
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕಪ್ ಗೆಲ್ಲುವ ಕನಸು ಮುಂದುವರೆದಿದೆ. ಕಳೆದ 16 ಸೀಸನ್ಗಳಲ್ಲಿ ಆರ್ಸಿಬಿ ಪಾಲಿಗೆ ಮರೀಚಿಕೆಯಾಗಿದ್ದ ಐಪಿಎಲ್ ಟ್ರೋಫಿಯನ್ನು ಈ ಬಾರಿ ಎತ್ತಿ ಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಪ್ಲೇಆಫ್ವರೆಗೂ ದಿಟ್ಟ ಹೋರಾಟ ಪ್ರದರ್ಶಿಸಿದ್ದ ಆರ್ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿತು. ಈ ಮೂಲಕ ಐಪಿಎಲ್ ಸೀಸನ್ 17 ರ ಅಭಿಯಾನವನ್ನು ಅಂತ್ಯಗೊಳಿಸಿದೆ.

ಈ ಸೋಲಿನ ಬೆನ್ನಲ್ಲೇ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಆರ್ಸಿಬಿ ತಂಡವನ್ನು ಗುರಿಯಾಗಿಸಿ ಹಲವು ಹೇಳಿಕೆಗಳನ್ನು ನೀಡಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲದಿರಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಆರ್ಸಿಬಿ ತಂಡವನ್ನು ಉತ್ಸಾಹದಿಂದ ಬೆಂಬಲಿಸಿದ ಅಭಿಮಾನಿಗಳನ್ನು ನೋಡುತ್ತಿದ್ದರೆ ನಿಜಕ್ಕೂ ಹೃದಯ ಮಿಡಿಯುತ್ತೆ. ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್ ಮತ್ತು ನಾಯಕರುಗಳು ವೈಯುಕ್ತಿಕ ಮೈಲಿಗಲ್ಲುಗಳನ್ನೇ ನೆಚ್ಚಿಕೊಂಡಿದ್ದಾರೆ. ಒಂದು ವೇಳೆ ವೈಯುಕ್ತಿಕ ಸಾಧನೆಗಿಂತ ತಂಡಗಳ ಬಗ್ಗೆ ಆಸಕ್ತಿ ಹೊಂದಿದ್ದರೆ ಆರ್ಸಿಬಿ ತಂಡವು ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಗೆಲ್ಲುತ್ತಿತ್ತು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಆರ್ಸಿಬಿ ಎಷ್ಟು ಅದ್ಭುತ ಆಟಗಾರರನ್ನು ಕೈ ಬಿಟ್ಟಿದೆ ಎಂಬುದನ್ನು ನೀವೇ ನೆನಪಿಸಿಕೊಳ್ಳಿ. ಹೀಗಾಗಿ ತಂಡದ ಗೆಲುವಿಗೆ ಮೊದಲ ಆದ್ಯತೆ ನೀಡುವ ಆಟಗಾರರನ್ನು ಆಯ್ಕೆ ಮಾಡುವಂತೆ ಆರ್ಸಿಬಿ ಮ್ಯಾನೇಜ್ಮೆಂಟ್ ಮೇಲೆ ಒತ್ತಡ ಹಾಕಿ ಎಂದು ಅಭಿಮಾನಿಗಳಿಗೆ ಅಂಬಾಟಿ ರಾಯುಡು ತಿಳಿಸಿದ್ದಾರೆ.

ಅಲ್ಲದೆ ಮುಂದಿನ ಸೀಸನ್ಗಾಗಿ ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ತಂಡದ ಗೆಲುವಿನ ಆದ್ಯತೆ ನೀಡುವ ಆಟಗಾರರನ್ನು ಖರೀದಿಸುವುದರಿಂದ ಮೆಗಾ ಹರಾಜಿನಿಂದಲೇ ಆರ್ಸಿಬಿಯ ಹೊಸ ಅಧ್ಯಾಯ ಪ್ರಾರಂಭವಾಗಬಹುದು ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮುನ್ನ ಕೇವಲ ಸಂಭ್ರಮಾಚರಣೆ ಅಥವಾ ಆಕ್ರಮಣಕಾರಿ ವರ್ತನೆಯಿಂದ ಆರ್ಸಿಬಿ ತಂಡವು ಐಪಿಎಲ್ ಟ್ರೋಫಿ ಗೆಲ್ಲಲ್ಲ. ಅಥವಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ಮಾತ್ರಕ್ಕೆ ಕಪ್ ಸಿಗಲ್ಲ. ನೀವು ಟ್ರೋಫಿ ಗೆಲ್ಲಬೇಕಿದ್ದರೆ ಪ್ಲೇಆಫ್ನಲ್ಲಿ ಚೆನ್ನಾಗಿ ಆಡಬೇಕಾಗುತ್ತದೆ ಎಂದು ಅಂಬಾಟಿ ರಾಯುಡು ಹೇಳಿದ್ದರು. ಇದೀಗ ಆಟಗಾರರ ವೈಯುಕ್ತಿಕ ಮೈಲುಗಲ್ಲುಗಳ ಪ್ರಾಮುಖ್ಯತೆಯಿಂದಾಗಿಯೇ ಆರ್ಸಿಬಿ ಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.