ಕೋಲು, ಕತ್ತಿ ಹಿಡಿದು ಧಾರ್ಮಿಕ ಮೆರವಣಿಗೆಯಲ್ಲಿ ಯಾರಾದರೂ ಪಾಲ್ಗೊಳ್ಳುತ್ತಾರಾ?: ಗುರುಗ್ರಾಮ್ ಸಂಸದ ರಾವ್ ಇಂದರ್‌ಜಿತ್ ಸಿಂಗ್

ನುಹ್‌ನಲ್ಲಿನ ಹಿಂಸಾಚಾರದ ಕುರಿತು ಮಾತನಾಡಿದ ಸಚಿವ ರಾವ್ ಇಂದರ್‌ಜಿತ್ ಸಿಂಗ್ ಎರಡೂ ಸಮುದಾಯಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಅವರು ಆ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆದರು? ಅವರು ಅಂತಹ ವಾತಾವರಣವನ್ನು ಏಕೆ ಸೃಷ್ಟಿಸಿದರು? ಎಂಬುದು ವಿಚಾರಣೆಯ ವಿಷಯವಾಗಿದೆ. ಹರ್ಯಾಣ ಸರ್ಕಾರ ತನಿಖೆ ನಡೆಸುತ್ತದೆ ಎಂದಿದ್ದಾರೆ.

ಕೋಲು, ಕತ್ತಿ ಹಿಡಿದು ಧಾರ್ಮಿಕ ಮೆರವಣಿಗೆಯಲ್ಲಿ ಯಾರಾದರೂ ಪಾಲ್ಗೊಳ್ಳುತ್ತಾರಾ?: ಗುರುಗ್ರಾಮ್ ಸಂಸದ ರಾವ್ ಇಂದರ್‌ಜಿತ್ ಸಿಂಗ್
ರಾವ್ ಇಂದರ್‌ಜಿತ್ ಸಿಂಗ್
ರಶ್ಮಿ ಕಲ್ಲಕಟ್ಟ

Updated on: Aug 02, 2023 | 2:15 PM

ದೆಹಲಿ ಆಗಸ್ಟ್ 02: ಹರ್ಯಾಣದಲ್ಲಿನ(Haryana) ನುಹ್ ಹಿಂಸಾಚಾರಕ್ಕೆ (Nuh violence) ಸಂಬಂಧಿಸಿದಂತೆ ಎರಡೂ ಕಡೆಯಿಂದ ಪ್ರಚೋದನೆಯನ್ನು ಪ್ರಶ್ನಿಸಿದ ಕೇಂದ್ರ ಸಚಿವ ಮತ್ತು ಗುರುಗ್ರಾಮ್ ಸಂಸದ ರಾವ್ ಇಂದರ್‌ಜಿತ್ ಸಿಂಗ್ (Rao Inderjit Singh), ಧಾರ್ಮಿಕ ಮೆರವಣಿಗೆಗೆ ಕತ್ತಿ ಮತ್ತು ಕೋಲುಗಳನ್ನು ಯಾರು ಒಯ್ಯುತ್ತಾರೆ ಎಂದು ಕೇಳಿದ್ದಾರೆ. ಇನ್ನೊಂದು ಕಡೆಯಿಂದ ಯಾವುದೇ ಪ್ರಚೋದನೆ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಧಾರ್ಮಿಕ ಮೆರವಣಿಗೆಗಾಗಿ ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಿದ್ದು ಯಾರು? ಇದು ತಪ್ಪು ಎಂದು ಸಂಸದರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಜುಲೈ 31 ರಂದು ಮಧ್ಯಾಹ್ನ ಹರ್ಯಾಣದ ನುಹ್‌ನಲ್ಲಿ ಸಂಭವಿಸಿದ ಕೋಮು ಉದ್ವಿಗ್ನತೆಯಲ್ಲಿ ಆರು ಜನರು ಸಾವಿಗೀಡಾಗಿದ್ದಾರೆ. ಮಂಗಳವಾರ ಈ ಹಿಂಸಾಚಾರ ಸೊಹ್ನಾ, ಪಲ್ವಾಲ್ ಮತ್ತು ಗುರುಗ್ರಾಮ್‌ ಹರಡಿತ್ತು. ನುಹ್‌ನಲ್ಲಿ ಹಿಂದೂ ರ್ಯಾಲಿ ಮೇಲೆ ಕಲ್ಲು ತೂರಾಟ ನಡೆಯಿತು. ಇದರ ಬೆನ್ನಲ್ಲೇ ಗುರುಗ್ರಾಮ್‌ನ ಮಸೀದಿಯ ಮೇಲೆ ದಾಳಿ ನಡೆದು, ಅಲ್ಲಿ ಇಮಾಮ್ ಹತ್ಯೆಗೊಳಗಾದರು.

ಗೋರಕ್ಷಕ ಮೋನು ಮಾನೇಸರ್ ಅವರ ವಿಡಿಯೊವೇ ಹಿಂಸಾಚಾರಕ್ಕೆ ಕಾರಣ ಎಂದು ಹೇಳಲಾಗಿದ್ದರೂ ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ಮೆರವಣಿಗೆಗೆ ಆಯುಧಗಳನ್ನು ಕೊಟ್ಟವರು ಯಾರು? ಕತ್ತಿ ಅಥವಾ ಕೋಲುಗಳನ್ನು ಹೊತ್ತ ಮೆರವಣಿಗೆಗೆ ಯಾರು ಹೋಗುತ್ತಾರೆ? ಇದು ತಪ್ಪು. ಈ ಕಡೆಯಿಂದಲೂ ಪ್ರಚೋದನೆ ನಡೆದಿದೆ. ಇನ್ನೊಂದು ಕಡೆಯಿಂದ ಯಾವುದೇ ಪ್ರಚೋದನೆ ಇಲ್ಲ ಎಂದು ನಾನು ಹೇಳುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ.


ಸಚಿವರ ಹೇಳಿಕೆಯ ವರದಿಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮೋದಿ ಸರ್ಕಾರದ ಸಚಿವರ ಹೇಳಿಕೆಯ ಹೊರತಾಗಿಯೂ, ಕ್ರಮವು ಏಕಪಕ್ಷೀಯವಾಗಿರುತ್ತದೆ. ಬಂದೂಕು ಹಿಡಿದು ತಿರುಗಾಡುವ, ಅಮಾಯಕರ ಜೀವ ಮತ್ತು ಆಸ್ತಿಗೆ ಹಾನಿ ಮಾಡುವವರನ್ನು ‘ಹೃದಯ ಸಾಮ್ರಾಟ್’ ಎಂದು ಕರೆದು ಮಹಾಪಂಚಾಯತ್‌ನಲ್ಲಿ ಸನ್ಮಾನಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ನುಹ್​​ನಲ್ಲಿ ಮೆರವಣಿಗೆಗೆ ಮುನ್ನ ಎರಡು ಸಮುದಾಯದವರ ಸಭೆ ಕರೆಯಲಾಗಿತ್ತು, ಆದರೆ ಯಾತ್ರೆ ವೇಳೆ ಹಿಂಸಾಚಾರ ನಡೆಯಲು ಕಾರಣವೇನು?

1947ರಲ್ಲಿ ಮೇವಾತ್‌ನಲ್ಲಿ ಯಾವುದೇ ಗಲಭೆ ನಡೆದಿರಲಿಲ್ಲ

ಹಿಂಸಾಚಾರ ಪ್ರಾರಂಭವಾದ ದಿನ ಅಂದರೆ ಜುಲೈ 31 ರಂದು ಕೇಂದ್ರ ಸಚಿವರು ಈ ಬೆಳವಣಿಗೆಗಳು ದುರದೃಷ್ಟಕರ. 1947 ರಲ್ಲಿ, ಭಾರತ ಮತ್ತು ವಿಭಜನೆಯಾದಾಗ ಮತ್ತು ಪಾಕಿಸ್ತಾನವನ್ನು ರಚಿಸಿದಾಗ ಮೇವಾತ್‌ನಲ್ಲಿ ಶಾಂತಿ ನೆಲೆಸಿತ್ತು. ಗಲಭೆಗೆ ಕಾರಣರಾದವರನ್ನು ಬಿಡುವುದಿಲ್ಲ. ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ಹರ್ಯಾಣ ಸರ್ಕಾರ ಮತ್ತು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಲಿದೆ ಎಂದು ಸಂಸದರು ಹೇಳಿದ್ದಾರೆ.

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಸಿಂಗ್

ಕೇಂದ್ರ ಸಚಿವ ರಾವ್ ಇಂದರ್‌ಜಿತ್ ಸಿಂಗ್ ಅವರು ಇಂದು(ಬುಧವಾರ) ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ.ಈ  ಭೇಟಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಿಂಗ್, ಹರ್ಯಾಣದಲ್ಲಿ ಏಮ್ಸ್ ಉದ್ಘಾಟನೆಗೆ ಅವರನ್ನು ಆಹ್ವಾನಿಸಲು ನಾನು ಪ್ರಧಾನಿಯನ್ನು ಭೇಟಿಯಾಗಿದ್ದೇನೆ ಎಂದಿದ್ದಾರೆ


ನುಹ್‌ನಲ್ಲಿನ ಹಿಂಸಾಚಾರದ ಕುರಿತು ಮಾತನಾಡಿದ ಅವರು ಎರಡೂ ಸಮುದಾಯಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಅವರು ಆ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆದರು? ಅವರು ಅಂತಹ ವಾತಾವರಣವನ್ನು ಏಕೆ ಸೃಷ್ಟಿಸಿದರು? ಎಂಬುದು ವಿಚಾರಣೆಯ ವಿಷಯವಾಗಿದೆ. ಹರ್ಯಾಣ ಸರ್ಕಾರ ತನಿಖೆ ನಡೆಸುತ್ತದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us