
ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೀಸನ್ನಲ್ಲಿ ಸದ್ಯ ಸೆಮಿಫೈನಲ್ ಸುತ್ತು ನಡೆಯುತ್ತಿದೆ. ಈ ಸುತ್ತಿನಲ್ಲಿ ಮುಂಬೈ ಹಾಗೂ ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯದಲ್ಲಿ ಮುಂಬೈ ತಂಡ ಮೇಲುಗೈ ಸಾಧಿಸಿದೆ.

ತಮಿಳುನಾಡು ತಂಡವನ್ನು 146 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಮುಂಬೈ ತಂಡ ಎರಡನೇ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 353 ರನ್ ಕಲೆಹಾಕಿದೆ. ತಂಡದ ಪರ ಕೆಳಕ್ರಮಾಂಕದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಶಾರ್ದೂಲ್ ಠಾಕೂರ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.

ತಮ್ಮ ಇನ್ನಿಂಗ್ಸ್ನಲ್ಲಿ 105 ಎಸೆತಗಳನ್ನು ಎದುರಿಸಿದ ಠಾಕೂರ್ 13 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 109 ರನ್ ಸಿಡಿಸಿದರು. ಕೇವಲ 89 ಎಸೆತಗಳಲ್ಲಿ ಶತಕ ಪೂರೈಸಿದ ಶಾರ್ದೂಲ್ಗೆ ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೊದಲ ಶತಕವಾಗಿದೆ.

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ತಮಿಳುನಾಡು ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 146 ರನ್ ಗಳಿಸಿದೆ. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಮುಂಬೈ ತಂಡ ಒಂದು ಹಂತದಲ್ಲಿ 106 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಇದಾದ ಬಳಿಕ ಮೈದಾನಕ್ಕಿಳಿದ ಶಾರ್ದೂಲ್ ಠಾಕೂರ್, ಹಾರ್ದಿಕ್ ತಮೋರ್ ಜೊತೆಗೂಡಿ 8ನೇ ವಿಕೆಟ್ಗೆ 105 ರನ್ಗಳ ಶತಕದ ಜೊತೆಯಾಟ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ್ದ ಶಾರ್ದೂಲ್ ಠಾಕೂರ್ ಆ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ.

ಇನ್ನು ಟೀಂ ಇಂಡಿಯಾದಿಂದ ಹೊರಗುಳಿದು ಮುಂಬೈ ಪರ ಕಣಕ್ಕಿಳಿಯುತ್ತಿರುವ ಶ್ರೇಯಸ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ಈ ಇನ್ನಿಂಗ್ಸ್ನಲ್ಲಿ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ. ಶ್ರೇಯಸ್ ಅಯ್ಯರ್ ಕೇವಲ 3 ರನ್ ಗಳಿಸಿದರೆ, ಅಜಿಂಕ್ಯ ರಹಾನೆ 19 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ, ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಮುಶೀರ್ ಖಾನ್ ಈ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿ 131 ಎಸೆತಗಳಲ್ಲಿ 55 ರನ್ಗಳ ಇನ್ನಿಂಗ್ಸ್ ಆಡಿದರು.