ಜೂನ್ 15ರವರೆಗೆ ಪ್ರತಿಭಟನೆ ಮಾಡುವುದಿಲ್ಲ: ಅನುರಾಗ್ ಠಾಕೂರ್ ಭೇಟಿ ಬಳಿಕ ಹೇಳಿಕೆ ನೀಡಿದ ಸಾಕ್ಷಿ ಮಲಿಕ್

ಜೂನ್ 15 ರವರೆಗೆ ಪ್ರತಿಭಟನೆಯನ್ನು ನಿಲ್ಲಿಸಲಾಗಿದೆ ಎಂದು ಬಜರಂಗ್ ಪುನಿಯಾ (Bajrang Punia) ಹೇಳಿದ್ದು ಪ್ರತಿಭಟನೆ ಕೊನೆಗೊಂಡಿಲ್ಲ ಎಂದಿದ್ದಾರೆ.

ಜೂನ್ 15ರವರೆಗೆ ಪ್ರತಿಭಟನೆ ಮಾಡುವುದಿಲ್ಲ: ಅನುರಾಗ್ ಠಾಕೂರ್ ಭೇಟಿ ಬಳಿಕ ಹೇಳಿಕೆ ನೀಡಿದ ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್- ಬಜರಂಗ್ ಪುನಿಯಾ
Updated By: ರಶ್ಮಿ ಕಲ್ಲಕಟ್ಟ

Updated on: Jun 07, 2023 | 6:59 PM

ತನಿಖೆಯನ್ನು ಮುಕ್ತಾಯಗೊಳಿಸಲು ಸರ್ಕಾರವು ಜೂನ್ 15 ರವರೆಗೆ ಸಮಯ ಕೇಳಿದೆ. ಪ್ರತಿಭಟನೆ ಇನ್ನೂ ಮುಗಿದಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ (Sakshi Malik )ಹೇಳಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur)ಅವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಾಕ್ಷಿ, ಜೂನ್ 15ರೊಳಗೆ ಪೊಲೀಸರು ತನಿಖೆ ಪೂರ್ಣಗೊಳಿಸುವವರೆಗೆ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವಂತೆ ನಮಗೆ ಹೇಳಲಾಗಿದೆ. ನಾವು ಜೂನ್ 15 ರವರೆಗೆ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಜೂನ್ 15 ರವರೆಗೆ ಪ್ರತಿಭಟನೆಯನ್ನು ನಿಲ್ಲಿಸಲಾಗಿದೆ ಎಂದು ಬಜರಂಗ್ ಪುನಿಯಾ (Bajrang Punia) ಹೇಳಿದ್ದು ಪ್ರತಿಭಟನೆ ಕೊನೆಗೊಂಡಿಲ್ಲ ಎಂದಿದ್ದಾರೆ.

ಅನುರಾಗ್ ಠಾಕೂರ್ ಭೇಟಿಗೆ ಮುನ್ನಗೃಹ ಸಚಿವ ಅಮಿತ್ ಶಾ ಈ ಹಿಂದೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ್ದರು. ಲೈಂಗಿಕ ಕಿರುಕುಳದ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸಬೇಕೆಂದು ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ.


ನಾನು ಕುಸ್ತಿಪಟುಗಳೊಂದಿಗೆ ಸುದೀರ್ಘ 6 ಗಂಟೆಗಳ ಕಾಲ ಚರ್ಚೆ ನಡೆಸಿದೆ. ಜೂನ್ 15ರೊಳಗೆ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದೇವೆ. ಜೂನ್ 30 ರೊಳಗೆ ಡಬ್ಲ್ಯುಎಫ್‌ಐ ಚುನಾವಣೆ ನಡೆಯಲಿದೆ ಎಂದು ಕುಸ್ತಿಪಟುಗಳನ್ನು ಭೇಟಿ ಮಾಡಿದ ನಂತರ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: Wrestlers Protest: ನಮಗೂ ಮಹಿಳಾ ಫೆಡರೇಶನ್ ಮುಖ್ಯಸ್ಥರು ಬೇಕು, ಕ್ರೀಡಾ ಸಚಿವರ ಮುಂದೆ 5 ಬೇಡಿಕೆ ಇಟ್ಟ ಕುಸ್ತಿಪಟುಗಳು

ಅನುರಾಗ್ ಠಾಕೂರ್ ಮುಂದೆ 5 ಬೇಡಿಕೆಗಳನ್ನು ಮುಂದಿಟ್ಟ ಕುಸ್ತಿಪಟುಗಳು

ಕೇಂದ್ರ  ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾದ ಕುಸ್ತಿಪಟುಗಳು ಐದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ ಮಹಿಳೆಯೊಬ್ಬರನ್ನು ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥರಾಗಿ ನೇಮಕ ಮಾಡಬೇಕು. ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಕುಟುಂಬದ ಯಾರೂ ಕುಸ್ತಿ ಒಕ್ಕೂಟದ ಭಾಗವಾಗಿರಬಾರದು. ಕುಸ್ತಿ ಸಂಸ್ಥೆಗೆ “ಮುಕ್ತ ಮತ್ತು ನ್ಯಾಯಯುತ” ಚುನಾವಣೆಗೆ ನಡೆಸಬೇಕು.
ಏಪ್ರಿಲ್ 28 ರಂದು ಜಂತರ್ ಮಂತರ್‌ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಹಿಂಪಡೆಯಬೇಕು. ಲೈಂಗಿಕ ಕಿರುಕುಳ ಆರೋಪದ ಮೇಲೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ