PM Modi in Assam: ಅಸ್ಸಾಂನಲ್ಲಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲಾಗುವುದು: ನರೇಂದ್ರ ಮೋದಿ

Narendra Modi in Assam: ಕೇಂದ್ರ ಮತ್ತು ಅಸ್ಸಾಂ ಸರ್ಕಾರ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಜಂಟಿಯಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

PM Modi in Assam: ಅಸ್ಸಾಂನಲ್ಲಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲಾಗುವುದು: ನರೇಂದ್ರ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ

Updated on: Feb 22, 2021 | 3:17 PM

ಧೆಮಾಜಿ: ಅಸ್ಸಾಂ ರಾಜ್ಯದ ಧೆಮಾಜಿ ಜಿಲ್ಲೆಯ ಸಿಲಾಪತ್ತರ್​ನಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಧ್ಯೇಯದಿಂದ ಕೆಲಸ ಮಾಡುತ್ತಿದೆ. ಇಲ್ಲಿನ ಬೋಗಿಬೀಲ್ ಸೇತುವೆ ಮತ್ತು ನಾರ್ಥ್ ಬ್ಯಾಂಕ್​ನಲ್ಲಿರುವ ಬ್ರಾಡ್ ಗೇಡ್ ರೈಲ್ವೆ ಹಳಿ ಕಾರ್ಯ ಪೂರ್ಣಗೊಂಡಿದ್ದು ನಮ್ಮ ಅಧಿಕಾರವಧಿಯಲ್ಲಿ ಎಂದಿದ್ದಾರೆ.

ಕೇಂದ್ರ ಮತ್ತು ಅಸ್ಸಾಂ ಸರ್ಕಾರ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಜಂಟಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಉತ್ತಮ ಸಾಮರ್ಥ್ಯವಿದ್ದರೂ ಈ ಹಿಂದಿನ ಸರ್ಕಾರಗಳು ಮಲತಾಯಿ ಧೋರಣೆ ತಾಳಿದ್ದವು. 2014ರವರೆಗೆ 100 ಕುಟುಂಬಗಳ ಪೈಕಿ ಕೇವಲ 55 ಕುಟುಂಬಗಳಿಗೆ ಮಾತ್ರ ಎಲ್​ಪಿಜಿ ಗ್ಯಾಸ್ ಸಂಪರ್ಕ ಇತ್ತು. ಅಸ್ಸಾಂನಲ್ಲಿ ಸಂಸ್ಕರಣಾ  ಘಟಕ ಇದ್ದರೂ ಎಲ್​ಪಿಜಿ ಗ್ಯಾಸ್ ಸಂಪರ್ಕ ಸಿಕ್ಕಿದ್ದು 40 ಕುಟುಂಬಗಳಿಗೆ ಮಾತ್ರ. ಉಜ್ವಲ ಯೋಜನೆಯಿಂದಾಗಿ ಇಂದು ಅಸ್ಸಾಂನಲ್ಲಿ ಬಹುತೇಕ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕ ಲಭಿಸಿದೆ ಎಂದು ಮೋದಿ ಹೇಳಿದ್ದಾರೆ.

 ಮೋದಿ ಭಾಷಣದ ಮುಖ್ಯಾಂಶಗಳು
ನಾರ್ಥ್ ಬ್ಯಾಂಕ್​ನಲ್ಲಿದ್ದ ಮೊದಲ ಎಂಜಿನಿಯರಿಂಗ್ ಕಾಲೇಜಾಗಿತ್ತು ಧೆಮೇಜಿ ಎಂಜಿನಿಯರಿಂಗ್ ಕಾಲೇಜು. ಇನ್ನು ಮೂರು ಕಾಲೇಜುಗಳನ್ನು ಸ್ಥಾಪಿಸಲಾಗುವುದು.ಅಸ್ಸಾಂ ಸರ್ಕಾರವು ಮಹಿಳಾ ಕಾಲೇಜು ಮತ್ತು ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸುವ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ.

ಅಸ್ಸಾಂ ಜನರಿಗೆ ಅಗತ್ಯವಾದುದು ಎಲ್ಲವುೂ ಅಸ್ಸಾಂನಲ್ಲಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಅಗತ್ಯವಿದೆ. ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇವೆ.

ಅಸ್ಸಾಂ ಚಹಾ, ಪ್ರವಾಸೋದ್ಯಮ, ಕೈಮಗ್ಗ, ಕರಕುಶಲ ಕಲೆಯಿಂದಾಗಿ ಅಸ್ಸಾಂ ಸ್ವಾವಲಂಬಿಯಾಗಿದೆ.
ಎಲ್ಲರ ಜತೆಗೆ ಎಲ್ಲರ ಅಭಿವೃದ್ಧಿ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಸರ್ಕಾರವು ಹಲವಾರು ಯೋಜನೆಗಳಿಗೆ ಚಾಲನೆ ನೀಡಿದೆ. ಬೋಗಿಬೀಲ್ ಸೇತುವೆ ಪೂರ್ಣವಾಗಿದೆ. ಬ್ರಹ್ಮಪುತ್ರ ನದಿಗಿರುವ ಕಲಿಯಾಭೊಮೊರಾ ಸೇತುವೆ ಅಸ್ಸಾಂನಗಿರುವ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕೆಲಸ ಪ್ರಗತಿಯಲ್ಲಿದೆ.

ಅಸ್ಸಾಂನ ಆರ್ಥಿಕ ವ್ಯವಸ್ಥೆ ಸುಧಾರಣೆಯಲ್ಲಿ ಚಹಾ ತೋಟ ಪ್ರಮುಖ ಸ್ಥಾನವಹಿಸಿದೆ. ದಶಕಗಳ ಕಾಲ ದೇಶವನ್ನಾಳಿದವರು ದಿಸ್ ಪುರ್ ದಿಲ್ಲಿಯಿಂದ ದೂರ ಎಂದು ಭಾವಿಸಿದ್ದರು. ಈ ಭಾವನೆಯಿಂದಲೇ ಅಸ್ಸಾಂಗೆ ತುಂಬಾ ನಷ್ಟವಾಗಿದ್ದು, ಆದರೆ ಈಗ ದಿಲ್ಲಿ ದೂರವಿಲ್ಲ, ದಿಲ್ಲಿ ನಿಮ್ಮ ಬಾಗಿಲಲ್ಲೇ ನಿಂತಿದೆ.

ಅಸ್ಸಾಂ ಸರ್ಕಾರದ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ 20ಎಂಜಿನಿಯರಿಂಗ್ ಕಾಲೇಜುಗಳಿವೆ. ಶೀಘ್ರದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಲಿದ್ದು ಇದರಿಂದ ಚಹಾ ತೋಟದ ಕಾರ್ಮಿಕರ ಮಕ್ಕಳಿಗೆ ಮತ್ತು ಬುಡಕಟ್ಟು ಜನಾಂಗಕ್ಕೆ ಪ್ರಯೋಜನವಾಗಲಿದೆ.

ಇಲ್ಲಿನ ರೈತರ ಸಾಮರ್ಥ್ಯ ಹೆಚ್ಚಿಸಲು, ಕೃಷಿಗಾಗಿರುವ ಸೌಕರ್ಯ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜತೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮೀನು ಸಾಕಣೆಯಲ್ಲಿ ತೊಡಗಿರುವವರಿಗೆ ₹20 ಸಾವಿರ ಕೋಟಿ ಅನುದಾನ ನೀಡಲಾಗಿದ್ದು , ಇದು ಜನರಿಗೆ ತಲುಪಬೇಕಿದೆ.

ಸರಿಯಾದ ನೀತಿ, ಸರಿಯಾದ ಉದ್ದೇಶವಿದ್ದರೆ ವಿಧಿಯೂ ಬದಲಾಗುತ್ತದೆ. ಇಂದು ದೇಶದಲ್ಲಿ ಅನಿಲ ಪೈಪ್​ಲೈನ್​ನ ನೆಟ್ವರ್ಕ್ ಸಿದ್ಧವಾಗುತ್ತಿದೆ. ದೇಶದ ಪ್ರತಿ ಗ್ರಾಮಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕ ಇದೆ. ಎಲ್ಲ ಮನೆಗಳಿಗೆ ನೀರು ತಲುಪಿಸಲು ಪೈಪ್ ಇದೆ. ಇದು ಭಾರತ ಮಾತೆಯ ಹೊಸ ಭಾಗ್ಯ ರೇಖೆ.

ಇಷ್ಟೊಂದು ಅಭಿವೃದ್ಧಿ ಯೋಜನೆಗಳಿಗೆ, ಆತ್ಮನಿರ್ಭರ್ ಅಸ್ಸಾಂ ಮಾಡಿದ್ದಕ್ಕೆ, ಭಾರತದ ನಿರ್ಮಾಣಕ್ಕಾಗಿ ಅಸ್ಸಾಂನ ಹಾರಕ್ಕಾಗಿ ನಾನು ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಮೋದಿ ಮಾತು ಮುಗಿಸಿದ್ದಾರೆ.

Published On - 1:28 pm, Mon, 22 February 21

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us