ಐಪಿಎಲ್ ಸೀಸನ್-18 ಆರಂಭಕ್ಕೆ ಇನ್ನುಳಿದಿರುವುದು ಕೇವಲ ದಿನಗಳು ಮಾತ್ರ. ಮಾರ್ಚ್ 22 ರಿಂದ ಶುರುವಾಗಲಿರುವ ರಂಗು ರಂಗಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಪರ ಕನ್ನಡಿಗರು ಕಣಕ್ಕಿಳಿಯಲಿದ್ದಾರಾ ಎಂಬುದೇ ಪ್ರಶ್ನೆ.
ಏಕೆಂದರೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ RCB ಫ್ರಾಂಚೈಸಿಯು 22 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ಬಳಗದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವುದು ಕೇವಲ ಇಬ್ಬರು ಮಾತ್ರ. ವಿಶೇಷ ಎಂದರೆ ಹೀಗೆ ಆರ್ಸಿಬಿ ಖರೀದಿಸಿದ ಇಬ್ಬರು ಆಟಗಾರರು ಕೂಡ ಈ ಹಿಂದೆ ಆರ್ಸಿಬಿ ತಂಡದಲ್ಲಿದ್ದ ಪ್ಲೇಯರ್ಸ್.
ಈ ಬಾರಿಯ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಹಿಂದೆ ಆರ್ಸಿಬಿ ಪರ ಆಡಿದ್ದ ದೇವದತ್ ಪಡಿಕ್ಕಲ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಹಾಗೆಯೇ ಕಳೆದ ಎರಡು ಸೀಸನ್ಗಳಿಂದ ಆರ್ಸಿಬಿ ಬಳಗದಲ್ಲಿದ್ದ ಮನೋಜ್ ಭಾಂಡಗೆಯನ್ನು ಮತ್ತೆ ಖರೀದಿಸಿದ್ದಾರೆ. ಅದರಂತೆ ಐಪಿಎಲ್ 2025 ರಲ್ಲಿ ಆರ್ಸಿಬಿ ಪಡೆಯ ಕನ್ನಡಿಗರಾಗಿ ದೇವದತ್ ಪಡಿಕ್ಕಲ್ ಹಾಗೂ ಮನೋಜ್ ಭಾಂಡಗೆ ಕಾಣಿಸಿಕೊಳ್ಳಲಿದ್ದಾರೆ.
ಇಲ್ಲಿ ಇಂಟ್ರೆಸ್ಟಿಗ್ ವಿಷಯ ಎಂದರೆ ಆರ್ಸಿಬಿಗಿಂತ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಹೆಚ್ಚಿನ ಕನ್ನಡಿಗರಿಗೆ ಮಣೆ ಹಾಕಿದ್ದಾರೆ. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ರೂಪಿಸಿರುವ 23 ಆಟಗಾರರ ಬಳಗದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಅದರಂತೆ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮನ್ವಂತ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ಇತ್ತ ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಕಾಣಿಸಿಕೊಂಡಿದ್ದರೂ, ಆರ್ಸಿಬಿ ಫ್ರಾಂಚೈಸಿ ಸ್ಥಳೀಯ ಆಟಗಾರರನ್ನು ನಿರ್ಲಕ್ಷಿಸಿರುವುದು ಸ್ಪಷ್ಟ. ಇದಕ್ಕೆ ಸಾಕ್ಷಿಯೇ ಈ ಹಿಂದೆ ಆರ್ಸಿಬಿ ಪರ ಕಾಣಿಸಿಕೊಂಡಿದ್ದ ಇಬ್ಬರನ್ನು ಮತ್ತೆ ಖರೀದಿಸಿರುವುದು. ಇದಾಗ್ಯೂ ಕಳೆದ ಎರಡು ಸೀಸನ್ಗಳಲ್ಲಿ ಆರ್ಸಿಬಿ ಪರ ಬೆಂಚ್ ಕಾದಿದ್ದ ಯುವ ಆಲ್ರೌಂಡರ್ ಮನೋಜ್ ಭಾಂಡಗೆಗೆ ಈ ಬಾರಿಯಾದರೂ ಚಾನ್ಸ್ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.