
ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ 31 ಜನರು ಸಾವನ್ನಪ್ಪಿದ್ದಾರೆ.

ಅಸ್ಸಾಂನ 28 ಜಿಲ್ಲೆಗಳಲ್ಲಿ ಸುಮಾರು 19 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ 1 ಲಕ್ಷ ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಪ್ರವಾಹದಲ್ಲಿ ಅಸ್ಸಾಂನಲ್ಲಿ 12 ಮತ್ತು ಮೇಘಾಲಯದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಮೇಘಾಲಯದ ಚಿರಾಪುಂಜಿಯಲ್ಲಿ ಕಳೆದ 82 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ.

ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಕೂಡ ಭಾರೀ ಪ್ರವಾಹ ಉಂಟಾಗುತ್ತಿದೆ. ನಗರದಲ್ಲಿ ಕೇವಲ 6 ಗಂಟೆಗಳಲ್ಲಿ 145 ಮಿಮೀ ಮಳೆಯಾಗಿದೆ. ತ್ರಿಪುರಾ ಉಪಚುನಾವಣೆಯ ಪ್ರಚಾರದ ಮೇಲೂ ಇದು ಪರಿಣಾಮ ಬೀರಿದೆ.

ಮೇಘಾಲಯದ ಮೌಸಿನ್ರಾಮ್ ಮತ್ತು ಚಿರಾಪುಂಜಿಯಲ್ಲಿ 1940ರಿಂದ ಈಚೆಗೆ ಅಂದರೆ 82 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 60 ವರ್ಷಗಳಲ್ಲಿ ಅಗರ್ತಲಾದಲ್ಲಿ ಇದು ಮೂರನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹಠಾತ್ ಪ್ರವಾಹದಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಅಸ್ಸಾಂನಲ್ಲಿ ಸುಮಾರು 3,000 ಗ್ರಾಮಗಳು ಜಲಾವೃತವಾಗಿದ್ದು, 43,000 ಹೆಕ್ಟೇರ್ ಬೆಳೆ ಹಾನಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕರೆ ಮಾಡಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅಸ್ಸಾಂನ ಪ್ರವಾಹಪೀಡಿತ ಸ್ಥಳಗಳಿಗೆ ಕೇಂದ್ರದಿಂದ ಎಲ್ಲಾ ಸಹಾಯವನ್ನು ನೀಡುವ ಭರವಸೆ ನೀಡಿದ್ದಾರೆ. ಪ್ರವಾಹ ಮತ್ತು ಭೂಕುಸಿತದಿಂದ ಸಿಲುಕಿರುವ ಜನರಿಗಾಗಿ ಅಸ್ಸಾಂ ಸರ್ಕಾರವು ಗುವಾಹಟಿ ಮತ್ತು ಸಿಲ್ಚಾರ್ ನಡುವೆ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದೆ.

ಅಸ್ಸಾಂನಲ್ಲಿ 373 ಪರಿಹಾರ ಶಿಬಿರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಇರಿಸಲಾಗಿದೆ.

ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳಲ್ಲಿ, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಮತ್ತು ಅಸ್ಸಾಂ ಪೊಲೀಸರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಯೋಜನೆ ಮಾಡಲಾಗಿದೆ.

ಅಸ್ಸಾಂನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರು
Published On - 3:26 pm, Sat, 18 June 22