2023ರ ಐಸಿಸಿ ಏಕದಿನ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ ಕ್ರಿಕೆಟ್ ತಂಡ, ಇಂದು ನಡೆಯಲಿರುವ 29ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಆಡಿರುವ 5 ಪಂದ್ಯಗಳ ಪೈಕಿ ಐದರಲ್ಲೂ ಗೆಲುವು ಸಾಧಿಸಿ ರೋಹಿತ್ ಶರ್ಮಾ ನೇತೃತ್ವದ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಅತ್ತ ಆಂಗ್ಲರಿಗೆ ಇಂದಿನ ಪಂದ್ಯ ಬಹುಮುಖ್ಯವಾಗಿದೆ. ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗೆ ಅನೇಕ ವಿಚಾರಗಳಿಂದ ಕುತೂಹಲ ಕೆರಳಿಸಿರುವ, ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡೋ-ಇಂಗ್ಲೆಂಡ್ ಕದನಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆಯೇ?.
ಭಾರತ-ಇಂಗ್ಲೆಂಡ್ ಇಂದಿನ ವಿಶ್ವಕಪ್ ಪಂದ್ಯಾವಳಿಗೆ ಮಳೆ ಕಾಟ ಇಲ್ಲ. ಮಳೆ ಆಗುವ ಸಾಧ್ಯತೆ ಶೇಕಡಾ 0 ಎಂದು ಹವಾಮಾನ ಇಲಾಖೆ ಹೇಳಿದೆ. ಪಂದ್ಯದ ಮಧ್ಯೆ ತಾಪಮಾನವು 31 ರಿಂದ 25 ಡಿಗ್ರಿ ಸೆಲ್ಸಿಯಸ್ನಷ್ಟು ಇರುತ್ತದೆ. ಮೊದಲ ಇನಿಂಗ್ಸ್ನಲ್ಲಿ ಬಿಸಿಲು ಇರಲಿದ್ದು, ನಂತರ ಇಬ್ಬನಿಯು ಕಾಣಿಸಿಕೊಳ್ಳಲಿದೆ.
ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿರುವ ಪಿಚ್ ಬ್ಯಾಟರ್ಗಳಿಗೆ ಅನುಕೂಲಕರವಾಗಿದೆ. ಆದಾಗ್ಯೂ, ಪಂದ್ಯ ಸಾಗಿದಂತೆ ಚೆಂಡು ಬ್ಯಾಟ್ಗೆ ನಿಧಾನವಾಗಿ ಬರುವುದರಿಂದ ಸ್ಪಿನ್ನರ್ಗಳಿಗೆ ನೆರವಾಗುತ್ತದೆ. ಮೈದಾನದ ಗಾತ್ರವು ಚಿಕ್ಕದಾಗಿರುವುದರಿಂದ ದೊಡ್ಡ ಸ್ಕೋರ್ ಆಗಬಹುದು.
ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಸೇವೆಯನ್ನು ಕಳೆದುಕೊಳ್ಳುವುದು ಖಚಿತವಾಗಿದೆ. ಸ್ಟಾರ್ ಆಲ್ರೌಂಡರ್ ಬಾಂಗ್ಲಾದೇಶದ ವಿರುದ್ಧ ಪಾದದ ಗಾಯಕ್ಕೆ ಒಳಗಾಗಿದ್ದು, ಇನ್ನೂ ತಂಡ ಸೇರಿಕೊಂಡಿಲ್ಲ. ಅವರ ಬದಲಿಗೆ ಮೊಹಮ್ಮದ್ ಶಮಿ ಪ್ಲೇಯಿಂಗ್ Xiನಲ್ಲಿ ಮುಂದುವರೆಯಬಹುದು.
ಇದರ ನಡುವೆ ಲಕ್ನೋದಲ್ಲಿನ ಪಿಚ್ ಸ್ಪಿನ್ನರ್ಗಳಿಗೆ ಸಹಾಯ ಆಗುವುದರಿಂದ ಆರ್. ಅಶ್ವಿನ್ ತಮ್ಮ ಎರಡನೇ ವಿಶ್ವಕಪ್ ಪಂದ್ಯವನ್ನು ಆಡುವ ಸಾಧ್ಯತೆ ಇದೆ. ಆದರೆ, ಇವರು ಯಾರ ಜಾಗದಲ್ಲಿ ಕಣಕ್ಕಿಳಿಯುತ್ತಾರೆ ಎಂಬುದು ನೋಡಬೇಕು. ಸೂರ್ಯಕುಮಾರ್ ಯಾದವ್ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಕೂಡ ಇದೆ.
ಉಳಿದಂತೆ ಟೀಮ್ ಇಂಡಿಯಾ ಭರ್ಜರಿ ಫಾರ್ಮ್ನಲ್ಲಿದೆ. ರೋಹಿತ್ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಗಿಲ್ ಕೂಡ ಫಾರ್ಮ್ನಲ್ಲಿದ್ದಾರೆ. ಕೊಹ್ಲಿ ಮತ್ತು ರಾಹುಲ್ ಕೊಡುಗೆ ಉತ್ತಮವಾಗಿದೆ. ಅಯ್ಯರ್ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಬೌಲಿಂಗ್ನಲ್ಲಿ ಜಡೇಜಾ, ಕುಲ್ದೀಪ್ ಬ್ರೇಕ್ ತಂದುಕೊಡುತ್ತಿದ್ದಾರೆ. ಬುಮ್ರಾ, ಸಿರಾಜ್ ಕೂಡ ಲಯದಲ್ಲಿದ್ದಾರೆ.