
ಕಾಮರೆಡ್ಡಿ, ಏಪ್ರಿಲ್ 27: ಮಾಂಸದಡುಗೆ ವಿಚಾರವಾಗಿ ಆರಂಭವಾದ ಜಗಳ ಕೊಲೆ(Murder)ಯಲ್ಲಿ ಅಂತ್ಯಗೊಂಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ.ಸಣ್ಣ ಕೋಪ ಮನುಷ್ಯನ ವಿವೇಚನೆಯನ್ನು ಹೇಗೆ ನಾಶಪಡಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಕೇವಲ ಮಾಂಸದ ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ದಂಪತಿ ನಡುವೆ ನಡೆದ ವಾಗ್ವಾದವು ಪತಿಯ ಸಾವಿನಲ್ಲಿ ಅಂತ್ಯವಾಗಿದೆ.
ಕೋದಂಡ ಶಿವಾಜಿ ಮತ್ತು ಲಕ್ಷ್ಮಿ ದಂಪತಿ ತಮ್ಮ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಈ ಕುಟುಂಬವು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿತ್ತು. ಹಣಕಾಸಿನ ತೊಂದರೆಯಿಂದಾಗಿ ದಂಪತಿಗಳ ನಡುವೆ ಪ್ರತಿದಿನ ಕಿತ್ತಾಟ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ರಾತ್ರಿ, ಶಿವಾಜಿ ಮನೆಯಲ್ಲಿ ಮಾಂಸಾಹಾರದ ಅಡುಗೆ ಮಾಡದಿರುವ ಬಗ್ಗೆ ಲಕ್ಷ್ಮಿಯನ್ನು ಪ್ರಶ್ನಿಸಿದ್ದಾರೆ. ಈಗಾಗಲೇ ಆರ್ಥಿಕ ಸಮಸ್ಯೆ ಮತ್ತು ಜೀವನಶೈಲಿಯ ಬಗ್ಗೆ ಬೇಸತ್ತಿದ್ದ ಲಕ್ಷ್ಮಿ ಮತ್ತು ಶಿವಾಜಿ ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪದ ಭರದಲ್ಲಿ ವಿವೇಚನೆ ಕಳೆದುಕೊಂಡ ಲಕ್ಷ್ಮಿ, ಮನೆಯಲ್ಲಿದ್ದ ಮಚ್ಚಿನಿಂದ ಪತಿ ಶಿವಾಜಿಯ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾಳೆ.
ಮತ್ತಷ್ಟು ಓದಿ: ಸಿನಿಮಾ ಸ್ಟೈಲ್ ಕೊಲೆ ಕೇಸ್ ಭೇದಿಸಿದ ಖಾಕಿ: ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್!
ದಾಳಿಯ ತೀವ್ರತೆಗೆ ಶಿವಾಜಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮನೆಯೊಳಗೆ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಾಯಿ ಜೈಲು ಪಾಲಾಗಿ, ತಂದೆ ಇಹಲೋಕ ತ್ಯಜಿಸಿದ್ದರಿಂದ ಕೇವಲ ಎರಡು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್ ವೃತ್ತ ನಿರೀಕ್ಷಕ ನರಹರಿ ನೇತೃತ್ವದ ತಂಡವು ಲಕ್ಷ್ಮಿಯನ್ನು ವಶಕ್ಕೆ ಪಡೆದಿದೆ. ದಂಪತಿ ನಡುವೆ ಇದ್ದ ದೀರ್ಘಕಾಲದ ಆರ್ಥಿಕ ಸಮಸ್ಯೆಗಳೇ ಈ ಹಿಂಸಾತ್ಮಕ ಕೃತ್ಯಕ್ಕೆ ಪ್ರೇರಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಕೊಲೆ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ