ಕೊಂಚ ಬಿಡುವು ನೀಡಿದ್ದ ವರುಣ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ಬೆಂಗಳೂರಿನ ಹಲವೆಡೆ ಧಾರಾಕಾರ ಸುರಿದ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಪ್ರತಿ ಭಾರೀ ಮಳೆ ಬಂದಾಗಲೂ ಇದೇ ಸಮಸ್ಯೆ ಎನ್ನುತ್ತಿದ್ದಾರೆ ಜನರು. ಮಹಾ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದು, ಆ ಮೂಲಕ ಬ್ರ್ಯಾಂಡ್ ಬೆಂಗಳೂರು ಅನಾವರಣವಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸ್ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.
ಧಾರಾಕಾರ ಮಳೆಗೆ ವಡ್ಡರಪಾಳ್ಯ ಜಂಕ್ಷನ್ ಬಳಿ ನೀರು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಯೋಗೇಶ್ವರನಗರ ಕ್ರಾಸ್ ಬಳಿ ಮಳೆ ನೀರು ನಿಂತಿರುವುದರಿಂದ ವೀರಣ್ಣಪಾಳ್ಯ ಕಡೆಗೆ ಹೋಗುವವರು ನಿಧಾನಗತಿಯಲ್ಲಿ ಸಂಚರಿಸುವಂತೆ ತಿಳಿಸಲಾಗಿದೆ.
ಇಂದು ಸುರಿದ ಧಾರಕಾರ ಮಳೆಗೆ ದೇವಿನಗರ ಅಂಡರ್ಪಾಸ್ ಬಳಿ ಕೂಡ ನೀರು ನಿಂತುಕೊಂಡಿದೆ. ಮಳೆಯಿಂದಾಗಿ ಅಂಡರ್ಪಾಸ್ ಸಂಪೂರ್ಣ ತುಂಬಿ ಹೋಗಿದೆ.
ಸದಾಶಿವನಗರ ಪೊಲೀಸ್ ಠಾಣೆ ಬಳಿ ಮತ್ತು ಹೆಬ್ಬಾಳ ಡೌನ್ ರ್ಯಾಂಪ್ ಬಳಿ ಕೂಡ ಮಳೆಯಿಂದಾಗಿ ರಸ್ತೆ ತುಂಬೆಲ್ಲಾ ನೀರು ನಿಂತ್ತುಕೊಂಡಿದೆ. ಈ ಮಧ್ಯೆ ಕೆಟ್ಟು ಹೋದ ಕಾರನ್ನು ಜನರು ತಳ್ಳುತ್ತಿದ್ದಾರೆ.
ಸರ್ವಿಸ್ ರಸ್ತೆಯಲ್ಲಿ ನಿಂತ ಮಳೆ ನೀರಿಗೆ ಅರ್ಧಕರ್ಧ ಕಾರುಗಳು ಮುಳುಗಡೆ ಆಗಿವೆ. ಇತ್ತ ವಿಂಡ್ಸರ್ ಮ್ಯಾನರ್ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ಮಳೆ ನೀರು ನಿಂತ್ತುಕೊಂಡಿದ್ದು, ನೀರು ಹೋಗಿಸಲು ಸಂಚಾರಿ ಪೊಲೀಸ್ ಪ್ರಯತ್ನಿಸುತ್ತಿದ್ದಾರೆ.
ಇನ್ನು ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣ ನಗರ ಅಂಡರ್ ಬ್ರಿಡ್ಜ್ ಬಳಿ ಭಾರಿ ಮಳೆಯಿಂದಾಗಿ ವಾಟರ್ ಲಾಗಿಂಗ್ ಉಂಟಾಗಿತ್ತು. ಹೀಗಾಗಿ ವಾಹನ ಸವಾರರು ಪರದಾಡಿದ್ದಾರೆ. ಸ್ಥಳದಲ್ಲಿ ನಮ್ಮ ಸಿಬ್ಬಂದಿ ಹಾಜರಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಭಾರೀ ಮಳೆಯಿಂದಾಗಿ ಹೆಣ್ಣೂರು, ಎಚ್ಆರ್ಬಿಆರ್ ಲೇಔಟ್, ಕಲ್ಯಾಣನಗರ, ಜಯಮಹಲ್ ರಸ್ತೆಯ ಒಆರ್ಆರ್ನಲ್ಲಿ ಕೂಡ ರಸ್ತೆಗಳು ಕೆರೆಯಂತಾಗಿವೆ. ವಾಹನ ಸವಾರರು ಪರದಾಡಿದ್ದಾರೆ.