
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 68ನೇ ಪಂದ್ಯದಲ್ಲಿ ಟಿವಿ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 78 ರನ್ ಕಲೆಹಾಕಿದ ಬಳಿಕ ವಿರಾಟ್ ಕೊಹ್ಲಿ (47) ಔಟಾದರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿ ಡುಪ್ಲೆಸಿಸ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.

ಆದರೆ ಮಿಚೆಲ್ ಸ್ಯಾಂಟ್ನರ್ ಎಸೆದ 13ನೇ ಓವರ್ನ ಕೊನೆಯ ಎಸೆತದಲ್ಲಿ ರಜತ್ ಪಾಟಿದಾರ್ ಸ್ಟ್ರೈಟ್ ಡ್ರೈವ್ ಶಾಟ್ ಬಾರಿಸಿದ್ದರು. ಚೆಂಡು ಸ್ಯಾಂಟ್ನರ್ ಕೈಗೆ ತಾಗಿ ನಾನ್ ಸ್ಟ್ರೈಕರ್ ಸ್ಟಂಪ್ಗೆ ಬಡಿಯಿತು. ಅತ್ತ ನಾನ್ ಸ್ಟ್ರೈಕರ್ ಎಂಡ್ನಲ್ಲಿದ್ದ ಫಾಫ್ ಡುಪ್ಲೆಸಿಸ್ ತಕ್ಷಣವೇ ಬ್ಯಾಟ್ ಅನ್ನು ಕ್ರೀಸ್ನಲ್ಲಿಟ್ಟಿದ್ದರು.

ಅತ್ತ ಮಿಚೆಲ್ ಸ್ಯಾಂಟ್ನರ್ ಮನವಿ ಸಲ್ಲಿಸುತ್ತಿದ್ದಂತೆ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ಗೆ ರಿಪ್ಲೇ ಪರಿಶೀಲಿಸುವಂತೆ ಮನವಿ ಮಾಡಿದರು. ಅದರಂತೆ ರಿಪ್ಲೇ ಪರಿಶೀಲಿಸಿದ ಟಿವಿ ಅಂಪೈರ್ ಫಾಫ್ ಡುಪ್ಲೆಸಿಸ್ ರನೌಟ್ ಎಂದು ತೀರ್ಪು ನೀಡಿದರು.

ಆದರೆ ಚೆಂಡು ವಿಕೆಟ್ಗೆ ಬಡಿಯುವ ಮುನ್ನವೇ ಫಾಫ್ ಡುಪ್ಲೆಸಿಸ್ ಬ್ಯಾಟ್ ಅನ್ನು ಕ್ರೀಸ್ನಲ್ಲಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರಿಂದ ಖುದ್ದು ಫಾಫ್ ಡುಪ್ಲೆಸಿಸ್ ಆಶ್ಚರ್ಯಚಕಿತರಾದರು. ಅತ್ತ ಅಭಿಮಾನಿಗಳು ಕೂಡ ಅಚ್ಚರಿಗೊಂಡರು.

ಈ ಅಂಪೈರ್ ತೀರ್ಪಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾದವು. ಅದರಲ್ಲೂ ಸಿಎಸ್ಕೆ ಫಿಕ್ಸರ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆದವು. ಇದಾಗ್ಯೂ ಅಂತಿಮವಾಗಿ ಈ ಪಂದ್ಯದಲ್ಲಿ ಆರ್ಸಿಬಿ 27 ರನ್ಗಳ ಜಯ ಸಾಧಿಸಿ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.
Published On - 7:13 am, Sun, 19 May 24