Tamilisai Soundararajan: ವೇದಿಕೆಯಲ್ಲಿ ಅಮಿತ್ ಶಾ ಗದರಿಸಿಲ್ಲ, ವೈರಲ್ ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಿದ ತಮಿಳುಸಾಯಿ ಸೌಂದರರಾಜನ್

ಅಮಿತ್ ಶಾ ಅವರು ತಮಿಳುಸಾಯಿ ಅವರನ್ನು ಗದರಿಸುವಂತೆ ತೋರುತ್ತಿರುವ ವಿಡಿಯೊ ವೈರಲ್ ಆದ ದಿನದ ನಂತರ ಸ್ಪಷ್ಟೀಕರಣ ಬಂದಿದೆ. ವಿಜಯವಾಡದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇದು ನಡೆದಿದ್ದು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಕೇಂದ್ರ ಸಚಿವರಾದ ನಡ್ಡಾ ಮತ್ತು ನಿತಿನ್ ಗಡ್ಕರಿ ಸಮೀಪದಲ್ಲಿ ಕುಳಿತಿದ್ದರು.

Tamilisai Soundararajan: ವೇದಿಕೆಯಲ್ಲಿ ಅಮಿತ್ ಶಾ ಗದರಿಸಿಲ್ಲ, ವೈರಲ್ ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಿದ ತಮಿಳುಸಾಯಿ ಸೌಂದರರಾಜನ್
ತಮಿಳುಸಾಯಿ ಸೌಂದರರಾಜನ್
ರಶ್ಮಿ ಕಲ್ಲಕಟ್ಟ

Updated on: Jun 14, 2024 | 12:31 PM

ಚೆನ್ನೈ ಜೂನ್ 14: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ರಾಜಕೀಯ ಮತ್ತು ಕ್ಷೇತ್ರ ಕಾರ್ಯಗಳ ಮೇಲೆ “ಅತ್ಯಂತ ಕಾಳಜಿಯಿಂದ” ತೀವ್ರವಾಗಿ ಗಮನಹರಿಸುವಂತೆ ಸಲಹೆ ನೀಡಿದ್ದಾರೆ ಎಂದು ತೆಲಂಗಾಣ (Telangana) ಮಾಜಿ ರಾಜ್ಯಪಾಲರು ಮತ್ತು ಹಿರಿಯ ಬಿಜೆಪಿ ನಾಯಕಿ ತಮಿಳುಸಾಯಿ ಸೌಂದರರಾಜನ್  (Tamilisai Soundararajan)ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಅಮಿತ್ ಶಾ ಅವರೊಂದಿಗಿನ ತನ್ನ ಮಾತುಕತೆಯ ವಿಡಿಯೊ ಬಗ್ಗೆ ಉಂಟಾದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ತಮಿಳುಸಾಯಿ,ಲೋಕಸಭಾ ಚುನಾವಣೆಯ ನಂತರ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ಶಾ ಅವರನ್ನು ಭೇಟಿಯಾಗಿದ್ದು ಎಂದು ಹೇಳಿದ್ದಾರೆ.

ಮತದಾನದ ನಂತರದ ಫಾಲೋ ಅಪ್ ಮತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೇಳಲು ಅವರು ನನ್ನನ್ನು ಕರೆದರು. ನಾನು ವಿವರಿಸುತ್ತಿದ್ದಂತೆ, ಸಮಯದ ಕೊರತೆಯಿಂದಾಗಿ, ಅತ್ಯಂತ ಕಾಳಜಿಯಿಂದ, ಅವರು ರಾಜಕೀಯ ಮತ್ತು ಕ್ಷೇತ್ರದ ಕೆಲಸವನ್ನು ತೀವ್ರವಾಗಿ ಕೈಗೊಳ್ಳಲು ಸಲಹೆ ನೀಡಿದರು, ಇದು ಭರವಸೆ ನೀಡುತ್ತದೆ ಎಂದು ತಮಿಳುಸಾಯಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮಿಳುಸಾಯಿ  ಎಕ್ಸ್ ಪೋಸ್ಟ್


ಅವರು ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಜೊತೆಗೆ ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಬಿಜೆಪಿ ಕಚೇರಿಗಳ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿದ್ದಾರೆ.

ಅಮಿತ್ ಶಾ ಅವರು ತಮಿಳುಸಾಯಿ ಅವರನ್ನು ಗದರಿಸುವಂತೆ ತೋರುತ್ತಿರುವ ವಿಡಿಯೊ ವೈರಲ್ ಆದ ದಿನದ ನಂತರ ಸ್ಪಷ್ಟೀಕರಣ ಬಂದಿದೆ. ವಿಜಯವಾಡದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇದು ನಡೆದಿದ್ದು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಕೇಂದ್ರ ಸಚಿವರಾದ ನಡ್ಡಾ ಮತ್ತು ನಿತಿನ್ ಗಡ್ಕರಿ ಸಮೀಪದಲ್ಲಿ ಕುಳಿತಿದ್ದರು.

ವಿಡಿಯೊದಲ್ಲಿ, ತಮಿಳುಸಾಯಿ ನಾಯ್ಡು ಮತ್ತು ಶಾ ಅವರನ್ನು ಸ್ವಾಗತಿಸಿ ನಡ್ಡಾ ಅವರ ಬಳಿಗೆ ಹೋದಾಗ  ಗೃಹಸಚಿವರು ಅವರನ್ನು ಕೈ ಸನ್ನೆಯೊಂದಿಗೆ ಹಿಂದಕ್ಕೆ ಕರೆದಿದ್ದಾರೆ. 11 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಅಮಿತ್ ಶಾ ಅವರು ಏನೋ ಗಂಭೀರವಾಗಿ ಮಾತನಾಡುತ್ತಾ, ಕೈ ತೋರಿಸಿ ಗದರಿಸುವಂತೆ ಕಾಣುತ್ತಿತ್ತು. ವೇದಿಕೆಯಲ್ಲೇ ಅಮಿತ್ ಶಾ ತಮಿಳುಸಾಯಿ ಅವರನ್ನು ಗದರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗಿತ್ತು.

ಎಐಎಡಿಎಂಕೆ-ಬಿಜೆಪಿ ಮೈತ್ರಿ ಕುರಿತು ತಮಿಳುಸಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ನಡುವೆ ನಡೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯದ ಮಧ್ಯೆ ತಮಿಳುಸಾಯಿ ಮತ್ತು ಶಾ ನಡುವೆ ಮಾತುಕತೆ ನಡೆದಿದೆ. ಅಣ್ಣಾಮಲೈ ಎಐಎಡಿಎಂಕೆ ಮೈತ್ರಿಕೂಟದ ವಿರುದ್ಧ ದನಿಯೆತ್ತಿದರೆ, ಎಐಎಡಿಎಂಕೆ-ಬಿಜೆಪಿ ಮೈತ್ರಿಯು ಹಾಗೇ ಉಳಿದಿದ್ದರೆ ಸಾರ್ವತ್ರಿಕ ಚುನಾವಣೆಗಳಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿತ್ತು ಎಂದು ಹೇಳಿದ ಮಾಜಿ ಎಐಎಡಿಎಂಕೆ ಸಚಿವ ಮತ್ತು ಪಕ್ಷದ ಕೊಯಮತ್ತೂರಿನ ಪ್ರಭಾವಿ ಎಸ್ ಪಿ ವೇಲುಮಣಿ ಅವರ ಅಭಿಪ್ರಾಯವನ್ನು ತಮಿಳುಸಾಯಿ ಅನುಮೋದಿಸಿದ್ದಾರೆ.

ಇದನ್ನೂ ಓದಿ: Mahila Shakti canteens: ರಾಜ್ಯದಾದ್ಯಂತ 150 ‘ಮಹಿಳಾ ಶಕ್ತಿ’ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಿದೆ ತೆಲಂಗಾಣ ಸರ್ಕಾರ 

ಏತನ್ಮಧ್ಯೆ, ತನ್ನ ಅಭಿಪ್ರಾಯಗಳನ್ನು ಈ ರೀತಿ ಸಾರ್ವಜನಿಕವಾಗಿ ಹೇಳಿದ್ದಕ್ಕೆ ತಮಿಳುಸಾಯಿಗೆ ಶಾ ಛೀಮಾರಿ ಹಾಕಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬಂದಿತ್ತು. ಅಣ್ಣಾಮಲೈ ಬೆಂಬಲಿಗರು ಈ ದೃಶ್ಯಗಳನ್ನು ತಮಿಳುಸಾಯಿ ಅವರಿಗೆ ‘ಸಾರ್ವಜನಿಕವಾಗಿ ಉಪದೇಶ’ ಎಂದು ವ್ಯಾಖ್ಯಾನಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us