ವಿಮಾನ ನಿಲ್ದಾಣದಲ್ಲೇ ಧೂಮಪಾನ; ಸಿಬ್ಬಂದಿ ಎಚ್ಚರಿಸಿದರೂ ಡೋಂಟ್ ಕೇರ್! ವೀಡಿಯೋ ವೈರಲ್

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಧೂಮಪಾನದ ವೈರಲ್ ವಿಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಮಂಬೈನಲ್ಲಿ ನಡೆದಿದ್ದು, ಬೆಂಗಳೂರಿನದ್ದಲ್ಲ ಎಂದು ಹೇಳಲಾಗುತ್ತಿದೆ. ಉತ್ತರ್ಷ್ ಗೌತಮ್ ಎಂದು ಗುರುತಿಸಲಾದ ಈ ವ್ಯಕ್ತಿ ಸಿಬ್ಬಂದಿಯ ಎಚ್ಚರಿಕೆ ಧಿಕ್ಕರಿಸಿ ದುರ್ವರ್ತನೆ ತೋರಿದ್ದಾನೆ. ಈತ ಹಿಂದೆ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಎಂಬ ಆರೋಪವೂ ಇದೆ. ಘಟನೆ ಕುರಿತು ಎಫ್‌ಐಆರ್ ದಾಖಲಾಗಿದೆ.

ವಿಮಾನ ನಿಲ್ದಾಣದಲ್ಲೇ ಧೂಮಪಾನ; ಸಿಬ್ಬಂದಿ ಎಚ್ಚರಿಸಿದರೂ ಡೋಂಟ್ ಕೇರ್! ವೀಡಿಯೋ ವೈರಲ್
ವಿಮಾನ ನಿಲ್ದಾಣದಲ್ಲೇ ಧೂಮಪಾನ; ಸಿಬ್ಬಂದಿ ಎಚ್ಚರಿಸಿದರೂ ಡೋಂಟ್ ಕೇರ್! ವೀಡಿಯೋ ವೈರಲ್

Updated on: Mar 31, 2026 | 3:07 PM

ಬೆಂಗಳೂರು, ಮಾರ್ಚ್​ 31: ವಿಮಾನ ನಿಲ್ದಾಣದಲ್ಲಿ ಧೂಮಪಾನ ಮಾಡಿರುವ ವೈರಲ್ ವೀಡಿಯೋ (Airport Smoking Video) ಒಂದು ತೀವ್ರ ಆಕ್ರೋಶ ಹುಟ್ಟುಹಾಕಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ವಿಮಾನ ನಿಲ್ದಾಣದ ಟರ್ಮಿನಲ್ ಪ್ರದೇಶದಲ್ಲಿ ಅಸಡ್ಡೆಯಿಂದ ಧೂಮಪಾನ ಮಾಡುತ್ತಿರುವುದು ಕಾಣಿಸಿಕೊಂಡಿದೆ. ಈ ಘಟನೆ ಮಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಇನ್ನೂ ದೃಢಪಟ್ಟಿಲ್ಲ. ಈ ವೀಡಿಯೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿತ್ರಿಸಲಾಗಿದೆ ಎಂಬ ಊಹಾಪೋಹಗಳು ಹರಿದಾಡಿತ್ತು. ಆದರೆ ಈ ವೀಡಿಯೋ ಬೆಂಗಳೂರಿನಲ್ಲಿ ನಡೆದಿದ್ದಲ್ಲ ಎಂದು ತಿಳಿದು ಬಂದಿದೆ.

ಸಿಬ್ಬಂದಿ ಎಚ್ಚರಿಸಿದರೂ ಕೇಳದ ವ್ಯಕ್ತಿ

ವೈರಲ್ ವೀಡಿಯೋದಲ್ಲಿರುವ ವ್ಯಕ್ತಿಯನ್ನು ಉತ್ತಕರ್ಷ್ ಗೌತಮ್ ಎಂದು ಗುರುತಿಸಲಾಗಿದ್ದು, ವಿಡಿಯೋದಲ್ಲಿ ಆತ ಟಾರ್ಮಾಕ್ ಪ್ರದೇಶದಲ್ಲಿ ವಿಮಾನದ ಹತ್ತಿರವೇ ಧೂಮಪಾನ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಏರ್‌ಲೈನ್ ಕಚೇರಿ ಒಳಗಿನಿಂದ ಚಿತ್ರೀಕರಿಸಲ್ಪಟ್ಟ ದೃಶ್ಯದಲ್ಲಿ, ಗಾಜಿನ ಕಿಟಕಿಯ ಮೂಲಕ ಸಿಬ್ಬಂದಿಯ ಮುಖದತ್ತಲೇ ಧೂಮವನ್ನು ಹೊರಬಿಡುತ್ತಿರುವುದು ಕಂಡುಬಂದಿದೆ. ಸಿಬ್ಬಂದಿ ಇಲ್ಲಿ ಧೂಮಪಾನ ಮಾಡಬಾರದು ಎಂದು ಎಚ್ಚರಿಸಿದರೂ, ಆತ ನಿಯಮಗಳನ್ನು ಲೆಕ್ಕಿಸದೇ ವರ್ತಿಸಿದ್ದಾನೆ ಎನ್ನಲಾಗಿದೆ.

ಇನ್ನೊಂದು ದೃಶ್ಯದಲ್ಲಿ, ಆ ವ್ಯಕ್ತಿ ಏರ್‌ಲೈನ್ ಸಿಬ್ಬಂದಿಯ ಕಡೆಗೆ ಹಣ ಎಸೆದು ಅಸಭ್ಯವಾಗಿ ನಡೆದುಕೊಂಡಿರುವುದು ಕಂಡುಬಂದಿದೆ. ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಕೆಲವರು ಆ ವ್ಯಕ್ತಿ ಗೂಗಲ್ ಉದ್ಯೋಗಿ ಎಂದು ಹೇಳಿಕೊಂಡಿದ್ದು, ಈ ಆರೋಪ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ವಿಮಾನ ನಿಲ್ದಾಣಗಳು ಅತ್ಯಂತ ಭದ್ರತಾ ವಲಯವಾಗಿರುವುದರಿಂದ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದಾತನ ವಿರುದ್ಧ ಎಫ್​ಐಆರ್

ಹಾರುತ್ತಿದ್ದ ವಿಮಾನದ ತುರ್ತು ಬಾಗಿಲನ್ನು ತೆಗೆದಿದ್ದವನೂ ಇವನೇ!

ಇದಲ್ಲದೆ, ಲೈಟರ್‌ನ್ನು ಆತ ವಿಮಾನ ನಿಲ್ದಾಣದೊಳಗೆ ಹೇಗೆ ತಂದನು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ವ್ಯಕ್ತಿ ಹಲವು ಕಡೆ ಇದೇ ರೀತಿ ವರ್ತಿಸಿದ್ದಾನೆಂಬ ಆರೋಪವೂ ಕೇಳಿ ಬರುತ್ತಿದೆ. ಮಾರ್ಚ್​ 22ರಂದು ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿಯೂ ಸಹ ಇದೇ ವ್ಯಕ್ತಿ ಹಾರುತ್ತಿದ್ದ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಎನ್ನಲಾಗಿದೆ. ಹೋಗಲಿ ಎಂದು ಬಿಟ್ಟು ಕಳುಹಿಸಿದ ಬೆಂಗಳೂರು ಪೊಲೀಸರನ್ನೇ ‘ಬಸ್ಟರ್ಡ್ಸ್’ ಎಂದು ನಿಂದಿಸಿದ್ದಲ್ಲದೆ, ಎಕ್ಸ್ (X) ಖಾತೆಯಲ್ಲಿ ಪೊಲೀಸರ ವಿರುದ್ಧ ಸುಳ್ಳು ಆರೋಪ ಮಾಡಿ ಪೋಸ್ಟ್ ಕೂಡ ಹಾಕಿದ್ದ ಆರೋಪಿಯ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us