
ಏಷ್ಯಾಕಪ್ಗಾಗಿ ಟೀಂ ಇಂಡಿಯಾವನ್ನು ಪ್ರಕಟಿಸಿದಾಗಿನಿಂದ ಶ್ರೇಯಸ್ ಅಯ್ಯರ್ ಅವರ ಹೆಸರು ಸುದ್ದಿಯಲ್ಲಿದೆ. ಅವರನ್ನು ತಂಡದಲ್ಲಿ ಆಯ್ಕೆ ಮಾಡದಿರುವುದು ಅವರ ಅಭಿಮಾನಿಗಳಿಗೆ ಮತ್ತು ಅನೇಕ ಮಾಜಿ ಕ್ರಿಕೆಟಿಗರಿಗೆ ಅಸಮಾಧಾನ ತಂದಿದೆ. ಇದೆಲ್ಲದರ ನಡುವೆ ಶ್ರೇಯಸ್ ಅಯ್ಯರ್ ಇದೀಗ ಮತ್ತೊಂದು ಆಘಾತ ಎದುರಾಗಿದೆ.

ವಾಸ್ತವವಾಗಿ ಅನುಭವಿ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಇಂದು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಆ ಬಳಿಕ ಶ್ರೇಯಸ್ ಅಯ್ಯರ್ಗೆ ಮುಂಬೈ ತಂಡದ ನಾಯಕತ್ವ ಸಿಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೀಗ ಈ ಬಗ್ಗೆ ಸುದ್ದಿಯೊಂದು ಹೊರಬಿದ್ದಿದ್ದು, ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ತಂಡದ ನಾಯಕತ್ವವನ್ನು ಪಡೆಯುತ್ತಿದ್ದಾರೆ ಎಂಬ ವರದಿಗಳಿವೆ.

ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಹೊಸ ದೇಶೀಯ ಸೀಸನ್ಗೂ ಮುಂಚಿತವಾಗಿ ರಹಾನೆ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನು ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಿದೆ. ವರದಿಗಳನ್ನು ನಂಬುವುದಾದರೆ, ಮುಂಬರುವ ದುಲೀಪ್ ಟ್ರೋಫಿಗೂ ಠಾಕೂರ್ ಅವರನ್ನು ಪಶ್ಚಿಮ ವಲಯ ತಂಡದ ನಾಯಕರನ್ನಾಗಿ ಮಾಡಲಾಗಿದೆ.

ಆದರೆ ಇಲ್ಲಿರುವ ದೊಡ್ಡ ಪ್ರಶ್ನೆಯೆಂದರೆ, ರಹಾನೆ ನಂತರ ಅಯ್ಯರ್ ಅತ್ಯುತ್ತಮ ಆಯ್ಕೆಯಾಗಿರಲಿಲ್ಲವೇ? ಅವರು ಈಗಾಗಲೇ ಮುಂಬೈನ ವೈಟ್ ಬಾಲ್ ತಂಡದ ನಾಯಕರಾಗಿದ್ದು, ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೆ ಕಳೆದ ಸೀಸನ್ನಲ್ಲಿ ಮುಂಬೈ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಚಾಂಪಿಯನ್ ಆಗಿಯೂ ಮಾಡಿದ್ದಾರೆ.

ಶ್ರೇಯಸ್ ಅಯ್ಯರ್ ಕಳೆದ ಎರಡು ವರ್ಷಗಳಲ್ಲಿ ಪ್ರತಿಯೊಂದು ಸ್ವರೂಪದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. 2024 ರಲ್ಲಿ ಅಯ್ಯರ್ ಅವರನ್ನು ಬಿಸಿಸಿಐನ ಕೇಂದ್ರ ಒಪ್ಪಂದದಿಂದ ಕೈಬಿಟ್ಟ ನಂತರ, ಅವರು ದೇಶೀಯ ಕ್ರಿಕೆಟ್, ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ತಂಡವವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅಲ್ಲದೆ ಐಪಿಎಲ್ನಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ಗೆ ಕರೆದೊಯ್ದರು. ಆದರೆ ಇದರ ಹೊರತಾಗಿಯೂ ಅವರನ್ನು ಏಷ್ಯಾಕಪ್ ಟಿ20 ಗೆ ಅರ್ಹರೆಂದು ಪರಿಗಣಿಸಲಾಗಿಲ್ಲ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಈಗ ಶ್ರೇಯಸ್ ಅಯ್ಯರ್ ಎಷ್ಟು ಸಮಯ ಕಾಯುತ್ತಲೇ ಇರುತ್ತಾರೆ ಎಂಬುದಕ್ಕೆ ಉತ್ತರವನ್ನು ಸಹ ಕಂಡುಹಿಡಿಯಬೇಕಾಗಿದೆ.