ಐಸಿಸಿ ಏಕದಿನ ವಿಶ್ವಕಪ್ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಲಖನೌದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಆಯೋಜಿಸಲಾಗಿರುವ 29ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಜೋಸ್ ಬಬ್ಲರ್ ನೇತೃತ್ವದ ಇಂಗ್ಲೆಂಡ್ ಮುಖಾಮುಖಿ ಆಗಲಿದೆ.
ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಲು ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ. ಆದರೆ, ಇದರ ನಡುವೆ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇದರ ನಡುವೆ ಮತ್ತೊಬ್ಬ ಸ್ಟಾರ್ ಆಟಗಾರ ಗಾಯಕ್ಕೆ ತುತ್ತಾಗಿದ್ದಾರೆ.
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಭಾರತೀಯ ನಾಯಕ ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ನೆಟ್ಸ್ನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುವಾಗ ರೋಹಿತ್ ಅವರ ಬಲ ಮಣಿಕಟ್ಟಿಗೆ ಪೆಟ್ಟು ಬಿದ್ದಿದೆ. ಆಗ ತಕ್ಷಣವೇ ಟೀಮ್ ಇಂಡಿಯಾ ಫಿಸಿಯೋ ಬಂದು ವಿಚಾರಿಸಿದ್ದಾರೆ. ಆದರೆ, ಗಾಯದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.
ರೋಹಿತ್ ಶರ್ಮಾ ಇಂಜುರಿ ಬಗ್ಗೆ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ. ಆದರೆ, ಹಿಟ್ಮ್ಯಾನ್ ಗಾಯದ ಪ್ರಮಾಣ ಇಂದು ಹೇಗಿದೆ ಎಂಬುದು ತಿಳಿದುಬಂದಿಲ್ಲ. ಎಲ್ಲಾದರು ರೋಹಿತ್ ಅಲಭ್ಯರಾದರೆ ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಇಂದಿನ ಭಾರತ-ಇಂಗ್ಲೆಂಡ್ ಪಂದ್ಯ ಟೀಮ್ ಇಂಡಿಯಾದ ನಾಯಕನಾಗಿ ರೋಹಿತ್ ಶರ್ಮಾ ಅವರ 100 ನೇ ಪಂದ್ಯವಾಗಿದೆ. ರೋಹಿತ್ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ರೆಡ್-ಹಾಟ್ ಫಾರ್ಮ್ನಲ್ಲಿದ್ದಾರೆ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 62.20 ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ ಇಂದು ಕಣಕ್ಕಿಳಿದರೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 18,000 ರನ್ ಪೂರೈಸುವ ಅವಕಾಶವೂ ಇದೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 18 ರನ್ ಗಳಿಸಿದ ಐದನೇ ಭಾರತೀಯ ಆಟಗಾರನಾಗಲು ರೋಹಿತ್ ಶರ್ಮಾಗೆ ಕೇವಲ 47 ರನ್ಗಳ ಅಗತ್ಯವಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈ ವಿಶ್ವಕಪ್ನಲ್ಲಿ ಅಸಾಧಾರಣ ಸಾಧನೆ ಮಾಡಿದೆ. ಇದುವರೆಗೆ ಆಡಿದ ಎಲ್ಲಾ 5 ಪಂದ್ಯಗಳನ್ನು ಗೆದ್ದು 10 ಅಂಕ ಸಂಪಾದಿಸಿದೆ. ಇಂದಿನ ಪಂದ್ಯ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಜೊತೆಗೆ ಸೆಮಿ ಫೈನಲ್ಗೆ ಬಹುತೇಕ ಕಾಲಿಡಲಿದೆ.