ಗೃಹರಕ್ಷಕ ನೇಮಕಾತಿ ವೇಳೆ ಪ್ರಜ್ಞೆ ತಪ್ಪಿದ ಬಿಹಾರದ ಮಹಿಳೆ ಮೇಲೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ!

ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗಯಾದಲ್ಲಿ ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ಮೂರ್ಛೆ ಹೋದ ನಂತರ ಆ ಮಹಿಳೆಯನ್ನು ಆ್ಯಂಬುಲೆನ್ಸ್​​ನಲ್ಲಿ ಕರೆದುಕೊಂಡು ಹೋಗಲಾಯಿತು. ಆ್ಯಂಬುಲೆನ್ಸ್ ಒಳಗೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಶಾಕಿಂಗ್ ಘಟನೆ ನಡೆದಿದೆ. ಗಯಾ ಪೊಲೀಸರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸುವ ಮೂಲಕ ತ್ವರಿತ ಕ್ರಮ ಕೈಗೊಂಡಿದ್ದಾರೆ.

ಗೃಹರಕ್ಷಕ ನೇಮಕಾತಿ ವೇಳೆ ಪ್ರಜ್ಞೆ ತಪ್ಪಿದ ಬಿಹಾರದ ಮಹಿಳೆ ಮೇಲೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ!
Ambulance

Updated on: Jul 26, 2025 | 5:19 PM

ಪಾಟ್ನಾ, ಜುಲೈ 26: ಬಿಹಾರದ ಬೋಧ್ ಗಯಾದಲ್ಲಿ ಗೃಹರಕ್ಷಕ ನೇಮಕಾತಿಯ ಭಾಗವಾಗಿ ನಡೆದ ಓಟದ ಸಂದರ್ಭದಲ್ಲಿ 26 ವರ್ಷದ ಮಹಿಳಾ ಅಭ್ಯರ್ಥಿ ಮೂರ್ಛೆ ಹೋಗಿದ್ದರು. ಪ್ರಜ್ಞೆ ತಪ್ಪಿದ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆ್ಯಂಬುಲೆನ್ಸ್‌ನೊಳಗೆ (Ambulance) ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ (Sexual Harassment) ನಡೆಸಿದ ಆರೋಪದ ಮೇಲೆ ಚಾಲಕ ಮತ್ತು ತಂತ್ರಜ್ಞನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ್ಯಂಬುಲೆನ್ಸ್ ಚಲಾಯಿಸುತ್ತಿದ್ದ ಗಯಾದ ಉಟ್ರೆನ್ ಗ್ರಾಮದ ವಿನಯ್ ಕುಮಾರ್ ಮತ್ತು ನಳಂದ ಜಿಲ್ಲೆಯ ಚಂದನ್‌ಪುರ ಗ್ರಾಮದ ಅಜಿತ್ ಕುಮಾರ್ ಅವರನ್ನು ಆರೋಪಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಬೇಕಾಗುತ್ತದೆ ಎಂದು ಹೋಮ್ ಗಾರ್ಡ್ ನೇಮಕಾತಿ ಸ್ಥಳದಲ್ಲಿ ಆ್ಯಂಬುಲೆನ್ಸ್ ಅನ್ನು ನಿಲ್ಲಿಸಲಾಗಿತ್ತು. ನೇಮಕಾತಿಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರೂ ಆ್ಯಂಬುಲೆನ್ಸ್‌ನಲ್ಲಿ ಮಹಿಳಾ ಸಿಬ್ಬಂದಿ ಇರಲಿಲ್ಲ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಬೋಧ್ ಗಯಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 70(1)ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಇದನ್ನೂ ಓದಿ: 70,000 ಕೋಟಿ ರೂ. ಎಲ್ಲಿ ಹೋಯ್ತು? ಸಿಎಜಿ ವರದಿಯಲ್ಲಿ ಬಿಹಾರ ಸರ್ಕಾರದ ಅಕ್ರಮ ಬಯಲು

ಆ ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗಿದ್ದು, ಆಕೆಯನ್ನು ಅನುಗ್ರಹ ನಾರಾಯಣ್ ಮಗಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನಗರ ಪೊಲೀಸ್ ವರಿಷ್ಠಾಧಿಕಾರಿ ರಮಾನಂದ ಕುಮಾರ್ ಕೌಶಲ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಆನಂದ್ ಕುಮಾರ್ ಆದೇಶಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಸರ್ಕಾರವೇ 108 ಆ್ಯಂಬುಲೆನ್ಸ್ ಸರ್ವಿಸ್ ನೀಡುತ್ತದೆ: ಸಚಿವ ದಿನೇಶ್​ ಗುಂಡೂರಾವ್

ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕಳುಹಿಸಲಾಯಿತು ಮತ್ತು ಹತ್ತಿರದ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ಕುಮಾರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ