
ರಾಜಸ್ತಾನದ ಜೈಸಲ್ಮೇರ್ ಬಳಿ ಪ್ರಮುಖ ವ್ಯೂಹಾತ್ಮಕ ಸೇನಾ ಪೋಸ್ಟ್ ಅಗಿರುವ ಲಾಂಗೆವಾಲಾನಲ್ಲಿ ಗಡಿ ಕಾಯುತ್ತಿರುವ ಸೈನಿಕರೊಂದಿಗೆ ಇಂದು ದೀಪಾವಳಿ ಆಚರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತ ನೆರೆ ರಾಷ್ಟ್ರಗಳಾಗಿರುವ ಮತ್ತು ಗಡಿಭಾಗದಲ್ಲಿ ಸದಾ ಒಂದಿಲ್ಲೊಂದು ತಂಟೆ ತೆಗೆದು ಜಗಳ ಕಾಯಲು ಪ್ರಯತ್ನಿಸುವ ಚೀನಾ ಮತ್ತು ಪಾಕಿಸ್ತಾನಕ್ಕೆ ಮತ್ತೊಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
‘‘ಪರಸ್ಪರ ಹೊಂದಾಣಿಕೆಯ, ಅರ್ಥೈ
ಸುಕೊಳ್ಳುವಿಕೆಯ ಹಾಗೂ ಇತರರಿಗೆ ಅರ್ಥಮಾಡಿಸುವ ನೀತಿಯಲ್ಲಿ ಭಾರತ ವಿಶ್ವಾಸವಿರಿಸಿಕೊಂಡಿದೆ. ನಾವು ತಾಳ್ಮೆಯುಳ್ಳವರು ಮತ್ತು ಸ್ವಭಾವತಃ ಶಾಂತಿಪ್ರಿಯರು. ಆದರೆ, ಯಾರಾದರೂ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ ಮಾಡಿದರೆ ಅವರಿಗೆ ಅಂತಿಂಥದ್ದಲ್ಲ, ಪ್ರಚಂಡವಾದ ಉತ್ತರ ನೀಡುತ್ತೇವೆ,’’ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು.
ಪ್ರತಿಬಾರಿ ದೀಪಾವಳಿಯನ್ನು ದೇಶದ ಗಡಿಭಾಗಗಳಲ್ಲಿ ತಮ್ಮ ಜೀವದ ಹಂಗು ತೊರೆದು ದೇಶದ ಸೀಮೆಯನ್ನು ಸಂರಕ್ಷಿಸುವ ಮಹೋನ್ನತ ಕಾರ್ಯದಲ್ಲಿ ನಿಸ್ವಾರ್ಥ ಮನೋಭಾವದಿಂದ ನಿರತರಾಗಿರುವ ಸೈನಿಕರೊಂದಿಗೆ ಆಚರಿಸುವುದನ್ನು ಪರಿಪಾಠ ಮಾಡಿಕೊಂಡಿರುವ ಪ್ರಧಾನಿ ಮೋದಿಯವರು, ಈ ಬಾರಿಯ ಹಬ್ಬವನ್ನು ಜೈಸಲ್ಮೇರ್ ಗಡಿಭಾಗದಲ್ಲಿ ಆಚರಿಸುತ್ತಿದ್ದಾರೆ.
‘‘ವಿಶ್ವದ ಯಾವುದೇ ಶಕ್ತಿ ನಮ್ಮ ಸೈನಿಕರು ದೇಶದ ಗಡಿಯನ್ನು ರಕ್ಷಿಸುವುದಕ್ಕೆ ಅಡ್ಡಿಪಡಿಸಲಾರದು. ನಮ್ಮ ಸೇನಾಬಲ ದೊಡ್ಡದು ಮತ್ತು ಅದರೊಂದಿಗೆ ಯಾವುದೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ನಮ್ಮ ರಾಜಕೀಯ ಇಚ್ಛಾಶಕ್ತಿ ಕೂಡ ಅಷ್ಟೇ ಪ್ರಬಲವಾಗಿದೆ. ನಮ್ಮ ತಂಟೆಗೆ ಯಾರೇ ಬಂದರೂ ನಾವು ಅವರಿಗೆ ತಕ್ಕ ಉತ್ತರ ನೀಡುತ್ತೇವೆ. ಯಾವ ಕಾರಣಕ್ಕೂ ರಾಜಿಯಾಗದ ಸ್ವಭಾವ ನಮ್ಮದು ಅಂತ ಇಡೀ ಪ್ರಪಂಚಕ್ಕೆ ಗೊತ್ತಿದೆ,’’ ಎಂದು ಪ್ರಧಾನಿ ಮೋದಿ ಅಪರೋಕ್ಷವಾಗಿ ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಹಾಗೆ ನೋಡಿದರೆ, ಈ ನೆರೆ ರಾಷ್ಟ್ರಗಳಿಗೆ ಮೋದಿಯವರು ಎಚ್ಚರಿಸುತ್ತಿರುವುದು ಇದೇ ಮೊದಲೇನಲ್ಲ. ಮೊನ್ನೆಯಯಷ್ಟೇ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗ ಸಭೆಯಲ್ಲೂ ಅವರು ಈ ರಾಷ್ಟ್ರಗಳಿಗೆ ಹದ್ದುಬಸ್ತಿನಲ್ಲಿರುವಂತೆ ಎಚ್ಚರಿಸಿದ್ದರು. ಹಾಗೆಯೇ, ಜುಲೈನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ಭಾರತದ ಯೋಧರ ಮೇಲೆ ಆಕ್ರಮಣ ನಡೆಸಿ ಕೆಲವರನ್ನು ಕೊಂದಾಗಲೂ ಪ್ರಧಾನಿ ಮೋದಿಯವರು ಚೀನಾವನ್ನು ಎಚ್ಚರಿಸಿದ್ದರು.
‘‘ಸಾಮ್ರಾಜ್ಯ ವಿಸ್ತರಣೆ, ದೇಶಗಳ ಗಡಿ ವಿಸ್ತರಣೆ ಇತ್ಯಾದಿಗಳೆಲ್ಲ ಯಾವತ್ತೋ ಮುಗಿದುಹೋದ ಅಧ್ಯಾಯಗಳು. ಹಾಗೆ ವಿಸ್ತರಣೆ ಮಾಡುವ ಆಕಾಂಕ್ಷೆಯುಳ್ಳವರು ಮಣ್ಣುಮುಕ್ಕಿರುವುದು ವಿಶ್ವಕ್ಕೆ ಗೊತ್ತಿದೆ. ಹಾಗಾಗಿ, ಅಂಥ ಪ್ರಯತ್ನಗಳಲ್ಲಿ ತೊಡಗುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ,’’ ಎಂದು ಮೋದಿ ಹೇಳಿದ್ದರು.
ಗಡಿಭಾಗದಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣವನ್ನು ಭಾರತ ನಿಲ್ಲಿಸುವುದಿಲ್ಲ ಅಂತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪುನರುಚ್ಛರಿಸಿದರು.