
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 4 ಪಂದ್ಯಗಳಲ್ಲಿ 2 ರಲ್ಲಿ ಸೋತಿದೆ. ಇನ್ನೆರಡು ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಅಂದರೆ ಇಲ್ಲಿ ಸಿಎಸ್ಕೆ ಗೆದ್ದಿರುವುದು ತವರಿನಲ್ಲಿ ನಡೆದ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಗಳಲ್ಲಿ ಮಾತ್ರ.

ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಸಿಎಸ್ಕೆ ಅಭಿಮಾನಿಗಳು ರುತುರಾಜ್ ಗಾಯಕ್ವಾಡ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ. ರುತುರಾಜ್ ಕಳಪೆ ನಾಯಕತ್ವದಿಂದ ಸಿಎಸ್ಕೆ ಸೋಲುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೂರುತ್ತಿದ್ದಾರೆ.

ಸಿಎಸ್ಕೆ ಅಭಿಮಾನಿಗಳ ಈ ವಿತಂಡ ವಾದಗಳ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಹರ್ಭಜನ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಕೂಡ ಸಿಎಸ್ಕೆ ಅಭಿಮಾನಿಗಳ ಮನಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅದು ಕೂಡ ಧೋನಿಯನ್ನು ಮುಂದಿಟ್ಟುಕೊಂಡು ಎಂಬುದು ವಿಶೇಷ.

ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ಮೊದಲೆರಡು ಮ್ಯಾಚ್ಗಳನ್ನು ಗೆದ್ದಾಗ ಸಿಎಸ್ಕೆ ಅಭಿಮಾನಿಗಳು ಧೋನಿಯ ಗರಡಿ ಹುಡುಗ, ಧೋನಿ ಹಿಂದೆ ನಿಂತು ರುತುರಾಜ್ ಅವರನ್ನು ಮುನ್ನಡೆಸುತ್ತಿದ್ದಾರೆ ಎಂದೆಲ್ಲಾ ಹಾಡಿ ಹೊಗಳಿದ್ದರು. ಅಂದರೆ ಸಿಎಸ್ಕೆ ತಂಡ ಗೆದ್ದಾಗ ಧೋನಿ ಯುವ ನಾಯಕನನ್ನು ಸರಿಯಾದ ದಿಕ್ಕಿನಲ್ಲಿ ನಡೆಸುತ್ತಿದ್ದಾರೆ ಎಂದು ಹಾಡಿ ಹೊಗಳಲಾಗಿತ್ತು.

ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತಾಗ ರುತುರಾಜ್ ಗಾಯಕ್ವಾಡ್ ನಾಯಕತ್ವವನ್ನು ದೂರುತ್ತಿದ್ದಾರೆ. ಅಂದರೆ ಸಿಎಸ್ಕೆ ಗೆದ್ದರೆ ಶ್ರೇಯಸ್ಸು ಧೋನಿಗೆ ಸಲ್ಲುತ್ತದೆ. ಒಂದು ವೇಳೆ ಸೋತರೆ ಅದಕ್ಕೆ ಕಾರಣ ರುತುರಾಜ್ ಗಾಯಕ್ವಾಡ್ ನಾಯಕತ್ವ... ಎಂದು ಸಿಎಸ್ಕೆ ಅಭಿಮಾನಿಗಳ ದೂರಿನ ಬಗ್ಗೆ ಮೊಹಮ್ಮದ್ ಕೈಫ್ ಮತ್ತು ಹರ್ಭಜನ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಸದ್ಯ 4 ಪಂದ್ಯಗಳನ್ನಾಡಿರುವ ಸಿಎಸ್ಕೆ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ತನ್ನ ಮುಂದಿನ ಪಂದ್ಯದಲ್ಲಿ ಸಿಎಸ್ಕೆ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಏಪ್ರಿಲ್ 8 ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.