‘ಅಧಿಕಾರ ಶಾಹಿಗಳು ನಮ್ಮ ಚಪ್ಪಲಿಯನ್ನೂ ತರುತ್ತಾರೆ‘-ಬಿಜೆಪಿ ನಾಯಕಿ ಉಮಾಭಾರತಿ ವಿವಾದಾತ್ಮಕ ಹೇಳಿಕೆ

ನಾನು ಕೇಂದ್ರದಲ್ಲಿ 11 ವರ್ಷಗಳ ಕಾಲ ಸಚಿವೆಯಾಗಿದ್ದೆ. ನಾನು ಮುಖ್ಯಮಂತ್ರಿಯೂ ಆಗಿದ್ದೆ. ಹಾಗಾಗಿ ಅಧಿಕಾರಶಾಹಿಗಳ ಬಗ್ಗೆ ನನಗೆ ಗೊತ್ತು ಎಂದು ಉಮಾಭಾರತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

‘ಅಧಿಕಾರ ಶಾಹಿಗಳು ನಮ್ಮ ಚಪ್ಪಲಿಯನ್ನೂ ತರುತ್ತಾರೆ‘-ಬಿಜೆಪಿ ನಾಯಕಿ ಉಮಾಭಾರತಿ ವಿವಾದಾತ್ಮಕ ಹೇಳಿಕೆ
ಉಮಾಭಾರತಿ
Updated By: Lakshmi Hegde

Updated on: Sep 20, 2021 | 5:19 PM

ಕೇಂದ್ರ ಮಾಜಿ ಸಚಿವೆ, ಬಿಜೆಪಿ ನಾಯಕಿ ಉಮಾ ಭಾರತಿ (Uma Bharti) ತಮ್ಮದೊಂದು ಹೇಳಿಕೆ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ಅಧಿಕಾರಶಾಹಿ ವರ್ಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಅಧಿಕಾರಿ ವರ್ಗಗಳು ರಾಜಕಾರಣಿಗಳ ಚಪ್ಪಲಿಗಳ್ನು ಬೇಕಾದರೂ ಎತ್ತುತ್ತಾರೆ. ಅವರಿಗೆ ರಾಜಕೀಯ ನಾಯಕರನ್ನು ನಿಯಂತ್ರಿಸುವ ಯಾವ ಅಧಿಕಾರವೂ ಇಲ್ಲ ಎಂದು ಹೇಳಿದ್ದಾರೆ. ಉಮಾಭಾರತಿಯವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟೆ ವಿವಾದ ಸೃಷ್ಟಿಯಾಗಿದೆ.  

ಅಧಿಕಾರಿ ಶಾಹಿಗಳೆಂದರೆ ಹೆಚ್ಚೇನೂ ಅಲ್ಲ. ಅವರು ಚಪ್ಪಲಿ ಎತ್ತುವವರು. ನಮ್ಮ ಚಪ್ಪಲಿಯನ್ನೂ ಎತ್ತುತ್ತಾರೆ. ನಾವೂ ಅದಕ್ಕೆ ಸಮ್ಮತಿಸುತ್ತೇವೆ ಎಂದು ಉಮಾಭಾರತಿ ಹೇಳಿದ್ದಾರೆ.  ಅಧಿಕಾರಶಾಹಿ ವರ್ಗ ನಾಯಕನನ್ನು ನಿಯಂತ್ರಿಸುತ್ತದೆ ಎಂದು ಅನ್ನಿಸುತ್ತದೆಯಾ? ಎಂದು ಮಾಧ್ಯಮ ಸಿಬ್ಬಂದಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ, ಹಾಗೆಲ್ಲ ಇರುವುದಿಲ್ಲ. ಮೊದಲು ನಾವು ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತೇವೆ. ನಂತರ ಅವರು ಫೈಲ್​ ತಯಾರಿಸುತ್ತಾರೆ. ಮತ್ತೆ ಅದನ್ನು ನಮ್ಮ ಬಳಿ ತರುತ್ತಾರೆ ಎಂದು ಹೇಳಿದ್ದಾರೆ.

ನಾನು ಕೇಂದ್ರದಲ್ಲಿ 11 ವರ್ಷಗಳ ಕಾಲ ಸಚಿವೆಯಾಗಿದ್ದೆ. ನಾನು ಮುಖ್ಯಮಂತ್ರಿಯೂ ಆಗಿದ್ದೆ. ಹಾಗಾಗಿ ಅಧಿಕಾರಶಾಹಿಗಳ ಬಗ್ಗೆ ನನಗೆ ಗೊತ್ತು. ಯಾವುದೇ ಕಡತ ತಯಾರಿಕೆ ಪ್ರಕ್ರಿಯೆ ಆಗುವುದಕ್ಕೂ ಮೊದಲೇ ನಮ್ಮೊಂದಿಗೆ ಚರ್ಚೆಯಾಗುತ್ತದೆ. ಹಾಗಾಗಿ ಅಧಿಕಾರಶಾಹಿ ವರ್ಗ ರಾಜಕೀಯ ನಾಯಕರನ್ನು ನಿಯಂತ್ರಿಸುತ್ತದೆ ಎಂಬುದು ಮೂರ್ಖತನ. ಅವರಿಗೆ ಅಂಥ ಅಧಿಕಾರವೇ ಇರುವುದಿಲ್ಲ. ಅವರಿಗೆ ಸಂಬಳ, ಹುದ್ದೆ, ಪ್ರಮೋಶನ್​, ಡಿಮೋಶನ್​ಗಳನ್ನು ಕೊಡುವವರೇ ನಾವು. ಅಧಿಕಾರಶಾಹಿಯನ್ನು ನೆಪವಾಗಿಟ್ಟುಕೊಂಡು ನಾವು ರಾಜಕೀಯ ಮಾಡುತ್ತೇವೆ ಎಂದು ಉಮಾಭಾರತಿ ತಿಳಿಸಿದ್ದಾರೆ.

ಕಾಂಗ್ರೆಸ್​ನಿಂದ ತಿರುಗೇಟು
ಉಮಾಭಾರತಿಯವರ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮಿಶ್ರಾ, ನಾಚಿಕೆಗೇಡಿನ ಮಾತು ಇದು ಎಂದಿದ್ದಾರೆ. ಅಧಿಕಾರಿಗಳ ವರ್ಗ ಇರುವುದು ರಾಜಕೀಯ ನಾಯಕರ ಚಪ್ಪಲಿಗಳನ್ನು ಒಯ್ಯಲಾ ಎಂಬುದನ್ನು ಮಧ್ಯಪ್ರದೇಶ ಮುಖ್ಯಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್​ ಕೊಹ್ಲಿ ಬಳಸಿದ ದುಬಾರಿ ಲ್ಯಾಂಬೋರ್ಗಿನಿ ಕಾರು ಮಾರಾಟಕ್ಕಿದೆ; ಇದರ ಬೆಲೆ ಎಷ್ಟು ಗೊತ್ತಾ?

‘2 ಬಾರಿ ರಾಜ್ಯಸಭಾ ಸದಸ್ಯನಾಗುವ ಚಾನ್ಸ್​​ ತಿರಸ್ಕರಿಸಿದ್ದೆ’; ತೆರಿಗೆ ವಂಚನೆ ಆರೋಪದ ಬಳಿಕ ಸೋನು ಸೂದ್​ ಹೇಳಿಕೆ

Published On - 5:05 pm, Mon, 20 September 21