- Kannada News Photo gallery Cricket photos India will announce their ICC World Cup 2023 squad Today at 1 30 pm
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇಂದು ಭಾರತ ತಂಡ ಪ್ರಕಟ: ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ
India Team for ODI World Cup 2023: ಇಂದು ಮಧ್ಯಾಹ್ನ 1:30ಕ್ಕೆ ಕ್ಯಾಂಡಿಯಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಹೆಸರಿಸಲಿದ್ದಾರೆ. ಕೆಎಲ್ ರಾಹುಲ್ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ಇಶಾನ್ ಕಿಶನ್ ಬ್ಯಾಕ್ಅಪ್ ವಿಕೆಟ್ ಕೀಪರ್ ಆಯ್ಕೆ ಆಗಿದ್ದಾರೆ.
Updated on: Sep 05, 2023 | 8:44 AM

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇಂದು ಭಾರತ ಕ್ರಿಕೆಟ್ ತಂಡ ಪ್ರಕಟವಾಗಲಿದೆ. ಶನಿವಾರ ತಡರಾತ್ರಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು 15 ಆಟಗಾರರ ಪಟ್ಟಿಯನ್ನು ಅಂತಿಮ ಮಾಡಿದ್ದು, ಅದರ ಪ್ರಕಟಣೆಯನ್ನು ಇಂದು (ಸೆಪ್ಟೆಂಬರ್ 5) ಮಾಡಲಾಗುತ್ತದೆ.

ಇಂದು ಮಧ್ಯಾಹ್ನ 1:30ಕ್ಕೆ ಕ್ಯಾಂಡಿಯಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತಂಡವನ್ನು ಹೆಸರಿಸಲಿದ್ದಾರೆ. ಕೆಎಲ್ ರಾಹುಲ್ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ಇಶಾನ್ ಕಿಶನ್ ಬ್ಯಾಕ್ಅಪ್ ವಿಕೆಟ್ ಕೀಪರ್ ಆಯ್ಕೆ ಆಗಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ ಎಂದು ವರದಿ ಆಗಿದೆ.

ಕ್ಯಾಂಡಿಯಲ್ಲಿ ನಡೆದ ಏಷ್ಯಾಕಪ್ 2023 ರ ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡಿದ ಅಜಿತ್ ಅಗರ್ಕರ್ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ. ಏಷ್ಯಾಕಪ್ 2023 ಗಾಗಿ ಪ್ರಸ್ತುತ ಶ್ರೀಲಂಕಾದಲ್ಲಿರುವ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಭಾರತ ತಂಡದ ವಿಶ್ವಕಪ್ ಪಟ್ಟಿಯಿಂದ ಹೊರಗುಳಿದಿದ್ದಾರೆ.

ನಾಯಕ ರೋಹಿತ್ ಶರ್ಮಾ ಜೊತೆಗೆ ಶುಭ್ಮನ್ ಗಿಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಮುನ್ನಡೆಸಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಇರುವುದು ಖಚಿತವಾಗಿದೆ.

ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್ಮೆಂಟ್ ಭಾರತದ ಬ್ಯಾಟಿಂಗ್ ಲೈನ್ಅಪ್ ಬಗ್ಗೆ ಸಾಕಷ್ಟು ಗಮನ ಹರಿಸಿದೆ. ಇದಕ್ಕಾಗಿ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಅವರನ್ನು ಸೇರಿಕೊಂಡಿದೆ ಎನ್ನಲಾಗಿದೆ.

ಇದೇ ಮೊದಲ ಬಾರಿಗೆ ಭಾರತ ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ದೇಶದ ವಿವಿಧ ಮೈದಾನದಲ್ಲಿ ಈ ರಣ ರೋಚಕ ಪಂದ್ಯಗನ್ನು ಆಯೋಜಿಸಲಾಗಿದೆ. ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಭಾರತದ ಹೆಮ್ಮೆಯ ಕ್ರೀಡಾಂಗಣ ಎಂದು ಹೆಸರು ಪಡೆದುಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಪ್ರಾರಂಭವಾಗುವ ಒಂದು ದಿನದ ಮೊದಲು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 4 ರಂದು ಅದ್ಧೂರಿ ಓಪನಿಂಗ್ ಸೆರಮನಿ ನಡೆಯಲಿದೆ. ಇದರಲ್ಲಿ ಎಲ್ಲ ತಂಡದ ನಾಯಕರು ಭಾಗವಹಿಸಲಿದ್ದಾರೆ.

ಏಷ್ಯಾಕಪ್ ನಂತರ ಹಾಗೂ ವಿಶ್ವಕಪ್ಗೂ ಮುನ್ನ ಭಾರತವು ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಸೆಪ್ಟೆಂಬರ್ 21 ರಿಂದ 27 ರವರೆಗೆ ಆಡಲಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್ಗೆ ಆಯ್ಕೆ ಮಾಡುವ ಆಟಗಾರರನ್ನೇ ಈ ಸರಣಿಗೂ ಆಯ್ಕೆ ಮಾಡಲಿದ್ದಾರೆ.



















