AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಬಗ್ಗೆ ಮೌನವೇಕೆ?: ಸ್ಮೃತಿ ಇರಾನಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಸ್ಮೃತಿ ಇರಾನಿ ರಾಜ್ಯಸಭೆಯಲ್ಲಿ ಮಣಿಪುರದ ಬಗ್ಗೆ ಮಾತನಾಡುವಾಗ, ಮಣಿಪುರ ಹೊತ್ತಿ ಉರಿಯಲು ರಾಹುಲ್ ಗಾಂಧಿ ಕಾರಣ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಆಕೆ ಬರೀ ಸದ್ದು ಗದ್ದಲ ಮಾಡುತ್ತಿದ್ದಾರೆ ಅಷ್ಟೇ ಬೇರೇನೂ ಇಲ್ಲ ಎಂದಿದೆ

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಬಗ್ಗೆ ಮೌನವೇಕೆ?: ಸ್ಮೃತಿ ಇರಾನಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಸ್ಮೃತಿ ಇರಾನಿ
ರಶ್ಮಿ ಕಲ್ಲಕಟ್ಟ
|

Updated on: Jul 29, 2023 | 7:42 PM

Share

ದೆಹಲಿ ಜುಲೈ 29: ಕಾಂಗ್ರೆಸ್ (Congress) ನನ್ನ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದೆ. ನಾನು ರಾಜಕೀಯವಾಗಿ ಬಹಳ ದೂರ ಹೋಗಿದ್ದೇನೆ ಎಂದು ತೋರುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಶನಿವಾರ ಟ್ವೀಟ್ ಮಾಡಿದ್ದಾರೆ. ಒಂದು ಕಾಲದಲ್ಲಿ ಪ್ರಿಯಾಂಕಾ ‘ಸ್ಮೃತಿ ಯಾರು? ಎಂದು ಕೇಳಿದ್ದರು. ಈಗ ರಾಗಾ ಇರಾನಿ ಅಂತಿದ್ದಾರೆ. ತಮ್ಮ ಉಪನಾಮದ ಸ್ಪೆಲ್ಲಿಂಗ್ ಹೀಗೆ ಇಂದು ಉಲ್ಲೇಖಿಸಿ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಯಾರೋ ಎಲ್ಲೋ ಗೊಂದಲಕ್ಕೊಳಗಾಗಿದ್ದಾರೆಂದು ತೋರುತ್ತಿದೆ ಎಂದಿದ್ದಾರೆ. 2014ರಲ್ಲಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ಅಮೇಥಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿದಾಗ ಸ್ಮೃತಿ ಇರಾನಿ ಯಾರು ಎಂದು ಪ್ರಿಯಾಂಕಾ ಗಾಂಧಿ ಕೇಳಿದ್ದರು ಎಂಬುದನ್ನು ಸ್ಮೃತಿ ಇಲ್ಲಿ ಉಲ್ಲೇಖಿಸಿದ್ದಾರೆ. 2019ರ ಚುನಾವಣೆಯಲ್ಲಿ ಸ್ಮೃತಿ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು.

ಮಣಿಪುರದ ಬಗ್ಗೆ ಸ್ಮೃತಿ ಇರಾನಿ ಅವರ ಮೌನವನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಆದಾಗ್ಯೂ, ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೊ ವೈರಲ್ ಆದ ನಂತರ ಸಚಿವರು ಮಾತನಾಡಿದ್ದಾರೆ. ಟ್ವಿಟರ್‌ನಲ್ಲಿ ದಾಳಿ-ಪ್ರತಿದಾಳಿ ನಡೆಯುತ್ತಿದ್ದಂತೆ ರಾಜ್ಯಸಭೆಯಲ್ಲಿಯೂ ಸ್ಮೃತಿ ಇರಾನಿ ಅವರು ಮಣಿಪುರದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದ್ದರು.

ಮಣಿಪುರದ ಬಗ್ಗೆ ಮಹಿಳಾ ಸಚಿವರು ಏಕೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ಅಮೀ ಯಾಜ್ಞಿಕ್ ಬುಧವಾರ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಮೃತಿ ಇರಾನಿ, “ಛತ್ತೀಸ್‌ಗಢದ ಬಗ್ಗೆ ಚರ್ಚಿಸಲು ನಿಮಗೆ ಯಾವಾಗ ಧೈರ್ಯ ಬರುತ್ತದೆ. ಬಿಹಾರದಲ್ಲಿ ಏನು ನಡೆಯುತ್ತಿದೆ ಎಂದು ಚರ್ಚಿಸಲು ನಿಮಗೆ ಯಾವಾಗ ಧೈರ್ಯ ಬರುತ್ತದೆ? ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಹೇಗೆ ಅತ್ಯಾಚಾರ ನಡೆಯುತ್ತಿದೆ ಎಂಬುದನ್ನು ನಮಗೆ ಹೇಳುವ ಧೈರ್ಯ ನಿಮಗೆ ಯಾವಾಗ ಬರುತ್ತದೆ. ರಾಹುಲ್ ಗಾಂಧಿ ಮಣಿಪುರಕ್ಕೆ ಹೇಗೆ ಬೆಂಕಿ ಹಚ್ಚಿದರು ಎಂದು ಹೇಳುವ ಧೈರ್ಯ ನಿಮಗೆ ಯಾವಾಗ ಬರುತ್ತದೆ. ಸಂಪುಟದ ಮಹಿಳಾ ಸಚಿವರ ಮೇಲೆ ಅನುಮಾನ ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಮೃತಿ ಇರಾನಿ ವರ್ಸಸ್ ಕಾಂಗ್ರೆಸ್

ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಧಿಕೃತ ಹ್ಯಾಂಡಲ್‌ನಿಂದ ಮಾಡಿದ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡಿದ್ದು ಮಾತ್ರವಲ್ಲದೆ ಇತರ ಟ್ವಿಟ್ಟರ್ ಬಳಕೆದಾರರಿಗೂ ಉತ್ತರಿಸಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ. ಸ್ಮೃತಿ ಇರಾನಿ ರಾಜ್ಯಸಭೆಯಲ್ಲಿ ಮಣಿಪುರದ ಬಗ್ಗೆ ಮಾತನಾಡುವಾಗ, ಮಣಿಪುರ ಹೊತ್ತಿ ಉರಿಯಲು ರಾಹುಲ್ ಗಾಂಧಿ ಕಾರಣ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಆಕೆ ಬರೀ ಸದ್ದು ಗದ್ದಲ ಮಾಡುತ್ತಿದ್ದಾರೆ ಅಷ್ಟೇ ಬೇರೇನೂ ಇಲ್ಲ ಎಂದಿದೆ. “ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಥಾನವನ್ನು ಯಾರು ಹೊಂದಿದ್ದಾರೆ? ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಶ್ರೀಮತಿ ಸ್ಮೃತಿ ಇರಾನಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಮಕ್ಕಳೊಂದಿಗೆ ಬೆರೆತು ಖುಷಿಪಟ್ಟ ಪ್ರಧಾನಿ; ನಮಸ್ತೆ ಮೋದಿ ಜೀ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ ಎಂದ ಚಿಣ್ಣರು

“ಪೋಶನ್ ಟ್ರ್ಯಾಕರ್ – 10 ಕೋಟಿ ಫಲಾನುಭವಿಗಳು, 13 ಲಕ್ಷ ಅಂಗನವಾಡಿಗಳಲ್ಲಿ 94% ಆಧಾರ್ ಪರಿಶೀಲಿಸಲಾಗಿದೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ – 3 ಕೋಟಿಗೂ ಹೆಚ್ಚು ಗರ್ಭಿಣಿಯರಿಗೆ 13,000 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಅದು ಸಾಂವಿಧಾನಿಕವಾಗಿ ಕಡ್ಡಾಯವಾಗಿದೆ. ನಿಮಗೆ ಈ ಮೂಲಕ ನೆನಪಿಸುತ್ತೇವೆ ಇಲ್ಲವೆಂದರೆ ನೀವು ನಿರ್ಲಕ್ಷಿಸುತ್ತೀರಿ ಎಂದು ಸ್ಮೃತಿ ಇರಾನಿ ಉತ್ತರಿಸಿದ್ದರು.

ಇದಕ್ಕೆ ಉತ್ತರಿಸಿದ ಟ್ವಿಟರ್ ಬಳಕೆದಾರರೊಬ್ಬರು, “ಯೇ ಜೋ ರಾಹುಲ್ ಕೆ ನಾಮ್ ಕಾ ಗ್ಯಾಸ್ ಭರಾ ಹೈ ವೋ ಕಭಿ ಫಟ್ ಜಾಯೇಗಾ” ಎಂದು ಬರೆದಿದ್ದಾರೆ. “ರಾಹುಲ್ ಗಾಂಧಿ ಬರೀ ಗ್ಯಾಸ್ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಸ್ಮೃತಿ ಇರಾನಿ ಉತ್ತರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ