತು ಅನುಮುಲ ರೇವಂತ್ ರೆಡ್ಡಿ ಹೊರನಡೆದಿದ್ದು, ಬಿಎಸ್​ಪಿಯ ಡ್ಯಾನಿಷ್ ಅಲಿ ಮತ್ತು ಶಿವಸೇನಾದ ಸಂಜಯ್ ರಾವುತ್, ರಾಹುಲ್ ನಡೆಗೆ ಬೆಂಬಲ ಸೂಚಿಸಿದ್ದಾರೆ.

ರೈತರ ಗಳಿಕೆ ದುಪ್ಪಟ್ಟು ಅಲ್ಲ; ಅರ್ಧದಷ್ಟು ಇಳಿಕೆ! ಇದು ‘ಸೂಟ್ ಬೂಟ್ ಕೀ ಸರ್ಕಾರ್’ ಕೊಡುಗೆ ಎಂದ ರಾಹುಲ್ ಗಾಂಧಿ