- Kannada News Photo gallery Cricket photos Shubman Gill Injury: Devdutt Padikkal Called Up for Border-Gavaskar Test Series
ಪರ್ತ್ ಟೆಸ್ಟ್ನಿಂದ ಗಿಲ್ ಔಟ್; ರಾಹುಲ್ ಜೊತೆಗೆ ಮತ್ತೊಬ್ಬ ಕನ್ನಡಿಗನಿಗೆ ತಂಡದಲ್ಲಿ ಸ್ಥಾನ..!
Border-Gavaskar Trophy: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಶುಭ್ಮನ್ ಗಿಲ್ ಗಾಯಗೊಂಡಿದ್ದಾರೆ. ಇದರಿಂದಾಗಿ ಅವರ ಸ್ಥಾನಕ್ಕೆ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ. ಪಡಿಕ್ಕಲ್ ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.ಹೀಗಾಗಿ ಪಡಿಕ್ಕಲ್ ಪರ್ತ್ ಟೆಸ್ಟ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ.
Updated on: Nov 17, 2024 | 7:39 PM

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಶುಕ್ರವಾರ ನವೆಂಬರ್ 22 ರಿಂದ ಪರ್ತ್ನ ಆಪ್ಟಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದು, ತಂಡದ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಇಂಜುರಿಯಿಂದಾಗಿ ಮೊದಲ ಟೆಸ್ಟ್ಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ ತಂಡದ ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್ನಲ್ಲಿ ಆಡುವ ಬಗ್ಗೆ ಇನ್ನು ಖಚಿತವಾಗಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇತ್ತು. ಆದರೆ ಇದೀಗ ಗಿಲ್ ಕೂಡ ಗಾಯಕ್ಕೆ ತುತ್ತಾಗಿದ್ದು, ಮೊದಲ ಟೆಸ್ಟ್ ಆಡುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಗಿಲ್ ಬದಲಿಯಾಗಿ ಮತ್ತೊಬ್ಬ ಆರಂಭಿಕನ ಹುಡುಕಾಟ ಶುರುವಾಗಿದ್ದು, ಕನ್ನಡಿಗನತ್ತ ಬಿಸಿಸಿಐ ದೃಷ್ಟಿ ನೆಟ್ಟಿದೆ.

ಶುಭ್ಮನ್ ಗಿಲ್ ಮೊದಲ ಟೆಸ್ಟ್ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪ್ರಸ್ತುತ ಟೀಂ ಇಂಡಿಯಾ ಅಭಿಮನ್ಯು ಈಶ್ವರನ್, ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ರೂಪದಲ್ಲಿ ಮೂರು ಆಯ್ಕೆಗಳನ್ನು ಹೊಂದಿದೆ. ಈ ಮೂವರಲ್ಲಿ ಜುರೆಲ್ ಮತ್ತು ಸರ್ಫರಾಜ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾಗಿದ್ದರೆ, ಈಶ್ವರನ್ ಮಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದಾರೆ.

ಈಗಾಗಲೇ ಆಸ್ಟ್ರೇಲಿಯಾ ಎ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಈಶ್ವರನ್, ಭಾರತ ಎ ಪರವಾಗಿ ಆಡಿದ್ದರು. ಆದರೆ ಯಾವುದೇ ಪ್ರಭಾವ ಬೀರಲು ಅವರಿಗೆ ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗಾಗಲೇ ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡು ಉತ್ತಮ ಪ್ರದರ್ಶನ ನೀಡಿರುವ ಕನ್ನಡಿಗೆ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಈಗ ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ.

ಕ್ರಿಕ್ಬಜ್ನ ವರದಿಯ ಪ್ರಕಾರ, ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯಾದಲ್ಲಿರುವ ಭಾರತ ಎ ತಂಡವು ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ. ಆದರೆ ಪಡಿಕ್ಕಲ್ ಆಸ್ಟ್ರೇಲಿಯಾದಲ್ಲಿಯೇ ಉಳಿಯುತ್ತಾರೆ. ಈ ತಂಡದಲ್ಲಿ ಈಶ್ವರನ್, ಜುರೆಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಕೆಲವು ಆಟಗಾರರಿದ್ದೂ, ಅವರು ಕೂಡ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ತಂಡದಲ್ಲಿ ಆಯ್ಕೆಯಾಗಿದ್ದಾರೆ.

ಹೀಗಾಗಿ ಈ ಎಲ್ಲಾ ಆಟಗಾರರು ಆಸ್ಟ್ರೇಲಿಯಾದಲ್ಲಿ ಭಾರತ ತಂಡದೊಂದಿಗೆ ಉಳಿಯುತ್ತಾರೆ. ಆದರೆ A ತಂಡದ ಉಳಿದ ಆಟಗಾರರು ಭಾರತಕ್ಕೆ ಹಿಂತಿರುಗುತ್ತಾರೆ. ಟೀಂ ಇಂಡಿಯಾದ ಅಗತ್ಯವನ್ನು ಪರಿಗಣಿಸಿ ರುತುರಾಜ್, ಸಾಯಿ ಸುದರ್ಶನ್ ಅಥವಾ ಪಡಿಕ್ಕಲ್ ಅವರನ್ನು ಆಸ್ಟ್ರೇಲಿಯಾದಲ್ಲೇ ಉಳಿಯಲು ಸೂಚಿಸಬಹುದು ಎಂದು ಈ ಮೊದಲು ವರದಿಯಾಗಿತ್ತು. ಇದೀಗ ಪಡಿಕ್ಕಲ್ ಮಾತ್ರ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿ ಉಳಿಯಲಿದ್ದಾರೆ.

ಕನ್ನಡಿಗ ಪಡಿಕ್ಕಲ್, ಆಸ್ಟ್ರೇಲಿಯಾ ಎ ವಿರುದ್ಧ ಆಡಿದ 2 ಅನಧಿಕೃತ ಟೆಸ್ಟ್ ಪಂದ್ಯಗಳ 4 ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 36, 88, 26 ಮತ್ತು 1 ರನ್ ಗಳಿಸಿದ್ದರು. ಅಲ್ಲದೆ ಪಡಿಕ್ಕಲ್ ಆಸ್ಟ್ರೇಲಿಯದ ಪಿಚ್ಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದರಿಂದ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದಲ್ಲದೆ ಪಡಿಕ್ಕಲ್, ಪರ್ತ್ ಟೆಸ್ಟ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆಗಳಿವೆ.
