AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನಲ್ಲಿ ಪಟ್ಟಿನ ಪ್ರವೇಶಂ ಆಚರಣೆ ನಿಷೇಧ; ಆದೇಶ ವಾಪಸ್ ಪಡೆಯದಿದ್ದರೆ ನಾವೇ ಕಾರ್ಯಕ್ರಮ ನಡೆಸುತ್ತೇವೆ ಎಂದ ಕೆ.ಅಣ್ಣಾಮಲೈ

ಮಧುರೈ ಅಧೀನಂನ 293ನೇ ಪೀಠಾಧಿಪತಿಯಾಗಿರುವ ಹರಿಹರ ಶ್ರೀ ಜ್ಞಾನಸಂಬಂಧ ದೇಶಿಕ ಸ್ವಾಮಿಗಳು ಪ್ರತಿಕ್ರಿಯೆ ನೀಡಿ, ನಾವು ಈ ಆಚರಣೆಯನ್ನ ನಡೆಸಿಯೇ ತೀರುತ್ತೇವೆ. ಅದನ್ನು ಉಳಿಸಿಕೊಳ್ಳಲು ಪ್ರಾಣವನ್ನೂ ನೀಡಲು ಸಿದ್ಧ ಇದ್ದೇನೆ ಎಂದು ಹೇಳಿದ್ದಾರೆ. 

ತಮಿಳುನಾಡಿನಲ್ಲಿ ಪಟ್ಟಿನ ಪ್ರವೇಶಂ ಆಚರಣೆ ನಿಷೇಧ; ಆದೇಶ ವಾಪಸ್ ಪಡೆಯದಿದ್ದರೆ ನಾವೇ ಕಾರ್ಯಕ್ರಮ ನಡೆಸುತ್ತೇವೆ ಎಂದ ಕೆ.ಅಣ್ಣಾಮಲೈ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:May 05, 2022 | 12:48 PM

Share

ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿರುವ ಧರ್ಮಪುರಂ ಅಧೀನಂ ಮಠದಲ್ಲಿ ಶತಮಾನಗಳಿಂದ ನಡೆದುಕೊಂಡುಬಂದಿದ್ದ ಪಟ್ಟಿನ ಪ್ರವೇಶಂ ಆಚರಣೆಯನ್ನು ಈ ಬಾರಿ ನಿಷೇಧಿಸಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ. ಪಟ್ಟಿನ ಪ್ರವೇಶಂನಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಮತ್ತು ಕಾನೂನು-ಸುವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದೆ.  ಮೈಲಾಡುತುರೈ ಕಂದಾಯ ವಿಭಾಗಾಧಿಕಾರಿ ಜೆ ಬಾಲಾಜಿ ಅವರು ಈ ಆದೇಶ ಹೊರಡಿಸಿದ ಬೆನ್ನಲ್ಲೇ, ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಧರ್ಮಪುರಂ ಅಧೀನಂ ಎಂಬುದು ಶೈವ ಸನ್ಯಾಸಿಗಳ ಮಠವಾಗಿದ್ದು, ಸುಮಾರು 27 ಶಿವನ ದೇವಸ್ಥಾನಗಳು ಇದರ ನಿಯಂತ್ರಣದಲ್ಲಿವೆ. ಇಲ್ಲಿ ಪಟ್ಟಿನ ಪ್ರವೇಶಂ ಎಂಬುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಆಚರಣೆ. ಅಂದರೆ ಮಠದ ಮುಖ್ಯಸ್ಥರನ್ನು ಅಥವಾ ಪ್ರಧಾನ ಗುರುವನ್ನು ಪಲ್ಲಕ್ಕಿಯ ಮೇಲೆ ಕೂರಿಸಿಕೊಂಡು, ಆ ಪಲ್ಲಕ್ಕಿಯನ್ನು ಭಕ್ತರು ಹೊತ್ತು ಬರುವುದು. ಅಂದರೆ ಮಠದ ಮುಖ್ಯಗುರುವಾಗಿದ್ದವರು ಮೃತಪಟ್ಟಾಗ, ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ, ಒಂದೊಳ್ಳೆ ದಿನ ನೋಡಿ ಪಟ್ಟಾಧಿಕಾರ ಮಾಡಲಾಗುತ್ತದೆ. ಈ ಪಟ್ಟಾಧಿಕಾರದ ದಿನ ಪ್ರಧಾನ ಗುರುವನ್ನು ಬೆಳ್ಳಿಯ ಪಲ್ಲಕ್ಕಿಯ ಮೇಲೆ ಕೂರಿಸಿ, ಮಠಕ್ಕೆ ಕರೆದುಕೊಂಡು ಬರುವುದಕ್ಕೆ ಪಟ್ಟಿನ ಪ್ರವೇಶ ಎನ್ನಲಾಗುತ್ತದೆ.

ಧರ್ಮಪುರ ಅಧೀನಂ ಮಠದಲ್ಲಿ ಪೀಠಾಧಿಪತಿಗಳಾಗಿರುವ ಶ್ರೀಲಶ್ರೀ ಷಣ್ಮುಗ ದೇಶಿಕ ಜ್ಞಾನಸಂಬಂಧ ಪರಮಾಚಾರ್ಯ ಸ್ವಾಮಿಗಳು 2019ರ ಡಿಸೆಂಬರ್​ 13ರಂದು ಪಟ್ಟಾಧಿಕಾರ ಸ್ವೀಕರಿಸಿದ್ದರು. ಅವರ ಪೂರ್ವದಲ್ಲಿದ್ದ ಮಠಾಧಿಪತಿ ಶಿವೈಕ್ಯರಾದ ಬಳಿಕ ಇವರನ್ನು ಪಟ್ಟಿನ ಪ್ರವೇಶಂ ಮೆರವಣಿಗೆ ಮೂಲಕವೇ ಕರೆತರಲಾಗಿತ್ತು. ಹಾಗೇ, ಅದೇ ವರ್ಷ ಡಿಸೆಂಬರ್​ 24ರಂದು ಸಿರ್ಕಾಜಿ ಬಳಿಯಿರುವ ವೈತೀಶ್ವರನ್ ಕೋವಿಲ್ ಧರ್ಮಪುರಂ ಅಧೀನಂ ಶಾಖಾ ಮಠದಲ್ಲೂ ಅದೇ ಆಚರಣೆ ನಡೆದಿತ್ತು.  ಆದರೆ ಇನ್ನುಮುಂದೆ ಮಠದಲ್ಲಿ ಈ ಆಚರಣೆ ನಡೆಯುವಂತಿಲ್ಲ.

ಬಿಜೆಪಿಯಿಂದ ತೀವ್ರ ವಿರೋಧ: ತಮಿಳುನಾಡಿನಲ್ಲಿ ಧರ್ಮಪುರಂ ಅಧೀನಂನಲ್ಲಿ ಪಟ್ಟಿನ ಪ್ರವೇಶಂ ನಿಷೇಧಿಸಿದ್ದನ್ನು ಬಿಜೆಪಿ ಖಂಡಿಸಿದೆ. ಹೀಗೆ ಧಾರ್ಮಿಕ ಆಚರಣೆಯನ್ನು ನಿಷೇಧ ಮಾಡಿದ್ದರ ಹಿಂದೆ ಡಿಎಂಕೆ ಸರ್ಕಾರ ರಾಜಕೀಯ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಪ್ರತಿಕ್ರಿಯೆ ನೀಡಿ, ಈ ಹಿಂದೆ ಎಂ.ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವಿದ್ದಾಗ ಪಟ್ಟಿನ ಪ್ರವೇಶಂ ಆಚರಣೆ ಸರಾಗವಾಗಿಯೇ ನಡೆದಿದೆ. ಅವರೆಂದಿಗೂ ಅಂಥ ಸಮಾರಂಭವನ್ನು ನಿಷೇಧಿಸಿರಲಿಲ್ಲ. ಈಗಿನ ಸರ್ಕಾರವೂ ಕೂಡ ಅಧೀನಂ ಮಠಗಳ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಬಾರದು. ಹೇರಲಾದ ನಿಷೇಧವನ್ನು ಹಿಂಪಡೆಯಬೇಕು. ಹಾಗೊಮ್ಮೆ ಸರ್ಕಾರ ನಿಷೇಧವನ್ನು ಹಿಂಪಡೆಯದೆ ಇದ್ದಲ್ಲಿ, ಬಿಜೆಪಿಯೇ ಮುಂದೆ ನಿಂತು ಆಚರಣೆ ನಡೆಸುತ್ತದೆ. ನಾವು ಅದಕ್ಕೆ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಹಾಗೇ, ಮಧುರೈ ಅಧೀನಂನ 293ನೇ ಪೀಠಾಧಿಪತಿಯಾಗಿರುವ ಹರಿಹರ ಶ್ರೀ ಜ್ಞಾನಸಂಬಂಧ ದೇಶಿಕ ಸ್ವಾಮಿಗಳು ಪ್ರತಿಕ್ರಿಯೆ ನೀಡಿ, ನಾವು ಈ ಆಚರಣೆಯನ್ನ ನಡೆಸಿಯೇ ತೀರುತ್ತೇವೆ. ಅದನ್ನು ಉಳಿಸಿಕೊಳ್ಳಲು ಪ್ರಾಣವನ್ನೂ ನೀಡಲು ಸಿದ್ಧ ಇದ್ದೇನೆ ಎಂದು ಹೇಳಿದ್ದಾರೆ.  ಇನ್ನೂ ಕೆಲವು ಮಠಾಧೀಶರು, ರಾಜಕೀಯ ಮುಖಂಡರು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ: ಬಾರಿ ಗಾಳಿ, ಮಳೆಗೆ ಚಿಕ್ಕಮಗಳೂರಿನಲ್ಲಿ ಉರುಳಿತು ಬೃಹತ್ ಮರ, ವಿದ್ಯುತ್ ಕಂಬ! ಕೂದಳೆಲೆ ಅಂತರದಲ್ಲಿ ಕಾರಿನಲ್ಲಿದ್ದವರು ಪಾರು

Published On - 12:48 pm, Thu, 5 May 22