ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಯುವ ದಾಂಡಿಗ ಮುಶೀರ್ ಖಾನ್ (Musheer Khan) ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಬರೋಡಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಪೃಥ್ವಿ ಶಾ (33) ಹಾಗೂ ಲಾಲ್ವಾನಿ (19) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ 18 ವರ್ಷದ ಮುಶೀರ್ ಖಾನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಕ್ಷಣಾತ್ಮಕ ಬ್ಯಾಟಿಂಗ್ಗೆ ಒತ್ತು ನೀಡಿದ ಮುಶೀರ್ ಮುಂಬೈ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಆದರೆ ಮತ್ತೊಂದೆಡೆ ಅಜಿಂಕ್ಯ ರಹಾನೆ (3), ಶಮ್ಸ್ ಮುಲಾನಿ (6) ಹಾಗೂ ಸೂರ್ಯಂಶ್ (20) ಔಟಾಗುವ ಮೂಲಕ ಮುಂಬೈ ಮತ್ತೆ ದಿಢೀರ್ ಕುಸಿತಕ್ಕೊಳಗಾಯಿತು. ಇದಾಗ್ಯೂ ಹಾರ್ದಿಕ್ ತಾಮೊರೆ (57) ಜೊತೆಗೂಡಿ ಇನಿಂಗ್ಸ್ ಕಟ್ಟಿದ ಮುಶೀರ್ ಮೊದಲ ದಿನದಾಟದ ಅಂತ್ಯಕ್ಕೆ 128 ರನ್ ಬಾರಿಸಿ ಅಜೇಯರಾಗಿ ಉಳಿದರು.
ಇನ್ನು ದ್ವಿತೀಯ ದಿನದಾಟದಲ್ಲೂ ಏಕಾಂಗಿ ಹೋರಾಟ ಮುಂದುವರೆಸಿದ ಮುಶೀರ್ ಖಾನ್ 357 ಎಸೆತಗಳಲ್ಲಿ 18 ಭರ್ಜರಿ ಪೋರ್ಗಳೊಂದಿಗೆ ಅಜೇಯ 203 ರನ್ ಬಾರಿಸಿದರು. ಮುಶೀರ್ ಖಾನ್ ಅವರ ಈ ಭರ್ಜರಿ ದ್ವಿಶತಕದ ನೆರವಿನಿಂದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 384 ರನ್ ಕಲೆಹಾಕಿದೆ.
ವಿಶೇಷ ಎಂದರೆ ಈ ಬಾರಿಯ ರಣಜಿ ಟೂರ್ನಿಗೆ ಮುಶೀರ್ ಖಾನ್ ಆಯ್ಕೆಯಾಗಿರಲಿಲ್ಲ. ಆದರೆ ಮುಂಬೈ ಆಟಗಾರ ಶಿವಂ ದುಬೆ ಗಾಯಗೊಂಡಿದ್ದ ಕಾರಣ ಅವರನ್ನು ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ನಿರ್ಣಾಯಕ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸುವ ಮೂಲಕ ಯುವ ಆಟಗಾರ ಅಬ್ಬರಿಸಿದ್ದಾರೆ.
ಅಂದಹಾಗೆ ಮುಶೀರ್ ಖಾನ್ ಟೀಮ್ ಇಂಡಿಯಾ ಆಟಗಾರ ಸರ್ಫರಾಝ್ ಖಾನ್ ಅವರ ಸಹೋದರ. ಅಣ್ಣ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ಅಬ್ಬರಿಸಿದರೆ, ತಮ್ಮ ಬರೋಡಾ ವಿರುದ್ಧ ದ್ವಿಶತಕ ಬಾರಿಸಿ ಮಿಂಚಿದ್ದಾರೆ.