
ಆಡಿರುವ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದಿರುವ ಸಿಎಸ್ಕೆ ತಂಡ ಲೀಗ್ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಎರಡೂ ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿತ್ತು. ಇದರ ಹೊರತಾಗಿಯೂ ಸಿಎಸ್ಕೆ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಅದಕ್ಕೆ ಕಾರಣ ಮಾಜಿ ನಾಯಕ ಎಂಎಸ್ ಧೋನಿ.

ವಾಸ್ತವವಾಗಿ ಸಿಎಸ್ಕೆ ತಂಡವನ್ನು ಐದೈದು ಬಾರಿ ಚಾಂಪಿಯನ್ ಮಾಡಿದ್ದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ತಂಡದ ನಾಯಕತ್ವ ತೊರೆದಿದ್ದರು. ಇದರೊಂದಿಗೆ ವೃತ್ತಿಜೀವನದ ಕೊನೆ ಹಂತದಲ್ಲಿರುವ ಸುಳಿವನ್ನು ಧೋನಿ ನೀಡಿದ್ದರು.

ಅದಕ್ಕೆ ಪೂರಕವಾಗಿ ಧೋನಿಗೆ ಇದು ಕೊನೆಯ ಐಪಿಎಲ್ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ. ಹೀಗಾಗಿ ತಂಡವನ್ನು ಇಷ್ಟು ವರ್ಷ ಯಶಸ್ಸಿನೆಡೆಗೆ ಮುನ್ನಡೆಸಿದ್ದ ಧೋನಿಯ ಆಟವನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಆಡಿದ ಎರಡೂ ಪಂದ್ಯಗಳಲ್ಲೂ ಧೋನಿ ಬ್ಯಾಟಿಂಗ್ಗೆ ಬರಲಿಲ್ಲ.

ಹಾಗಂತ ಎರಡೂ ಪಂದ್ಯಗಳಲ್ಲಿ ಧೋನಿಗೆ ಬ್ಯಾಟಿಂಗ್ಗೆ ಬರುವ ಅವಕಾಶ ಸಿಗಲಿಲ್ಲ ಅಂತಿಲ್ಲ. ಸಾಕಷ್ಟು ಅವಕಾಶಗಳಿದ್ದರೂ ಧೋನಿ ಮಾತ್ರ ಬ್ಯಾಟಿಂಗ್ಗೆ ಬರುವ ಮನಸ್ಸು ಮಾಡುತ್ತಿಲ್ಲ. ಇದು ಅಭಿಮಾನಿಗಳಿಗೆ ಬ್ರಹ್ಮನಿರಸನವನ್ನುಂಟು ಮಾಡಿದೆ. ಇದೆಲ್ಲದರ ನಡುವೆ ಧೋನಿ ಬ್ಯಾಟಿಂಗ್ಗೆ ಬರದಿರುವ ಬಗ್ಗೆ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಕಾರಣ ಬಹಿರಂಗಗೊಳಿಸಿದ್ದಾರೆ.

ಧೋನಿಯ ಬ್ಯಾಟಿಂಗ್ ಕ್ರಮಾಂಕ ಕುಸಿಯುತ್ತಿರುವುದಕ್ಕೆ ಕಾರಣ ತಿಳಿಸಿರುವ ಹಸ್ಸಿ, ಧೋನಿ ಬ್ಯಾಟಿಂಗ್ಗೆ ಬರದಿರಲು ಇಂಪ್ಯಾಕ್ಟ್ ಪ್ಲೇಯರ್ ನಿಯಮವೇ ಕಾರಣ ಎಂದಿದ್ದಾರೆ. ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಹೆಚ್ಚಿಸಿದೆ. ಇದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ಕ್ರಮಾಂಕ ಕುಸಿಯುವಂತೆ ಮಾಡಿದೆ ಎಂದಿದ್ದಾರೆ.

ಗುಜರಾತ್ ವಿರುದ್ಧದ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಸ್ಸಿ, ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಸೂಚನೆಗಳು ಪಂದ್ಯವನ್ನು ಮುಂದಕ್ಕೆ ಕೊಂಡೊಯ್ಯುತ್ತವೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ಧೋನಿಯ ಬ್ಯಾಟಿಂಗ್ ಕ್ರಮಾಂಕವನ್ನು ಎಂಟನೇ ಸ್ಥಾನಕ್ಕೆ ವಿಸ್ತರಿಸಿದೆ. ಧೋನಿ ಕೂಡ ನೆಟ್ಸ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹಸ್ಸಿ ಹೇಳಿದ್ದಾರೆ.

ಅಲ್ಲದೆ ಧೋನಿ 8ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬರುವುದು ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಬಿರುಸಿನ ಬ್ಯಾಟಿಂಗ್ ಮಾಡುವುದಕ್ಕೆ ಸಹಾಯ ಮಾಡುತ್ತಿದೆ. ಆಕ್ರಮಣಕಾರಿ ಬ್ಯಾಟಿಂಗ್ ಮಾಡುವಾಗ ಅಗ್ರ ಕ್ರಮಾಂಕ ಬೇಗನೇ ಔಟಾದರೂ ಟೀಕೆಗೆ ಒಳಗಾಗಬಾರದು ಎಂದು ತಂಡ ನಿರ್ಧರಿಸಿದೆ. ಏಕೆಂದರೆ ಇದು ತಂಡದ ತಂತ್ರ ಎಂದು ಹಸ್ಸಿ ಹೇಳಿದ್ದಾರೆ.