
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. 17 ಸದಸ್ಯರ ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಸ್ ಭರತ್ ಮತ್ತೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಭರತ್ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 28 ರನ್ ಬಾರಿಸಿದ್ದ ಭರತ್, 2ನೇ ಇನಿಂಗ್ಸ್ನಲ್ಲಿ 41 ರನ್ಗಳಿಸಿದ್ದರು. ಇನ್ನು ದ್ವಿತೀಯ ಟೆಸ್ಟ್ನ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 6 ರನ್ಗೆ ಆಲೌಟ್ ಆಗಿದ್ದರು. ಹಾಗೆಯೇ 2ನೇ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 17 ರನ್ ಮಾತ್ರ. ಅಂದರೆ 4 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದರೂ ಕಲೆಹಾಕಿರುವ ಒಟ್ಟು ಸ್ಕೋರ್ 92 ರನ್ಗಳು ಮಾತ್ರ.

ಇದಾಗ್ಯೂ ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಮುಖ್ಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಸ್ ಭರತ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಇತ್ತ ಬಿಸಿಸಿಐಯ ಈ ನಡೆಗೆ ಇದೀಗ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಸೇರಿದಂತೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಏಕೆಂದರೆ ಕೆಎಸ್ ಭರತ್ ಭಾರತದ ಪರ ಇದುವರೆಗೆ 12 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಇನ್ನು ಕಲೆಹಾಕಿರುವುದು ಕೇವಲ 221 ರನ್ಗಳು ಮಾತ್ರ. ಅಂದರೆ 20.09 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ.

ಈ ಅಂಕಿ ಅಂಶಗಳ ಪ್ರಕಾರ ಕೆಎಸ್ ಭರತ್ ಟೀಮ್ ಇಂಡಿಯಾ ಪರ ಅಟ್ಟರ್ ಫ್ಲಾಪ್ ಆಟಗಾರ. ಇದಾಗ್ಯೂ ಆತನಿಗೆ ಸತತ ಅವಕಾಶ ನೀಡುತ್ತಿರುವುದೇಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ಲದೆ ಭರತ್ ಭಾರತ ತಂಡದ ಆಯ್ಕೆಗೆ ಅರ್ಹರೇ ಎಂಬ ಪ್ರಶ್ನೆಗಳನ್ನೂ ಕೂಡ ಮುಂದಿಡಲಾಗುತ್ತಿದೆ.

ಭರತ್ ಅರ್ಹತೆ ಬಗ್ಗೆ ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಅವರ ಪ್ರಥಮ ದರ್ಜೆ ಪ್ರದರ್ಶನದ ಅಂಕಿ ಅಂಶಗಳು. ಫಸ್ಟ್ ಕ್ಲಾಸ್ನಲ್ಲಿ ಇದುವರೆಗೆ 152 ಇನಿಂಗ್ಸ್ ಆಡಿರುವ ಕೆಎಸ್ ಭರತ್ ಕಲೆಹಾಕಿರುವುದು 5101 ರನ್ಗಳು ಮಾತ್ರ. ಅಂದರೆ 36.69 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತ ಟೀಮ್ ಇಂಡಿಯಾ ಪರ ಕೂಡ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಕಳೆದ ಕೆಲ ಸರಣಿಗಳಿಂದ ಅವರನ್ನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಲಾಗಿದೆ. ಹೀಗೆ ಸಿಕ್ಕ ಅವಕಾಶಗಳಲ್ಲಿ ಭರತ್ ಬ್ಯಾಟ್ನಿಂದ ಒಂದೇ ಒಂದು ದೊಡ್ಡ ಇನಿಂಗ್ಸ್ ಮೂಡಿಬಂದಿಲ್ಲ. ಇದಾಗ್ಯೂ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಿಗೆ ಮತ್ತೆ ಅವರನ್ನೇ ಆಯ್ಕೆ ಮಾಡಿರುವುದು ದೊಡ್ಡ ಅಚ್ಚರಿ.