Watch: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಸೀನರಾಗಿದ್ದ ವೇದಿಕೆಯಲ್ಲೇ ರಾಜಸ್ಥಾನ ವಿವಿ ಅಧ್ಯಕ್ಷರ ಮೇಲೆ ಹಲ್ಲೆ

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿದ್ಯಾರ್ಥಿ ಸಂಘದ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಇವರೆಲ್ಲರ ಮುಂದೆಯೇ ಚೌಧರಿ ಮೇಲೆ ಹಲ್ಲೆ ನಡೆದಿದೆ

Watch: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಸೀನರಾಗಿದ್ದ ವೇದಿಕೆಯಲ್ಲೇ ರಾಜಸ್ಥಾನ ವಿವಿ ಅಧ್ಯಕ್ಷರ ಮೇಲೆ ಹಲ್ಲೆ
ರಾಜಸ್ಥಾನ ವಿವಿ ಅಧ್ಯಕ್ಷರ ಮೇಲೆ ಹಲ್ಲೆ
Edited By: ರಶ್ಮಿ ಕಲ್ಲಕಟ್ಟ

Updated on: Jan 23, 2023 | 6:33 PM

ಜೈಪುರದ (Jaipur) ಮಹಾರಾಣಿ ಕಾಲೇಜಿನಲ್ಲಿ (Maharani College) ರಾಜಸ್ಥಾನ ವಿಶ್ವವಿದ್ಯಾನಿಲಯದ (Rajasthan University) ಅಧ್ಯಕ್ಷ ನಿರ್ಮಲ್ ಚೌಧರಿ ಅವರ ಮೇಲೆ  ವೇದಿಕೆಯಲ್ಲೇ ಹಲ್ಲೆ ನಡೆದಿದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿದ್ಯಾರ್ಥಿ ಸಂಘದ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇವರೆಲ್ಲರ ಮುಂದೆಯೇ ಚೌಧರಿ ಮೇಲೆ ಹಲ್ಲೆ ನಡೆದಿದೆ. ಈ ಹೊತ್ತಲ್ಲಿ ಪೊಲೀಸರು ಕೇಂದ್ರ ಸಚಿವ ಶೇಖಾವತ್ ಅವರನ್ನು ಪ್ರಧಾನ ಕೊಠಡಿಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.


ಅಲ್ಲಿ ನಡೆದಿದ್ದೇನು?

ಝೀ ರಾಜಸ್ಥಾನ್ ಸುದ್ದಿ ಪ್ರಕಾರ, ಅದು ಮಹಾರಾಣಿ ಕಾಲೇಜಿನ ವಿದ್ಯಾರ್ಥಿ ಸಂಘದ ಕಚೇರಿಯ ಉದ್ಘಾಟನಾ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದ ಮಧ್ಯದಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿರ್ಮಲ್ ಚೌಧರಿ ಬಂದಿದ್ದಾರೆ. ಬಂದವರೇ ತಮ್ಮ ಬೆಂಬಲಿಗರೊಂದಿಗೆ ವೇದಿಕೆ ಏರಿದ್ದಾರೆ. ಆಗ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾಷಣ ನಡೆಯುತ್ತಿತ್ತು. ಶೇಖಾವತ್ ಭಾಷಣದ ನಡುವೆಯೇ ಚೌಧರಿ ತಮ್ಮ ಬೆಂಬಲಿಗರೊಂದಿಗೆ ವೇದಿಕೆ ಏರಿದ್ದಾರೆ. ಈ ಹೊತ್ತಲ್ಲಿ ಅವರ ಬೆಂಬಲಿಗರು ವೇದಿಕೆಯಲ್ಲಿದ್ದ ಕುರ್ಚಿಗಳನ್ನು ಒಡೆಯಲು ಆರಂಭಿಸಿದರು. ಇನ್ನು ಕೆಲವರು ಹೂವಿನ ಹಾರಗಳನ್ನು ಕಿತ್ತು ಹಾಕಿದರು. ಭದ್ರತೆಯ ದೃಷ್ಟಿಯಿಂದ ಪೊಲೀಸರು ಶೇಖಾವತ್ ಅವರನ್ನು ಪ್ರಿನ್ಸಿಪಾಲ್ ಕೊಠಡಿಗೆ ಕರೆದೊಯ್ದರು. ನಿರ್ಮಲ್ ಚೌಧರಿ ಬಲವಂತವಾಗಿ ಸೌಂಡ್ ಸಿಸ್ಟಮ್ ಆರಂಭಿಸಿ ಭಾಷಣ ಮಾಡಿದರು.

ನಾನು ಯಾವುದೇ ತಪ್ಪು ಮಾಡಿಲ್ಲ: ನಿರ್ಮಲ್ ಚೌಧರಿ

ಕ್ಯಾಂಪಸ್ ನಲ್ಲಿ ಗದ್ದಲವುಂಟಾಗುತ್ತಿದ್ದಂತೆ ಗಜೇಂದ್ರ ಸಿಂಗ್ ಶೇಖಾವತ್ ಕಾಲೇಜು ಕ್ಯಾಂಪಸ್ಸಿನಿಂದ ಹೊರಬಂದರು. ಬಳಿಕ ಎಬಿವಿಪಿ ಕಾರ್ಯಕರ್ತರು ಇಲ್ಲಿಗೆ ಆಗಮಿಸಿದರು. ಎಬಿವಿಪಿ ರಾಷ್ಟ್ರೀಯ ಸಚಿವ ಹೋಶಿಯಾರ್ ಮೀಣಾ ಆಗಮನದ ನಂತರ ಮತ್ತೆ ಗದ್ದಲ ಶುರುವಾಗಿದೆ. ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಮಹಾರಾಣಿ ಕಾಲೇಜಿನಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ ನಿರ್ಮಲ್ ಚೌಧರಿ ನಾನು ವೇದಿಕೆಗೆ ಬಂದಾಗ ಯಾವುದೋ ಸಮಾಜಘಾತುಕರು ಬಂದು ನನ್ನನ್ನು ತಳ್ಳಿದ್ದಾರೆ. ಯಾರೋ ವಿಶ್ವವಿದ್ಯಾಲಯದ ಪ್ರತಿನಿಧಿ ಎಂಬ ಮಾತು ಕೇಳಿ ಬರುತ್ತಿದೆ. ನನ್ನನ್ನು ತಳ್ಳಿದವರು ಯಾರು ಎಂದು ನೋಡಲಾಗಲಿಲ್ಲ. ಇಂತಹ ಗೂಂಡಾಗಳ ವಿರುದ್ಧ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಈ ಘಟನೆ ಬಗ್ಗೆ ಮಾತನಾಡಿದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಾನಸಿ ವರ್ಮಾ ಕೆಲವರಿಗೆ ಪರಸ್ಪರ ಕಲಹವಿದ್ದರೆ ಅದನ್ನು ಅವರವರ ಮಟ್ಟದಲ್ಲಿ ಬಗೆಹರಿಸಿಕೊಳ್ಳಬೇಕು. ಬೇರೊಬ್ಬರ ಕಾರ್ಯಕ್ರಮವನ್ನು ಹಾಳು ಮಾಡಬೇಡಿ. ಯಾರದೋ ಶ್ರಮಕ್ಕೆ ನೀರು ಹಾಕುವುದು ಸರಿಯಲ್ಲ. ಎಷ್ಟೋ ಕಾಲೇಜು ಹುಡುಗಿಯರು ಈ ಕಾರ್ಯಕ್ರಮಕ್ಕೆ ಶ್ರಮಿಸಿದ್ದರು. ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಗಲಾಟೆ ನಡೆದರೆ ಹೇಗೆ ಎಂದು ಮಾನಸಿ ವರ್ಮಾ ಹೇಳಿದ್ದಾರೆ. ಹಾಗಾಗಿ ಇದು ಮಹಿಳೆಯರ ಸುರಕ್ಷತೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿತ್ತು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Mon, 23 January 23

Web contact

TV9 Kannada

Read More
Follow Us