
ಲೀಗ್ ಹಂತದಲ್ಲೇ ಪಯಣ ಮುಗಿಸಿದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯೆಂದರೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುತ್ತಾರಾ? ಇಲ್ಲವಾ? ಎಂಬುದು. ಈ ಪ್ರಶ್ನೆಗೆ ಸ್ವತಃ ಧೋನಿಯೇ ಉತ್ತರಿಸಬೇಕಿದೆ.

ಆದರೆ ಈ ನಡುವೆ ಸಿಎಸ್ಕೆ ಸಿಇಒ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಧೋನಿ ಲಭ್ಯತೆಯ ಬಗ್ಗೆ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರು ಧೋನಿ ನಿರ್ಧಾರಕ್ಕಾಗಿ ತಂಡವು ಕಾಯಲಿದೆ. ಫ್ರಾಂಚೈಸಿ ತನ್ನ ಮಾಜಿ ನಾಯಕನ ನಿರ್ಧಾರಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಭಿಮಾನಿಗಳಂತೆ ಫ್ರಾಂಚೈಸಿ ಕೂಡ ಧೋನಿ ಹಿಂತಿರುಗಿ 2025 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮತ್ತೊಂದು ಸೀಸನ್ ಆಡುತ್ತಾರೆ ಎಂದು ಆಶಿಸುತ್ತಿದೆ. ಆದರೆ ಧೋನಿ ಅಡುವ ಬಗ್ಗೆ ನನಗೆ ಗೊತ್ತಿಲ್ಲ. ಈ ಪ್ರಶ್ನೆಗೆ ಧೋನಿ ಮಾತ್ರ ಉತ್ತರಿಸಬೇಕು. ಆದರೆ ಎಂಎಸ್ ತೆಗೆದುಕೊಂಡ ನಿರ್ಧಾರಗಳನ್ನು ನಾವು ಯಾವಾಗಲೂ ಗೌರವಿಸುತ್ತೇವೆ ಎಂದಿದ್ದಾರೆ.

ಆದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಅವರು ಯಾವಾಗಲೂ ತಮ್ಮ ನಿರ್ಧಾರಗಳನ್ನ ತಕ್ಷಣವೇ ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ. ಆದರೆ ಅವರು ಮುಂದಿನ ವರ್ಷ ಸಿಎಸ್ಕೆಗೆ ಲಭ್ಯವಾಗುತ್ತಾರೆ ಎಂದು ನಾವು ತುಂಬಾ ಭರವಸೆ ಹೊಂದಿದ್ದೇವೆ ಎಂದಿದ್ದಾರೆ.

ಸಿಇಒ ಮಾತ್ರವಲ್ಲದೆ ಎಂಎಸ್ ಧೋನಿ ಅವರ ಮಾಜಿ ಸಹ ಆಟಗಾರರಾದ ಅಂಬಟಿ ರಾಯುಡು, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಅವರು ಮುಂದಿನ ಸೀಸನ್ನಲ್ಲಿ ಮಹಿ ಆಡುವುದನ್ನು ನೋಡಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 2024 ರ ಸೋಲಿನ ನಿರಾಸೆಯ ನಂತರ 18 ನೇ ಸೀಸನ್ನಲ್ಲಿ ಧೋನಿ ಬಲವಾದ ಪುನರಾಗಮನವನ್ನು ಮಾಡಲು ಉತ್ಸುಕರಾಗಿದ್ದಾರೆ ಎಂದು ಉತ್ತಪ್ಪ ಹೇಳಿದ್ದಾರೆ.