ಭಾರತದಲ್ಲಿ ಸದ್ಯ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ನಡೆಯುತ್ತಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ. ಆಡಿರುವ ಐದು ಪಂದ್ಯಗಳಲ್ಲಿ ಎಲ್ಲ ಐದು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಹೀಗೆ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿರುವ ಮಧ್ಯೆಯೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಕ್ರಿಕೆಟ್ ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ದ್ರಾವಿಡ್ ಅವರ ಕೋಚಿಂಗ್ ಒಪ್ಪಂದ ನವೆಂಬರ್ನಲ್ಲಿ ಕೊನೆಗೊಳ್ಳುತ್ತದೆ. ಭಾರತದ ವಿಶ್ವಕಪ್ ಫಲಿತಾಂಶದ ಆಧಾರದ ಮೇಲೆ ದ್ರಾವಿಡ್ ಅವರ ಭವಿಷ್ಯ ನಿಂತಿದೆ ಎನ್ನಬಹುದು. ಎಲ್ಲಾದರು ಭಾರತ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದರೆ ದ್ರಾವಿಡ್ ಕೋಚ್ ಸ್ಥಾನದಿಂಧ ಕೆಳಗಿಳಿಯಲು ನಿರ್ಧರಿಸಬಹುದು.
ಯಾಕೆಂದರೆ ದ್ರಾವಿಡ್ ಅಧಿಕಾರಾವಧಿಯಲ್ಲಿ ಟೀಮ್ ಇಂಡಿಯಾ ಯಾವುದೇ ಐಸಿಸಿ ಈವೆಂಟ್ ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ಆಟ ಸೆಮಿಫೈನಲ್ನಲ್ಲಿಯೇ ಅಂತ್ಯಗೊಂಡಿತ್ತು. ಆ ಬಳಿಕ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಭಾರತ ಚಾಂಪಿಯನ್ ಆಗಲಿಲ್ಲ. ಇದೀಗ ವಿಶ್ವಕಪ್ನಲ್ಲೂ ಸೋತರೆ ದ್ರಾವಿಡ್ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಹೆಚ್ಚಿದೆ.
ಟೀಮ್ ಇಂಡಿಯಾಕ್ಕೆ ಪುನಃ ಕೋಚ್ ಆಗುವ ಅವಕಾಶವನ್ನು ಬಿಸಿಸಿಐ ನೀಡಿದರೂ ಹಾಗೆಯೆ ಇದನ್ನು ದ್ರಾವಿಡ್ ತಿರಸ್ಕರಿಸಿದರೆ, ಬಿಸಿಸಿಐ ಇತರ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. 51 ವರ್ಷದ ದ್ರಾವಿಡ್ ಭಾರತದ ತಂಡದಿಂದ ಹೊರಬಂದು ಐಪಿಎಲ್ಗೆ ಕೋಚ್ ಆಗುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗಿದೆ.
ಕೋಚ್ ಅವಧಿ ವಿಸ್ತರಣೆ ಅಥವಾ ನೂತನ ಕೋಚ್ ಕುರಿತು ರಾಹುಲ್ ಅವರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಸಮಯದಲ್ಲಿ ನಾವೆಲ್ಲರೂ ವಿಶ್ವಕಪ್ ಮೇಲೆ ಗಮನಹರಿಸಿದ್ದೇವೆ. ಇಲ್ಲಿಯವರೆಗೆ, ಅವರು ಕೋಚ್ ಆಗಿ ಮುಂದುವರಿಯಲು ಬಯಸುವುದಿಲ್ಲ ಎಂಬ ಯಾವುದೇ ಸೂಚನೆ ನಮಗೆ ಬಂದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್ಸ್ಪೋರ್ಟ್ಗೆ ತಿಳಿಸಿದ್ದಾರೆ.
ರವಿಶಾಸ್ತ್ರಿ ಅವರ ಬಳಿಕ ಚುಕ್ಕಾಣಿ ಹಿಡಿದಾಗಿನಿಂದ ದ್ರಾವಿಡ್ ಮುಂದಾಳತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಮಿಶ್ರ ಫಲಿತಾಂಶವನ್ನು ನೀಡಿದೆ. ದ್ವಿಪಕ್ಷೀಯ ಸರಣಿಯಲ್ಲಿ ತಂಡವು ತವರು ಮತ್ತು ವಿದೇಶದಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿದ್ದರೂ, ಪ್ರಮುಖ ಪಂದ್ಯಾವಳಿಗಳಲ್ಲಿ ಟ್ರೋಫಿ ಗೆಲ್ಲಲು ವಿಫಲವಾಗಿದೆ.
ಒಟ್ಟಾರೆ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದವು ನವೆಂಬರ್ನಲ್ಲಿ ಕೊನೆಗೊಳ್ಳಲಿದೆ. ಇವರ ಬಳಿಕ ವಿವಿಎಸ್ ಲಕ್ಷ್ಮಣ್ ಅಥವಾ ಆಶಿಸ್ ನೆಹ್ರಾಗೆ ಭಾರತದ ಮುಖ್ಯ ಕೋಚ್ ಆಗುವ ಅವಕಾಶ ಸಿಗಬಹುದು ಎಂದು ಸಾಕಷ್ಟು ವರದಿಗಳಾಗಿವೆ.