ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಕಲ್ಲು ತೂರಾಟ, ಹಿಂಸಾಚಾರ; ಅಮಿತ್​ ಶಾ ಮೊರೆ ಹೋದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು

ಇನ್ನು ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್​ ಶಾ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅದಾದ ಎರಡೇ ದಿನದಲ್ಲಿ ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ಗಲಾಟೆ ನಡೆಯುತ್ತಿದೆ.

ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಕಲ್ಲು ತೂರಾಟ, ಹಿಂಸಾಚಾರ; ಅಮಿತ್​ ಶಾ ಮೊರೆ ಹೋದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು
ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಸಂಘರ್ಷ
Edited By:

Updated on: Jul 26, 2021 | 7:46 PM

ಅಸ್ಸಾಂ(Assam)ನ ಭೂಮಿಯನ್ನು ಅತಿಕ್ರಮಣದಿಂದ ರಕ್ಷಿಸಲು ಲೈಲಾಪುರದಲ್ಲಿ ಬೀಡುಬಿಟ್ಟಿರುವ ಸರ್ಕಾರಿ ಅಧಿಕಾರಿಗಳ ಮೇಲೆ ಮಿಜೋರಾಂನ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ದಾಳಿ ಮಾಡಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ ಎಂದು ಅಸ್ಸಾಂ ಪೊಲಿಸರು ಹೇಳಿದ್ದಾರೆ. ಪೊಲೀಸ್​ ಸಿಬ್ಬಂದಿ ಹಾಗೂ ಹಲವು ಜನರ ಗುಂಪು ಸಂಘರ್ಷದಲ್ಲಿ ತೊಡಗಿರುವ ವಿಡಿಯೋವನ್ನು ಶೇರ್ ಮಾಡಿಕೊಂಡ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ(Zoramthanga), ಗೃಹ ಸಚಿವ ಅಮಿತ್​ ಶಾ (Amit Shah) ಅವರನ್ನು ಟ್ಯಾಗ್ ಮಾಡಿ, ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ. ಕೂಡಲೇ ಸಂಘರ್ಷ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೆ, ಇನ್ನೊಂದು ವಿಡಿಯೋವನ್ನು ಶೇರ್​ ಮಾಡಿ, ಈ ಮುಗ್ಧ ದಂಪತಿ ಕಾರಿನಲ್ಲಿ ಅವರ ಪಾಡಿಗೆ ಕಚಾರ್ ಮೂಲಕ ಮಿಜೋರಾಂಗೆ ವಾಪಸ್​ ಆಗುತ್ತಿದ್ದರು. ಅವರ ಮೇಲೆ ಗೂಂಡಾಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಾರುಗಳನ್ನೂ ಪುಡಿ ಮಾಡಲಾಗಿದೆ. ಇಂಥ ಹಿಂಸೆಯನ್ನು ನೀವೆಲ್ಲ ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಅಸ್ಸಾಂನ ಡಿಜಿಪಿ, ಕಚಾರ್​ ಪೊಲೀಸ್​ ಮತ್ತು ಡಿಸಿಯನ್ನು ಟ್ಯಾಗ್​ ಮಾಡಿದ್ದಾರೆ. ಮಿಜೋರಾಂ ಮುಖ್ಯಮಂತ್ರಿ ವಿಡಿಯೋ ಶೇರ್​ ಮಾಡುತ್ತಿದ್ದಂತೆ ಅಸ್ಸಾಂ ಪೊಲೀಸರು ಈ ರೀತಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೂ ಕೂಡ ಸಂಘರ್ಷ, ಗಲಭೆಯ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಟ್ಯಾಗ್​ ಮಾಡಿದ್ದಾರೆ. ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಗಲಭೆ ನಡೆಯುತ್ತಿದೆ. ದಯವಿಟ್ಟು ಗಮನಿಸಿ ಎಂದಿದ್ದಾರೆ. ಇನ್ನು ಮಿಜೋರಾಂ ಮುಖ್ಯಮಂತ್ರಿಯನ್ನು ಟ್ಯಾಗ್​ ಮಾಡಿರುವ ಅಸ್ಸಾಂ ಸಿಎಂ ಹೇಮಂತ್​ ಬಿಸ್ವಾ ಶರ್ಮಾ, ಕೊಲಾಸಿಬ್​ ಎಸ್​ಪಿಯನ್ನೇ ದೂರಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್​ ಶಾ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅದಾದ ಎರಡೇ ದಿನದಲ್ಲಿ ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ಗಲಾಟೆ ನಡೆಯುತ್ತಿದೆ. ಇದೀಗ ಮತ್ತೆ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹೇಳಿದ್ದಾರೆ. ಸದ್ಯ ವಿವಾದಿತ ಸ್ಥಳದಿಂದ ಮಿಜೋರಾಂ ಮತ್ತು ಅಸ್ಸಾಂ ಪೊಲೀಸರೂ ಹಿಂದೆ ಸರಿದಿದ್ದು, ಸಂಘರ್ಷ ನಿಂತಿದೆ ಎಂದು ಮೂಲಗಳು ತಿಳಿಸಿವೆ.

ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್​, ಕೊಲಾಸಿಬ್​ ಮತ್ತು ಮಾಮಿತ್​ಗಳು, ಅಸ್ಸಾಂನ ಕ್ಯಾಚರ್​, ಹೈಲಕಂಡಿ ಮತ್ತು ಕರಿಮಗಂಜ್​ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಅಂತರ ರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಎರಡೂ ರಾಜ್ಯಗಳೂ ಪರಸ್ಪರ ಭೂಮಿ ಅತಿಕ್ರಮಣದ ಆರೋಪ ಮಾಡಿಕೊಳ್ಳುತ್ತಿವೆ. ಅದರಲ್ಲೂ ಕಳೆದ ತಿಂಗಳು, ಮಿಜೋರಾಂನ ವೈರೆಂಗ್ಟೆ ಗಡಿಯಿಂದ 5 ಕಿಮೀ ದೂರದಲ್ಲಿರುವ ಐಟ್ಲಾಂಗ್​​ನ್ನು ವಶಪಡಿಸಿಕೊಂಡ ಬಳಿಕ ಗಲಾಟೆ ಇನ್ನಷ್ಟು ಅತಿರೇಕಕ್ಕೆ ಹೋಗಿದೆ ಎಂದು ಮಿಜೋರಾಂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: BS Yediyurappa Photos: ಧೀಮಂತ ನಾಯಕ ಬಿಎಸ್ ಯಡಿಯೂರಪ್ಪ ರಾಜಕೀಯ ಜೀವನದ ಚಿತ್ರನೋಟ

Stone pelting near Assam Mizoram border Amit Shah Spoke to Chief Ministers