ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ತನ್ನ ನಾಲ್ಕನೇ ಪಂದ್ಯದಲ್ಲಿ ಭಾರತ ಇಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ವಿಶ್ವಕಪ್ನಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿ ಬಳಿಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ವಿರುದ್ಧ ಜಯಗಳಿಸಿತು.
ಭಾರತ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಭರ್ಜರಿ ಫಾರ್ಮ್ನಲ್ಲಿದ್ದರೆ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಅವಳಿ ಸೋಲಿನ ನಂತರ ಗೆಲುವು ಅನಿವಾರ್ಯವಾಗಿದೆ. ತಂಡವು ಅಫ್ಘಾನಿಸ್ತಾನದ ವಿರುದ್ಧ ಗೆಲುವಿನೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು ಆದರೆ ಸತತ ಸೋಲುಗಳಿಂದ ದೊಡ್ಡ ಹಿನ್ನಡೆಯಾಗಿದೆ. ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಜೀವಂತವಾಗಿರಲು ಭಾರತದ ವಿರುದ್ಧ ಗೆದ್ದರೆ ಉತ್ತಮ.
ಏತನ್ಮಧ್ಯೆ, ಪುಣೆಯಲ್ಲಿ ನಿನ್ನೆ (ಬುಧವಾರ) ಲಘುವಾದ ತುಂತುರು ಮಳೆ ಬಂದಿದೆ. ಇದು ಟೀಮ್ ಇಂಡಿಯಾ ಆಟವನ್ನು ನೋಡಲು ಕಾಯುತ್ತಿರುವ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅಕ್ಯುವೆದರ್ ಪ್ರಕಾರ, ಅಕ್ಟೋಬರ್ 19 ರಂದು ಮಳೆಯ ತೊಂದರೆ ಇರುವುದಿಲ್ಲ. ಗುರುವಾರ ಮಳೆಯ ಸಾಧ್ಯತೆಗಳು 3 ಪ್ರತಿಶತದಷ್ಟು ಕಡಿಮೆಯಾಗುತ್ತದೆ.
ಪಂದ್ಯದ ದಿನ ತಾಪಮಾನವು ಸುಮಾರು 33 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ಆರ್ದ್ರತೆಯು ಶೇಕಡಾ 41 ರಷ್ಟಿರುತ್ತದೆ. ಸಂಜೆಯ ಹೊತ್ತಿಗೆ ತಾಪಮಾನವು ಕಡಿಮೆಯಾಗಲಿದ್ದು, ಇದು ಆಟಗಾರರಿಗೆ ಸುಲಭವಾಗಲಿದೆ. ಇಬ್ಬನಿಯು ಪಂದ್ಯದ ಮಧ್ಯೆ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿಲ್ಲ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ವರ್ಗ ಎಂದು ಹೇಳಬಹುದು. ಪಂದ್ಯದುದ್ದಕ್ಕೂ ಬ್ಯಾಟರ್ಗಳಿಗೆ ಈ ಪಿಚ್ ಸಹಕಾರ ನೀಡುತ್ತದೆ. ಬೌಲರ್ಗಳಿಗೆ ಇಲ್ಲಿ ದೊಡ್ಡ ಸವಾಲು ಎನ್ನಬಹುದು. ಮೈದಾನದ ಗಾತ್ರ ಚಿಕ್ಕದಾಗಿದ್ದು, ಇಲ್ಲಿ ಕೇವಲ 7 ಏಕದಿನ ಪಂದ್ಯಗಳನ್ನು ಆಡಲಾಗಿದೆ.
ಇಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 4 ರಲ್ಲಿ ಜಯಗಳಿದೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 356/2 ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಎರಡು ವರ್ಷಗಳ ನಂತರ ಇಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಿಚ್ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ಕುತೂಹಲ ಕೂಡ ಇದೆ. ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ ಆಯ್ಕೆ.
Published On - 7:56 am, Thu, 19 October 23