ಬಂಗಾಳದಲ್ಲಿ ಪ್ರತ್ಯೇಕತೆಯ ಕಿಡಿ: ಪಶ್ಚಿಮ ಬಂಗಾಳವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ, ಮಮತಾಗೆ ವಿದೇಶಿ ವ್ಯಕ್ತಿಯಿಂದ ಬೇಡಿಕೆ

ಬಾಂಗ್ಲಾದೇಶಿ ನಾಯಕ ನೂರುಲ್ ಹುಡಾ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸೋಲಿನ ನಂತರ ಮಮತಾ ಬ್ಯಾನರ್ಜಿಗೆ ರಾಜ್ಯವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಪ್ರಚೋದಿಸಿದ್ದಾರೆ. 17 ಕೋಟಿ ಬಾಂಗ್ಲಾದೇಶಿ ಮುಸ್ಲಿಮರ ಬೆಂಬಲ ಭರವಸೆ ನೀಡಿದ್ದು, ಇದು ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದೆ. ಗುಪ್ತಚರ ಸಂಸ್ಥೆಗಳು ಇದರ ತನಿಖೆ ನಡೆಸುತ್ತಿದ್ದು, ಗಡಿಯಾಚೆಯಿಂದ ವ್ಯವಸ್ಥಿತ ಸಂಚಿನ ಅನುಮಾನ ವ್ಯಕ್ತವಾಗಿದೆ.

ಬಂಗಾಳದಲ್ಲಿ ಪ್ರತ್ಯೇಕತೆಯ ಕಿಡಿ: ಪಶ್ಚಿಮ ಬಂಗಾಳವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ, ಮಮತಾಗೆ ವಿದೇಶಿ ವ್ಯಕ್ತಿಯಿಂದ  ಬೇಡಿಕೆ
ಮಮತಾ

Updated on: May 07, 2026 | 11:39 AM

ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಅತ್ಯಂತ ಅಪಾಯಕಾರಿ ಹೇಳಿಕೆಯೊಂದು ಹೊರಬಿದ್ದಿದೆ. ಬಾಂಗ್ಲಾದೇಶದ ನಾಯಕ ಮುಹಮ್ಮದ್ ನೂರುಲ್ ಹುಡಾ ಎಂಬುವವರು ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳವನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ದೇಶ ಎಂದು ಘೋಷಿಸಲು ಮತ್ತು ದೆಹಲಿ ಸರ್ಕಾರದ ವಿರುದ್ಧ ಯುದ್ಧ ಸಾರಲು ಪ್ರಚೋದನೆ ನೀಡಿರುವ ವಿಡಿಯೋವೊಂದು ಸಂಚಲನ ಮೂಡಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೂರುಲ್ ಹುಡಾ ಅವರು ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ಯಾವುದೇ ಕಾರಣಕ್ಕೂ ಸೋಲೊಪ್ಪಬಾರದು. ಪಶ್ಚಿಮ ಬಂಗಾಳವನ್ನು ಸ್ವತಂತ್ರ ಎಂದು ಘೋಷಿಸಿ. ಭಾರತ ಸರ್ಕಾರದ ವಿರುದ್ಧ ಯುದ್ಧ ಆರಂಭಿಸಿ. ನಿಮ್ಮ ಬೆನ್ನಿಗೆ 17 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ನಿಲ್ಲುತ್ತಾರೆ,ಎಂಬ ಮಾತುಗಳನ್ನು ಆಡಿದ್ದಾರೆ. ಈ ಹೇಳಿಕೆಯು ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದ್ದು, ಭದ್ರತಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಡಿಯೋದಲ್ಲಿರುವ ವ್ಯಕ್ತಿ ತನ್ನನ್ನು ಬಾಂಗ್ಲಾದೇಶದ ನಾಯಕನೆಂದು ಬಿಂಬಿಸಿಕೊಂಡಿದ್ದರೂ, ಆತನ ನಿಜವಾದ ಗುರುತಿನ ಬಗ್ಗೆ ಗೊಂದಲಗಳಿವೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸುದ್ದಿಯಲ್ಲಿದ್ದರು. ಆದರೆ, ಈ ವಿಡಿಯೋದಲ್ಲಿರುವ ವ್ಯಕ್ತಿ ಉಗ್ರಗಾಮಿ ಅಥವಾ ತೀವ್ರಗಾಮಿ ಸಂಘಟನೆಗಳ ಜೊತೆ ಸಂಬಂಧ ಹೊಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈತ ಜಮಾತ್-ಇ-ಇಸ್ಲಾಮಿ ಅಥವಾ ಇತರ ಪ್ರತ್ಯೇಕತಾವಾದಿ ಗುಂಪುಗಳ ಬೆಂಬಲಿಗನಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತಷ್ಟು ಓದಿ: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಲ್ಲ, ಚುನಾವಣಾ ಆಯೋಗದ ಗೆಲುವೆಂದ ಪ್ರಿಯಾಂಕ್ ಖರ್ಗೆ!

ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನ ಗೆದ್ದು ಸರ್ಕಾರ ರಚಿಸಲು ಸಜ್ಜಾಗಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇವಲ 80 ಸ್ಥಾನಕ್ಕೆ ಕುಸಿದಿದೆ. ಮಮತಾ ಬ್ಯಾನರ್ಜಿ ಅವರು ಸ್ವತಃ ಸೋಲನುಭವಿಸಿದರೂ ಅಧಿಕಾರ ಬಿಡಲು ನಿರಾಕರಿಸುತ್ತಿರುವ ಈ ಸಂಕೀರ್ಣ ಸಮಯದಲ್ಲಿ, ಗಡಿಯಾಚೆಯಿಂದ ಇಂತಹ ‘ಸ್ವತಂತ್ರ ಬಂಗಾಳ’ದ ಕೂಗು ಕೇಳಿಬಂದಿರುವುದು ವ್ಯವಸ್ಥಿತ ಸಂಚಿನ ಭಾಗವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಲು ಬಾಂಗ್ಲಾದೇಶದ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ಇಲಾಖೆ ಈ ವಿಡಿಯೋದ ಮೂಲ ಮತ್ತು ಅದರ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆ ಆರಂಭಿಸಿದೆ.

ಚುನಾವಣಾ ಸೋಲನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಸ್ವೀಕರಿಸುವ ಬದಲು, ಇಂತಹ ದೇಶದ್ರೋಹಿ ಕರೆಗಳಿಗೆ ಕಿವಿಗೊಡುವುದು ರಾಜ್ಯ ಮತ್ತು ದೇಶದ ಭದ್ರತೆಗೆ ಮಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us