AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Row Opinion: ಹಿಜಾಬ್​ ಧರಿಸಲೇಬೇಕು ಅಂತೆಲ್ಲೂ ಇಲ್ಲ, ಹಾಗಂತ ಧರಿಸುವ ಸ್ವಾತಂತ್ರ್ಯ ಕಸಿಯುವುದೂ ಸರಿಯಲ್ಲ

ಕರ್ನಾಟಕದಲ್ಲಿ ಬಹಳ ಚರ್ಚೆಯಲ್ಲಿ ಇರುವ ಹಿಜಾಬ್​ ವಿವಾದದ ಬಗ್ಗೆ ಇಮಾಮ್ ಇಮ್ರಾನ್ ಅವರು ಟಿವಿ9ಕನ್ನಡ ಡಿಜಿಟಲ್ ಜತೆಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

Hijab Row Opinion: ಹಿಜಾಬ್​ ಧರಿಸಲೇಬೇಕು ಅಂತೆಲ್ಲೂ ಇಲ್ಲ, ಹಾಗಂತ ಧರಿಸುವ ಸ್ವಾತಂತ್ರ್ಯ ಕಸಿಯುವುದೂ ಸರಿಯಲ್ಲ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Feb 12, 2022 | 8:56 PM

Share

“ಮೊದಲು ನಮ್ಮ ದೇಶದಲ್ಲಿ ಉದ್ಯೋಗ ಸಿಗುವಂತಾಗಬೇಕು. ಅದಕ್ಕೂ ಮುಂಚೆ ಅಗತ್ಯ ಇರುವ ಶಿಕ್ಷಣ ದೊರೆಯಬೇಕು. ಅಂಥದ್ದರ ಕಡೆಗೆ ಗಮನ ಕೊಡಬೇಕು. ಇನ್ನು ಈಗ ನಡೆಯುತ್ತಿರುವುದು ಹಿಜಾಬ್ (Hijab Row) ಬಗೆಗಿನ ಗೊಂದಲವೇ ವಿನಾ ವಿವಾದ ಅಲ್ಲವೇ ಅಲ್ಲ,” – ಹೀಗೆ ಮಾತಿಗೆ ಆರಂಭಿಸಿದರು ಇಮಾಮ್ ಇಮ್ರಾನ್. ಹಿಜಾಬ್​ ಕುರಿತು ಈಗಾಗಲೇ ದೇಶವ್ಯಾಪಿ ಎದ್ದಿರುವ ಗದ್ದಲದ ಹಿನ್ನೆಲೆಯಲ್ಲಿ ಟಿವಿ9ಕನ್ನಡ ಡಿಜಿಟಲ್​ನಿಂದ ಇಮ್ರಾನ್ ಅವರನ್ನು ಮಾತನಾಡಿಸಲಾಯಿತು. ಇಸ್ಲಾಂ ಧರ್ಮದಲ್ಲಿ ಹಿಜಾಬ್​ ವಿಚಾರವಾಗಿ ಏನು ಹೇಳಲಾಗಿದೆ, ಇದು ಧರಿಸುವುದು ಕಡ್ಡಾಯವೇ, ಹಿಜಾಬ್ ಬಗ್ಗೆ ಈಗ ನಡೆಯುತ್ತಿರುವ ಎಲ್ಲ ಚರ್ಚೆಯ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಹಾಗಿದ್ದರೆ ಅವರು ಹಂಚಿಕೊಂಡ ಮಾಹಿತಿ ಏನು ಎಂಬ ಬಗ್ಗೆ ವಿವರಗಳು ನಿಮಗಾಗಿ ಈ ಲೇಖನದಲ್ಲಿವೆ.

“ಇಸ್ಲಾಮ್​ನಲ್ಲಿ ಹಿಜಾಬ್​ ಕಡ್ಡಾಯ ಅಲ್ಲ. ಹೆಣ್ಣುಮಕ್ಕಳ ದೇಹದ ಭಾಗಗಳು ಇತರ ಪುರುಷರಿಗೆ ಕಾಣಬಾರದು ಎಂದು ಇರುವ ಚೌಕಟ್ಟು ಅದು. ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಹೇಳುವಾಗ, ಎಚ್ಚರಿಕೆಯಿಂದ ಇರಬೇಕು ಎನ್ನುತ್ತೇವಲ್ಲಾ ಹಾಗೆ. ಕುರ್​ ಆನ್ ಹಾಗೂ ಹದೀಸ್ ಎರಡರಲ್ಲೂ ಈ ಬಗ್ಗೆ ಹೇಳಲಾಗಿದೆ. ಅದೇ ರೀತಿ ಪುರುಷರಿಗೂ ಪರಸ್ತ್ರೀಯರನ್ನು ನೋಡಿ ಮಾತನಾಡುವಾಗ ನೆಲ ನೋಡಿ ಮಾತನಾಡುವಂತೆ ಹೇಳಲಾಗುತ್ತದೆ. ಇದು ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ರೂಪುಗೊಂಡಿರುವಂಥದ್ದು. ಧರಿಸುವ ದಿರಿಸು ಉದ್ರೇಕಕಾರಿ ಆಗಿರಬಾರದು ಎಂಬುದು ಉದ್ದೇಶ. ಇನ್ನು ಈಗಿನ ಗೊಂದಲದ ವಿಚಾರಕ್ಕೆ ಬರುವುದಾದರೆ, ಅದೊಂದು ಕಾಲೇಜಿನಲ್ಲಿನ ಘಟನೆ. ಆ ಕಾಲೇಜಿನಲ್ಲಿ 84 ಹೆಣ್ಣುಮಕ್ಕಳು ಇದ್ದರು. ಅದರಲ್ಲಿ “ಸ್ಕಾರ್ಫ್” ಹಾಕಿಕೊಂಡು ಬರುತ್ತಿದ್ದವರು ನಾಲ್ಕರಿಂದ ಆರು ಹೆಣ್ಣುಮಕ್ಕಳಷ್ಟೇ. ತಾವು ಧರಿಸುವ ವೇಲ್​ಗೆ ಹೊಂದಾಣಿಕೆ ಆಗುವಂತೆ  ಸ್ಕಾರ್ಫ್ ಹಾಕಿಕೊಂಡು ಬರುತ್ತಿದ್ದರು. ಅದು ಇತ್ತೀಚೆಗೆ ಶುರು ಮಾಡಿದ್ದೇನಲ್ಲ. ಬಹಳ ಸಮಯದಿಂದ ಹೀಗೇ ಬರುತ್ತಿದ್ದಾರೆ.

“ಆದರೆ, ಈಗ ಈ ಸ್ವರೂಪ ಪಡೆದುಕೊಂಡಿದೆ. ನಾಲ್ಕು ಗೋಡೆ ಮಧ್ಯೆ ಕೂತು ಮಾತನಾಡಬೇಕಾದ್ದನ್ನು ಫೇಸ್​ಬುಕ್, ಯೂಟ್ಯೂಬ್, ಇನ್​ಸ್ಟಾಗ್ರಾಮ್, ವಾಟ್ಸಾಪ್ ಹೀಗೆ ನಾನಾ ಕಡೆ ಹಾಕುವುದು ಇತ್ತೀಚಿನ ರೂಢಿ. ಅಪಘಾತವಾಗಿ ಯಾರಾದರೂ ರಸ್ತೆಯಲ್ಲಿ ಬಿದ್ದಿದ್ದರೆ ಮೊದಲಿಗೆ ವಿಡಿಯೋವನ್ನು ತೆಗೆದು, ಅದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿ, ಲೈಕ್ಸ್ ಎದುರು ನೋಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಮಾಜ ಇದು. ಆಸ್ಪತ್ರೆಗೆ ಸೇರಿಸೋಣ ಅನ್ನುವವರಿಗಿಂತ ತಾವು ಆ ಮೂಲಕ ಖ್ಯಾತರಾಗೋಣ ಎಂಬ ಹುಕಿಗೆ ಬೀಳುತ್ತಾರೆ. ಈಗ ಆಗಿರುವುದು ಅದೇ. ಇಷ್ಟು ವರ್ಷಗಳೇ ಇಲ್ಲದ ವಿಚಾರವನ್ನು ಈಗ ಎಳೆದು ತರಲಾಗಿದೆ. ಜತೆಗೆ ಇದೇನೋ ಕೇಸರಿ ಶಾಲು ಅಂತ ಬೇರೆ ಉರಿಯುವ ಬೆಂಕಿಗೆ ತುಪ್ಪ ಹಾಕಲಾಗಿದೆ. ಈಗ ನಾನು ಹೇಳಿದ ವಿಚಾರದಲ್ಲಿ ಹಿಜಾಬ್​ ಬಗ್ಗೆ ಗಾಬರಿ ಆಗುವಂಥದ್ದೋ ಅಥವಾ ಕೇಸರಿ ಶಾಲು ಅಂತ ಜೋರು ಧ್ವನಿ ಮಾಡುವಂಥದ್ದು ಏನಿದೆ?

“ಭಾರತವು ಅಭಿವೃದ್ಧಿ ವಿಚಾರದಲ್ಲಿ ವಿಶ್ವಕ್ಕೇ ನಂಬರ್ 1 ಆಗಬೇಕು. ಅದಕ್ಕೆ ಏನು ಬೇಕೋ ಸಿದ್ಧವಾಗಬೇಕು. ಪಕ್ಕದ ಕೇರಳದಲ್ಲಿ ಶೇ 100ರ ಸಾಕ್ಷರತೆ ಇದೆ. ಅದು ಇಲ್ಲೂ ಆಗಬೇಕು, ಇಡೀ ದೇಶದಲ್ಲಿ ಆಗಬೇಕು ಅಂತ ಯೋಚಿಸುವುದರಲ್ಲಿ ಅರ್ಥ ಇದೆ. ಇನ್ನು ಶಿಕ್ಷಕ- ಶಿಕ್ಷಕಿಯರ ವಿಚಾರದಲ್ಲಿ ಹಿಂದೂ- ಮುಸ್ಲಿಂ ಎಂಬ ಭೇದ ಎಲ್ಲಿಯ ಮಾತಾಯಿತು. ಇದೇ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಯಾವುದೇ ಧರ್ಮಕ್ಕೆ ಸೇರಿದವರಾಗಿರಬಹುದು, ಈ ಸಮಯದಲ್ಲಿ ಕೋಮುದಳ್ಳುರಿ ಹೊತ್ತಿಸುವಂಥ ಕೆಲಸ ಮಾಡಬಾರದು. ನಾವೆಲ್ಲ ಈ ದೇಶದಲ್ಲಿ ಸೋದರ ಭಾವದಿಂದ ಇದ್ದೇವೆ. ರಮ್ಜಾನ್ ಅಥವಾ ಕೃಷ್ಣಾಷ್ಟಮಿ ಎರಡೂ ನಮ್ಮಗಳ ಪಾಲಿಗೆ ಹಬ್ಬವೇ. ಏಕೆಂದರೆ, ಪರಸ್ಪರರ ಮನಸ್ಸಿನಲ್ಲಿ ಕೋಮು ಸಂಘರ್ಷದ ನಂಜಿಲ್ಲ. ಅದನ್ನು ಹೊತ್ತಿಸುವುದಕ್ಕೆ ಯಾರೋ ಕೆಲವರು ಯತ್ನಿಸುತ್ತಿದ್ದಾರೆ. ಅದನ್ನು ನಾವು ಹತ್ತಿಕ್ಕಬೇಕು.

“ಶ್ರೀಲಂಕಾದಲ್ಲಿ ಸರಣಿ ಬಾಂಬ್​ ಸ್ಫೋಟದ ನಂತರ ಆ ದೇಶದಲ್ಲಿ ಬುರ್ಖಾ ನಿಷೇಧಿಸಲಾಯಿತು. ಇಂಥ ಕೆಲವು ಉದಾಹರಣೆಗಳ ನೆಪವನ್ನು ನೀಡಿ, ಇಲ್ಲೂ ಹಾಗೇ ಮಾಡಲು ಹೊರಡುವುದು ಸರಿಯಲ್ಲ. ಹೃದಯಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ಮಾತ್ರ ಚಿಕಿತ್ಸೆ ನೀಡಬೇಕು. ಇಡೀ ದೇಹಕ್ಕೆ ಆಪರೇಷನ್ ಮಾಡಲ್ಲ. ಯಾವುದಾದರೂ ತಪ್ಪು ಘಟನೆ ನಡೆದರೆ ಅದಕ್ಕೆ ಸೀಮಿತವಾಗಿ ಯೋಚಿಸಬೇಕೇ ವಿನಾ ಕೋತಿ ಹುಣ್ಣು ಬ್ರಹ್ಮರಾಕ್ಷಸ ಅನ್ನೋ ರೀತಿ ಮಾಡಬಾರದು. ಮೊದಲು ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಲಿ, ಎಲ್ಲರಿಗೂ ಶಿಕ್ಷಣ ಸಿಗಲಿ, ಆರೋಗ್ಯ- ಕಾನೂನು ಸುವ್ಯವಸ್ಥೆ ಸುಧಾರಿಸಲಿ – ಈ ಕಡೆ ಗಮನ ನೀಡಲಿ,” ಎಂದು ಮಾತು ಮುಗಿಸಿದರು ಇಮಾಮ್ ಇಮ್ರಾನ್.

ಇದನ್ನೂ ಓದಿ: ಕರ್ನಾಟಕ ಹಿಜಾಬ್​ ವಿವಾದ: ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಭಾರತದ ಗುಪ್ತಚರ ಸಂಸ್ಥೆಗಳು