TDP Manifesto: ಇಲ್ಲಿಯವರೆಗೆ ನನ್ನ ಮೃದುಭಾವ ಮಾತ್ರ ನೋಡಿದ್ದೀರಿ: ವೈಎಸ್​​ಆರ್​​ಸಿಪಿಗೆ ಚಂದ್ರಬಾಬು ನಾಯ್ಡು ಎಚ್ಚರಿಕೆ

ಪ್ರತಿ ಮನೆಗೂ ನಿರ್ದಿಷ್ಟ ಕಾಲಮಿತಿಯಲ್ಲಿ ಮನೆ ಬಾಗಿಲಿಗೆ ಕುಡಿಯುವ ನೀರು ದೊರೆಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಕುರಿತು ಮಾತನಾಡಿದ ಚಂದ್ರಬಾಬು ನಾಯ್ಡು, ಹಿಂದುಳಿದ ವರ್ಗದವರ ಮೇಲೆ ನಡೆಯುವ ದಾಳಿಯಿಂದ ರಕ್ಷಿಸಲು ವಿಶೇಷ ಕಾಯ್ದೆ ತರಲಾಗುವುದು ಎಂದರು.

TDP Manifesto: ಇಲ್ಲಿಯವರೆಗೆ ನನ್ನ ಮೃದುಭಾವ ಮಾತ್ರ ನೋಡಿದ್ದೀರಿ: ವೈಎಸ್​​ಆರ್​​ಸಿಪಿಗೆ ಚಂದ್ರಬಾಬು ನಾಯ್ಡು ಎಚ್ಚರಿಕೆ
ಟಿಡಿಪಿ ಪ್ರಣಾಳಿಕೆ ಬಿಡುಗಡೆ
ರಶ್ಮಿ ಕಲ್ಲಕಟ್ಟ

Updated on: May 29, 2023 | 12:38 PM

ಮಹಾನಾಡು ಕಾರ್ಯಕ್ರಮದ ಅಂತಿಮ ದಿನವಾದ ಭಾನುವಾರ (ಮೇ28) ತೆಲುಗು ದೇಶಂ ಪಕ್ಷ (TDP) ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಮಹಿಳೆಯರು, ರೈತರು ಮತ್ತು ನಿರುದ್ಯೋಗಿ ಯುವಕರಿಗೆ ಹಲವಾರು ಭರವಸೆಗಳನ್ನು ನೀಡಲಾಗಿದೆ.ಆಂಧ್ರಪ್ರದೇಶದ (Andhra  Pradesh) ರಾಜಮಹೇಂದ್ರವರಂನ ಹೊರವಲಯದಲ್ಲಿ 2 ದಿನಗಳ ಕಾಲ ನಡೆದ ಸಮಾವೇಶದಲ್ಲಿ ಟಿಡಿಪಿ ಈ ಘೋಷಣೆ ಮಾಡಿದೆ. ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು (Chandrababu Naidu), ಭವಿಷ್ಯತುಕು ಖಾತರಿ (ಭವಿಷ್ಯಕ್ಕಾಗಿ ಭರವಸೆ) , ‘ಮಹಾ ಶಕ್ತಿ’, ‘ತಲ್ಲಿಕಿ ವಂದನೆ’, ‘ಯುವಶಕ್ತಿ’, ‘ಅನ್ನದಾತ’, ಕುಡಿಯುವ ನೀರಿನ ಸೌಲಭ್ಯ, ಹಿಂದುಳಿದ ವರ್ಗಗಳಿಗಾಗಿ ಕಾಯ್ದೆ ಮತ್ತು ವಿಷನ್ 2047 ಸೇರಿದಂತೆ ಏಳು ಭರವಸೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಟಿಡಿಪಿ ಮುಖ್ಯಸ್ಥರು, ಅಧಿಕಾರಕ್ಕೆ ಬಂದರೆ 18-59 ವಯೋಮಾನದ ಮಹಿಳೆಯರಿಗೆ 1,500 ರೂ., ರೈತರಿಗೆ ವಾರ್ಷಿಕ 20,000 ರೂ. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ವಿಧಾನಸಭೆ ಚುನಾವಣೆಯ ಎರಡು ಭಾಗಗಳ ಪ್ರಣಾಳಿಕೆಯಲ್ಲಿ ಈ ಪ್ರಣಾಳಿಕೆ ಭಾಗ 1 ಆಗಿದ್ದು, ಇನ್ನರ್ಧವನ್ನು ದಸರಾ ವೇಳೆಗೆ ಅಂತಿಮಗೊಳಿಸಲಾಗುವುದು ಎಂದರು.

ತಲ್ಲಿಕಿ ವಂದನೆ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ತಾಯಿಗೆ ವಾರ್ಷಿಕ 15 ಸಾವಿರ ರೂ.ಗಳನ್ನು ಯಾವುದೇ ಷರತ್ತುಗಳಿಲ್ಲದೆ ನೀಡಲಾಗುವುದು. ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. APSRTC ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಜಾಗತಿಕ ಆರ್ಥಿಕತೆಗೆ ಸಂಪರ್ಕ ಕಲ್ಪಿಸುವ ಮೂಲಕ 20 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದು, ನಿರುದ್ಯೋಗಿ ಯುವಕರಿಗೆ 3,000 ರೂ. ನೀಡಲಾಗುವುದು.

ಪ್ರತಿ ಮನೆಗೂ ನಿರ್ದಿಷ್ಟ ಕಾಲಮಿತಿಯಲ್ಲಿ ಮನೆ ಬಾಗಿಲಿಗೆ ಕುಡಿಯುವ ನೀರು ದೊರೆಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಕುರಿತು ಮಾತನಾಡಿದ ಅವರು, ಹಿಂದುಳಿದ ವರ್ಗದವರ ಮೇಲೆ ನಡೆಯುವ ದಾಳಿಯಿಂದ ರಕ್ಷಿಸಲು ವಿಶೇಷ ಕಾಯ್ದೆ ತರಲಾಗುವುದು ಎಂದರು.

ಇದನ್ನೂ ಓದಿ: Narendra Modi: ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎರ್ಡೋಗನ್, ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ನೀವು ನನ್ನ ಮೃದು ಭಾವವನ್ನು ನೋಡಿದ್ದೀರಿ. ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ. ರಾಜಕೀಯ ರೌಡಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ. ರಾಜ್ಯದಲ್ಲಿ ಅಭಿವೃದ್ಧಿಯನ್ನು ಸ್ಥಗಿತಗೊಳಿಸಲು ಟಿಡಿಪಿ ಆರಂಭಿಸಿದ ಎಲ್ಲಾ ಯೋಜನೆಗಳನ್ನು ವೈಎಸ್‌ಆರ್‌ಸಿಪಿ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us