- Kannada News Photo gallery Cricket photos Ruturaj Gaikwad's Century Leads West Zone to 363/6 in Duleep Trophy Semifinal
Duleep Trophy: ಮೊದಲ ದಿನವೇ 184 ರನ್ ಚಚ್ಚಿದ ರುತುರಾಜ್ ಗಾಯಕ್ವಾಡ್
Duleep Trophy Semifinal: ಪಶ್ಚಿಮ ವಲಯ ಮತ್ತು ಕೇಂದ್ರ ವಲಯ ತಂಡಗಳ ನಡುವಿನ ದುಲೀಪ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ರುತುರಾಜ್ ಗಾಯಕ್ವಾಡ್ ಅವರು ಅದ್ಭುತವಾದ 184 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ತಂಡದ ಇತರ ಬ್ಯಾಟ್ಸ್ಮನ್ಗಳು ನಿರಾಶಾದಾಯಕ ಪ್ರದರ್ಶನ ನೀಡಿದರೂ, ರುತುರಾಜ್ ಏಕಾಂಗಿಯಾಗಿ ಹೋರಾಡಿ ತಂಡವನ್ನು 363/6 ರನ್ಗಳಿಗೆ ಕೊಂಡೊಯ್ದಿದ್ದಾರೆ. ತನುಶ್ ಕೋಟ್ಯಾನ್ ಅವರು 65 ರನ್ ಗಳಿಸಿ ಅಜೇಯರಾಗಿದ್ದಾರೆ.
Updated on: Sep 04, 2025 | 5:25 PM

ದುಲೀಪ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ಪಶ್ಚಿಮ ವಲಯ ಹಾಗೂ ಕೇಂದ್ರ ವಲಯ ತಂಡಗಳ ನಡುವೆ ಇಂದಿನಿಂದ ಆರಂಭವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಶ್ಚಿಮ ವಲಯ ತಂಡದ ಪರ ರುತುರಾಜ್ ಗಾಯಕ್ವಾಡ್ ಸ್ಮರಣೀಯ ಇನ್ನಿಂಗ್ಸ್ ಆಡಿದ್ದಾರೆ. ತಂಡದ ಪ್ರಮುಖ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದಾಗ ಏಕಾಂಗಿಯಾಗಿ ಹೋರಾಡಿದ ರುತುರಾಜ್ ಶತಕದ ಇನ್ನಿಂಗ್ಸ್ ಆಡಿದರು.

ತಂಡದ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರುತುರಾಜ್ ಮೊದಲು 13 ಬೌಂಡರಿಗಳ ಸಹಾಯದಿಂದ ಶತಕ ಪೂರೈಸಿದರು. 70 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ರುತುರಾಜ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 8 ನೇ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ ಶ್ರೇಯಸ್ ಅಯ್ಯರ್ ಕೂಡ ಗೈಕ್ವಾಡ್ ಜೊತೆ ಉತ್ತಮ ಜೊತೆಯಾಟ ಕಟ್ಟಿದರು.

ಇದು ಮಾತ್ರವಲ್ಲದೆ ರುತುರಾಜ್ ಹಾಗೂ ಆರ್ಯ ದೇಸಾಯಿ 80 ರನ್ಗಳ ಜೊತೆಯಾಟವನ್ನು ಕಟ್ಟಿದರು. ಇನ್ನು ಕೆಳಕ್ರಮಾಂಕದಲ್ಲಿ ತನುಶ್ ಕೋಟ್ಯಾನ್ ಅವರಿಂದ ಉತ್ತಮ ಬೆಂಬಲ ಪಡೆದ ರುತುರಾಜ್ 150 ರನ್ಗಳನ್ನು ಸಹ ಪೂರೈಸಿದರು. ಇದರೊಂದಿಗೆ ದ್ವಿಶತಕದತ್ತ ಸಾಗುತ್ತಿದ್ದ ರುತುರಾಜ್ 206 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 184 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ರುತುರಾಜ್ ಹೊರತುಪಡಿಸಿ ತಂಡದ ಪರ ತನುಶ್ ಕೋಟ್ಯಾನ್ ಮಾತ್ರ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಇವರಿಬ್ಬರನ್ನು ಬಿಟ್ಟರೆ, ಆರಂಭಿಕನಾಗಿ ಕಣಕ್ಕಿಳಿದಿದ್ದ ಅನುಭವಿ ಯಶಸ್ವಿ ಜೈಸ್ವಾಲ್ ಕೇವಲ 4 ರನ್ಗಳಿಗೆ ಸುಸ್ತಾದರು. ಅವರಂತೆ ಶ್ರೇಯಸ್ ಅಯ್ಯರ್ ಕೂಡ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ ಕೇವಲ 25 ರನ್ಗಳಿಗೆ ವಿಕೆಟ್ ಒಪ್ಪಿಸಿದರು.

ದಿನದಾಟದಂತ್ಯಕ್ಕೆ ತನುಶ್ ಅಜೇಯ 65ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ನಾಯಕ ಶಾರ್ದೂಲ್ ಠಾಕೂರ್ 24 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಪಶ್ಚಿಮ ವಲಯ ತಂಡ 6 ವಿಕೆಟ್ ಕಳೆದುಕೊಂಡು 363 ರನ್ ಕಲೆಹಾಕಿದೆ.




