
ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾ 1-3 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿದೆ. ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದ ತಂಡಕ್ಕೆ ಆ ಬಳಿಕ ಗೆಲುವು ಎಂಬುದು ಮರಿಚಿಕೆಯಾಯಿತು. ತಂಡದ ಈ ಹೀನಾಯ ಪ್ರದರ್ಶನಕ್ಕೆ ಹಲವು ಕಾರಣಗಳಿವೆ. ಅದರಲ್ಲೂ ಪ್ರಮುಖವಾಗಿ ಈ ಐದು ತಪ್ಪುಗಳು ತಂಡದ ಸರಣಿ ಸೋಲಿಗೆ ಕಾರಣವಾದವು.

ಸಮತೋಲಿತ ತಂಡ ಕಟ್ಟಲಿಲ್ಲ: ಸರಣಿ ಸೋಲಿಗೆ ಪ್ರಮುಖ ಕಾರಣ ಟೀಂ ಇಂಡಿಯಾ ಸಮತೋಲಿತವಾಗಿರಲಿಲ್ಲ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ಗಳ ಕೊರತೆ ಎದ್ದು ಕಾಣುತ್ತಿತ್ತು. ತಂಡದಲ್ಲಿ ಆಡಿದವರಲ್ಲಿ ಯಾರೊಬ್ಬರು ಕ್ರೀಸ್ನಲ್ಲಿ ಹೆಚ್ಚು ನಿಂತು ಬೌಲರ್ಗಳನ್ನು ಸುಸ್ತು ಮಾಡುವ ಕೆಲಸವನ್ನು ಮಾಡಲಿಲ್ಲ. ಇದು ಎದುರಾಳಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಯಿತು.

ಅನುಭವಿಗಳ ಫ್ಲಾಪ್ ಶೋ: ಒಂದೆಡೆ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ಗಳ ಕೊರತೆ ಇದ್ದರೆ, ಇನ್ನೊಂದೆಡೆ ಅನುಭವಿಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ರಂತಹ ಬ್ಯಾಟ್ಸ್ಮನ್ಗಳು ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ. ಇತ್ತ ಕಳೆದ ಪ್ರವಾಸದಲ್ಲಿ ಮಿಂಚಿದ್ದ ರಿಷಬ್ ಪಂತ್ಗೂ ವಿಶೇಷವಾಗಿ ಏನನ್ನು ಮಾಡಲು ಸಾಧ್ಯವಾಗಲಿಲ್ಲ.

ಕಳಪೆ ನಾಯಕತ್ವ: ಬುಮ್ರಾ ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಟೀಂ ಇಂಡಿಯಾದ ಬೃಹತ್ ಗೆಲುವು ದಾಖಲಿಸಿತ್ತು. ಆದರೆ ರೋಹಿತ್ ಶರ್ಮಾ ನಾಯಕತ್ವವಹಿಸಿಕೊಂಡ ನಂತರ ತಂಡ ಸೋಲಿಗೆ ಸುಳಿಗೆ ಸಿಲುಕಿಕೊಂಡಿತು. ಯಾವ ಸಂದರ್ಭದಲ್ಲಿ ಯಾವ ವೇಗಿಯನ್ನು ಕಣಕ್ಕಿಳಿಸಬೇಕು. ಫೀಲ್ಡ್ ಪ್ಲೇಸ್ಮೆಂಟ್ ಹೇಗಿರಬೇಕು ಎಂಬುದನ್ನು ನಿರ್ಧರಿಸುವಲ್ಲಿ ರೋಹಿತ್ ವಿಫಲರಾದರು. ಹಾಗೆಯೇ ಆಟಗಾರನಾಗಿಯೂ ರೋಹಿತ್ ರನ್ ಬರ ಎದುರಿಸಬೇಕಾಯಿತು.

ಏಕಾಂಗಿಯಾದ ಬುಮ್ರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರನೆಂದರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರ. ಅವರನ್ನು ಹೊರತುಪಡಿಸಿ ಯಾರೊಬ್ಬರು ಆಸೀಸ್ ಆಟಗಾರರಿಗೆ ತೊಂದರೆ ನೀಡುವ ಕೆಲಸವನ್ನು ಮಾಡಲಿಲ್ಲ. ಅನುಭವಿಗಳಾದ ಜಡೇಜಾ ಹಾಗೂ ಅಶ್ವಿನ್ಗೂ ಈ ಪ್ರವಾಸದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಇತ್ತ ಉಳಿದ ವೇಗಿಗಳು ಕೂಡ ಬುಮ್ರಾಗೆ ಸಾಥ್ ನೀಡಲಿಲ್ಲ.

ತಂಡದ ಸಂಯೋಜನೆಯಲ್ಲಿ ಲೋಪ: ಬಾರ್ಡರ್-ಗಾವಸ್ಕರ್ ಸರಣಿಯ ಪ್ರತಿ ಪಂದ್ಯದಲ್ಲೂ ಭಾರತ ತಂಡ ಬಹುತೇಕ ವಿಭಿನ್ನ ಸಂಯೋಜನೆಯೊಂದಿಗೆ ಮೈದಾನಕ್ಕಿಳಿಯಿತು. ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿತ್ತು. ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸ್ಥಾನವನ್ನು ಪದೇ ಪದೇ ಬದಲಿಸಲಾಯಿತು. ಹಾಗೆಯೇ ನಾಲ್ಕನೇ ಟೆಸ್ಟ್ನಲ್ಲಿ ಶುಭ್ಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಯಿತು. ಸಿಡ್ನಿ ಟೆಸ್ಟ್ನಲ್ಲಿ ಆರು ವಿಕೆಟ್ಗಳನ್ನು ಪಡೆದ ಪ್ರಸಿದ್ಧ ಕೃಷ್ಣ ಅವರನ್ನು ಆರಂಭಿಕ ಪಂದ್ಯಗಳಲ್ಲಿ ಆಡಿಸದೆ ಮ್ಯಾನೇಜ್ಮೆಂಟ್ ದೊಡ್ಡ ತಪ್ಪು ಮಾಡಿತು.