- Kannada News Photo gallery Cricket photos KL Rahul Explains Lucknow Super Giants Exit: New Beginnings & IPL 2025
KL Rahul: ‘ಆಟದಲ್ಲಿ ಸ್ವಾತಂತ್ರ್ಯ ಬೇಕು’; ಲಕ್ನೋ ತೊರೆಯಲು ಕಾರಣ ತಿಳಿಸಿದ ರಾಹುಲ್
KL Rahul LSG exit: ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಏಕೆ ತೊರೆದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಕಳೆದ ಸೀಸನ್ನಲ್ಲಿ ತಂಡದ ಕಳಪೆ ಪ್ರದರ್ಶನ ಮತ್ತು ವೈಯಕ್ತಿಕ ನಿರಾಶೆಯಿಂದಾಗಿ ಸ್ವಾತಂತ್ರ್ಯದ ಅಗತ್ಯವನ್ನು ಅವರು ಉಲ್ಲೇಖಿಸಿದ್ದಾರೆ. ಹೊಸ ಆರಂಭಕ್ಕಾಗಿ ಮತ್ತು ತಮ್ಮ ಆಟವನ್ನು ಸ್ವತಂತ್ರವಾಗಿ ಆಡಲು ಅವರು ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಭಾರತೀಯ ಟಿ20 ತಂಡಕ್ಕೆ ಮರಳುವುದು ಅವರ ಗುರಿಯಾಗಿದೆ.
Updated on: Nov 11, 2024 | 9:24 PM

ಸಾಕಷ್ಟು ಅಂತೆ ಕಂತೆಗಳ ನಡುವೆ ಇದೀಗ ಕನ್ನಡಿಗ ಕೆಎಲ್ ರಾಹುಲ್ ತಾನು ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು ತೊರೆಯಲು ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಹುಲ್, ನಾನು ಹೊಸ ಆರಂಭವನ್ನು ಮಾಡಲು ಬಯಸುತ್ತಿದ್ದು, ನಾನು ನನ್ನ ಆಟವನ್ನು ಸ್ವತಂತ್ರವಾಗಿ ಆಡಬಹುದಾದ ನನ್ನ ಸ್ವಂತ ಆಯ್ಕೆಗಳನ್ನು ಹುಡುಕಲು ಬಯಸುತ್ತೇನೆ ಎಂದಿದ್ದಾರೆ.

ವಾಸ್ತವವಾಗಿ 2022 ರಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದ ರಾಹುಲ್, ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಪ್ರತಿನಿಧಿಸಿದಲ್ಲದೆ, ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇತ್ತ ರಾಹುಲ್ ಕೂಡ ಆಟಗಾರನಾಗಿ ಮತ್ತು ನಾಯಕನಾಗಿ ಎಡವಿದ್ದರು.

ಇದರ ಜೊತೆಗೆ ಕಳೆದ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ತಂಡದ ಮಾಲೀಕ ಸಂಜೀವ್ ಗೋಯಾಂಕ, ನಾಯಕ ರಾಹುಲ್ರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.

ಆ ಬಳಿಕ ಫ್ರಾಂಚೈಸಿ ಮತ್ತು ರಾಹುಲ್ ನಡುವೆ ಯಾವುದು ಸರಿ ಇಲ್ಲ ಎಂಬ ವರದಿ ಕೇಳಿಬರುತ್ತಲೇ ಇತ್ತು. ಇದರ ಜೊತೆಗೆ ಮುಂದಿನ ಆವೃತ್ತಿಯಲ್ಲಿ ರಾಹುಲ್ ಲಕ್ನೋ ತಂಡದ ಪರ ಆಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಹುಲ್, ಲಕ್ನೋ ತಂಡವನ್ನು ತೊರೆದು, ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ಆದರೆ ರಾಹುಲ್, ಲಕ್ನೋ ತಂಡವನ್ನು ತೊರೆಯಲು ನಿಕರ ಕಾರಣ ಏನು ಎಂಬುದು ಖಚಿತವಾಗಿರಲಿಲ್ಲ. ಆದರೀಗ . ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಹುಲ್, ಕಳೆದ ಸೀಸನ್ ಬ್ಯಾಟ್ಸ್ಮನ್ ಮತ್ತು ನಾಯಕನಾಗಿ ನನಗೆ ಉತ್ತಮವಾಗಿಲ್ಲ. ಕಳೆದ ಮೂರು ಸೀಸನ್ಗಳಲ್ಲಿ ಮೊದಲ ಬಾರಿಗೆ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಆಟದಲ್ಲಿ ಸ್ವಾತಂತ್ರ್ಯ ಬೇಕು ಎಂಬ ಕಾರಣಕ್ಕೆ ಲಕ್ನೋ ತಂಡವನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ‘ನಾನು ಹೊಸ ಆರಂಭವನ್ನು ಮಾಡಲು ಬಯಸುತ್ತೇನೆ. ನಾನು ನನ್ನ ಆಟವನ್ನು ಸ್ವತಂತ್ರವಾಗಿ ಆಡಬಹುದಾದ ನನ್ನ ಸ್ವಂತ ಆಯ್ಕೆಗಳನ್ನು ಹುಡುಕಲು ನಾನು ಬಯಸುತ್ತೇನೆ. ಲಕ್ನೋ ತಂಡದಲ್ಲಿ ನಾನು ಬಯಸಿದ ವಾತಾವರಣವಿರಲಿಲ್ಲ. ಹೀಗಾಗಿ ನಾನು ಮುಂದಾಲೋಚನೆ ಮಾಡಿ ಹೊಸ ದಾರಿ ಕಂಡಿಕೊಂಡೆ.

ನಾನು ಕೆಲವು ಸಮಯದಿಂದ ಟಿ20 ತಂಡದಿಂದ ಹೊರಗುಳಿದಿದ್ದೇನೆ. ಆಟಗಾರನಾಗಿ ನಾನು ಎಲ್ಲಿ ನಿಲ್ಲುತ್ತೇನೆ ಎಂದು ನನಗೆ ತಿಳಿದಿದೆ. ಪುಟಿದೇಳಲು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ. ಹಾಗಾಗಿ ಐಪಿಎಲ್ನ ಮುಂದಿನ ಸೀಸನ್ಗಾಗಿ ನಾನು ಎದುರು ನೋಡುತ್ತಿದ್ದೇನೆ. ಅದು ನನಗೆ ಕ್ರಿಕೆಟ್ಗೆ ಹೋಗಲು ಮತ್ತು ಆನಂದಿಸಲು ವೇದಿಕೆಯನ್ನು ನೀಡುತ್ತದೆ. ಭಾರತ ಟಿ20 ತಂಡದಲ್ಲಿ ಪುನರಾಗಮನ ಮಾಡುವುದು ನನ್ನ ಗುರಿ ಎಂದು ರಾಹುಲ್ ಹೇಳಿದ್ದಾರೆ.



















