
ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೊಯೇಬ್ ಅಖ್ತರ್ (Shoaib Akhtar) ಸಖತ್ ಸುದ್ದಿಯಾಗಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್. ಈ ಪೋಸ್ಟ್ ಭಗವದ್ಗೀತೆಗೆ ಸಂಬಂಧಿಸಿದ್ದು ಎಂಬುದೇ ಇಲ್ಲಿ ವಿಶೇಷ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೊಯೇಬ್ ಅಖ್ತರ್ ಭಗವದ್ಗೀತೆ ಶ್ಲೋಕವನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಭಗವಾನ್ ವಿಷ್ಣುವಿನ ಅವತಾರವಾದದ ಚಿತ್ರದೊಂದಿಗೆ. ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರುವಿಲ್ಲ ಎನ್ನುವ ಶ್ಲೋಕದ ವಿಡಿಯೋವನ್ನು ಅಖ್ತರ್ ಶೇರ್ ಮಾಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಪಾಕಿಸ್ತಾನ್ ಕ್ರಿಕೆಟಿಗನ ಈ ಪೋಸ್ಟ್ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಅತ್ತ ಪಾಕ್ನ ಕೆಲವರು ತಗಾದೆ ತೆಗೆದಿದ್ದಾರೆ. ಇದಾಗ್ಯೂ ಶೊಯೇಬ್ ಅಖ್ತರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಈ ಪೋಸ್ಟ್ ಅನ್ನು ಅಳಿಸಿ ಹಾಕಿಲ್ಲ ಎಂಬುದು ವಿಶೇಷ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಶೊಯೇಬ್ ಅಖ್ತರ್ ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದರು. ಅಲ್ಲದೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಬೇಕೆಂದು ಹೇಳಿದ್ದರು. ಕಳೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತಿದ್ದ ಭಾರತ ತಂಡವು ಈ ಬಾರಿ ವಿಶ್ವಕಪ್ ಗೆಲ್ಲಬೇಕು, ರೋಹಿತ್ ಶರ್ಮಾ ಅದಕ್ಕೆ ಅರ್ಹರು ಎಂಬ ಹೇಳಿಕೆ ನೀಡಿದ್ದರು.

ಇದೀಗ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ಬಳಿಕ ಮಾತನಾಡಿದ್ದ ಅಖ್ತರ್, ಅರ್ಹ ತಂಡಕ್ಕೆ ವಿಶ್ವಕಪ್ ಟ್ರೋಫಿ ಸಂದಿದೆ. ರೋಹಿತ್ ಶರ್ಮಾ ಕೊನೆಗೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಅಖ್ತರ್, ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರುವಿಲ್ಲ ಎನ್ನುವ ಶ್ಲೋಕದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿರುವುದು ವಿಶೇಷ.

ಪಾಕಿಸ್ತಾನ್ ಪರ 46 ಟೆಸ್ಟ್ ಪಂದ್ಯಗಳನ್ನಾಡಿರುವ ಶೊಯೇಬ್ ಅಖ್ತರ್ 178 ವಿಕೆಟ್ ಕಬಳಿಸಿದ್ದಾರೆ. 163 ಏಕದಿನ ಪಂದ್ಯಗಳಿಂದ 247 ವಿಕೆಟ್ ಪಡೆದರೆ, 15 ಟಿ20 ಪಂದ್ಯಗಳಿಂದ 19 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ವಿಶ್ವ ದಾಖಲೆ ಕೂಡ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ ನ್ಯೂಝಿಲೆಂಡ್ ವಿರುದ್ದ 161.3 kph ವೇಗದಲ್ಲಿ ಚೆಂಡೆಸೆದು ಶೊಯೇಬ್ ಅಖ್ತರ್ ಈ ವಿಶ್ವ ದಾಖಲೆ ಬರೆದಿದ್ದಾರೆ.
Published On - 12:53 pm, Mon, 1 July 24