ಬಂಗಾಳದಲ್ಲಿ ನಡು ರಸ್ತೆಯಲ್ಲೇ ಮಹಿಳೆಗೆ ಕೋಲಿನಿಂದ ಥಳಿಸಿದ ಜನ; ಮಮತಾ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹಗಲು ಹೊತ್ತಿನಲ್ಲಿ ಮಹಿಳೆಯನ್ನು ಕೋಲುಗಳಿಂದ ಹೊಡೆದಿದ್ದಾರೆ. ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ದೂರಿದ್ದಾರೆ.

ಬಂಗಾಳದಲ್ಲಿ ನಡು ರಸ್ತೆಯಲ್ಲೇ ಮಹಿಳೆಗೆ ಕೋಲಿನಿಂದ ಥಳಿಸಿದ ಜನ; ಮಮತಾ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಬಂಗಾಳದಲ್ಲಿ ನಡು ರಸ್ತೆಯಲ್ಲೇ ಮಹಿಳೆಗೆ ಕೋಲಿನಿಂದ ಹೊಡೆದ ಜನ

Updated on: Sep 18, 2024 | 10:19 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪುರುಷರ ಗುಂಪೊಂದು ಮಹಿಳೆಯನ್ನು ಅಮಾನುಷವಾಗಿ ಕೋಲಿನಿಂದ ಹೊಡೆಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಮೋತಾಬರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಆಕ್ರೋಶದ ನಡುವೆ, ಮಾಲ್ಡಾದಲ್ಲಿ ಪುರುಷರ ಗುಂಪೊಂದು ಮಹಿಳೆಯ ಮೇಲೆ ಅಮಾನುಷವಾಗಿ ಕೋಲುಗಳಿಂದ ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಈ ವೈರಲ್ ವಿಡಿಯೋದಲ್ಲಿ ಪುರುಷರು ಮಹಿಳೆಯನ್ನು ರಸ್ತೆಗೆ ಎಳೆದು ದೊಣ್ಣೆಯಿಂದ ಥಳಿಸಿದ್ದಾರೆ. ಈ ಘಟನೆಯನ್ನು ವೀಕ್ಷಿಸುತ್ತಿದ್ದ ಗ್ರಾಮಸ್ಥರು ಸುತ್ತಲೂ ನೆರೆದಿದ್ದರೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ. ಈ ಮಹಿಳೆಯ 16 ವರ್ಷದ ಮಗಳು ಕೂಡ ತನ್ನ ತಾಯಿಯನ್ನು ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆ.


ಗ್ರಾಮಸ್ಥರ ಪ್ರಕಾರ, ಆ ಮಹಿಳೆಯ ಕುಟುಂಬ ಮತ್ತು ಅವರ ನೆರೆಹೊರೆಯವರ ನಡುವಿನ ದೀರ್ಘಕಾಲದ ಜಮೀನು ವಿವಾದದಿಂದ ಈ ಹಲ್ಲೆ ನಡೆದಿದೆ. ಸಂತ್ರಸ್ತೆ ಮೋತಾಬರಿ ಪೊಲೀಸ್ ಠಾಣೆಯಲ್ಲಿ 6 ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್ 21ರಂದು ದೆಹಲಿ ಸಿಎಂ ಆಗಿ ಅತಿಶಿ ಪ್ರಮಾಣವಚನ ಸ್ವೀಕಾರ

ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಪೊಲೀಸರು, “ಈ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಲಿಖಿತ ದೂರುಗಳನ್ನು ದಾಖಲಿಸಿದ್ದಾರೆ. ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.

ಈ ಹಿಂದೆ ಗ್ರಾಮದಲ್ಲಿ ಪಂಚಾಯಿತಿ ಸಭೆ ನಡೆಸಿ ವಿವಾದ ಬಗೆಹರಿಸುವ ಪ್ರಯತ್ನ ವಿಫಲವಾಗಿದ್ದು, ಪದೇ ಪದೇ ವಾಗ್ವಾದಕ್ಕೆ ಕಾರಣವಾಗಿತ್ತು. ಸೋಮವಾರ ಮಹಿಳೆಯ ಪತಿ ಪೊಲೀಸರಿಗೆ ಔಪಚಾರಿಕ ದೂರು ನೀಡಿದ್ದಾರೆ. ಈ ವಿಷಯ ತಿಳಿದ ನೆರೆಹೊರೆಯವರು ಮರುದಿನ ಪತಿಯನ್ನು ಹೆದರಿಸಿ, ಹಗಲು ಹೊತ್ತಿನಲ್ಲಿ ಪತಿಯನ್ನು ಅಮಾನುಷವಾಗಿ ಥಳಿಸಿದ್ದಾರೆ.

ಇದನ್ನೂ ಓದಿ: ಪತ್ನಿಯ ಕೊಂದು ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ಊರೂರು ಸುತ್ತುತ್ತಿದ್ದ ವ್ಯಕ್ತಿಯ ಬಂಧನ

ಈ ವೇಳೆ ಮಹಿಳೆ ತನ್ನ ಪತಿಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದಾಗ, ಜನರ ಗುಂಪು ಆಕೆಯ ಮೇಲೆ ತಿರುಗಿ, ಆಕೆಯನ್ನು ನೆಲಕ್ಕೆ ಎಸೆದು ಮತ್ತು ದೊಣ್ಣೆ ಮತ್ತು ಬಿದಿರುಗಳಿಂದ ಥಳಿಸಿದ್ದಾರೆ. ದಾಳಿಯ ವೇಳೆ ಆಕೆಯ ಬಟ್ಟೆ ಹರಿದಿತ್ತು. ಆ ಮಹಿಳೆಯ ಮಗಳು ಸಹಾಯಕ್ಕೆ ಧಾವಿಸಿದಾಗ, ದಾಳಿಕೋರರು ಆಕೆಯನ್ನೂ ಥಳಿಸಿದ್ದಾರೆ. ಕೊನೆಗೆ ಮಹಿಳೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ಈ ಘಟನೆ ರಾಜಕೀಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಈ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ದೃಶ್ಯವು ಅಫ್ಘಾನಿಸ್ತಾನ, ಪಾಕಿಸ್ತಾನ ಅಥವಾ ಬಾಂಗ್ಲಾದೇಶದಿಂದ ಬಂದಿದೆ ಎಂದು ಭಾವಿಸಬೇಡಿ. ಈ ಘಟನೆಯು ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಮೋತಬರಿಯಲ್ಲಿ ನಡೆದಿದೆ” ಎಂದು ಬರೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us