
ಸುಮಾರು 2 ತಿಂಗಳ ಬಳಿಕ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿರುವ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ತಮ್ಮ ಫಿಟ್ನೆಸ್ ಸಾಭೀತುಪಡಿಸಿರುವುದಲ್ಲದೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಬಿಸಿಸಿಐಗೆ ತಾನು ಸಂಪೂರ್ಣ ಫಿಟ್ ಆಗಿದ್ದೇನೆ ಎಂಬ ಮೆಸೇಜ್ ನೀಡಿದ್ದಾರೆ. ಹೀಗಾಗಿ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ಆಡುವುದು ಖಚಿತವಾಗಿದೆ.

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಆರನೇ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದಿರುವ ಶ್ರೇಯಸ್ ಅಯ್ಯರ್ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 82 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ಗಾಯಗೊಂಡ ನಂತರ ಮೊದಲ ಬಾರಿಗೆ ವೃತ್ತಿಪರ ಕ್ರಿಕೆಟ್ ಆಡುತ್ತಿರುವ ಅಯ್ಯರ್ ತಮ್ಮ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಬಾರಿಸಿದರು.

ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಶತಕ ಬಾರಿಸುವ ಅವಕಾಶ ಹೊಂದಿದ್ದರು. ಆದರೆ ಕುಶಾಲ್ ಪಾಲ್ ಎಸೆತದಲ್ಲಿ ಅಮನ್ಪ್ರೀತ್ಗೆ ಕ್ಯಾಚ್ ನೀಡಿ ಔಟಾದರು. ಆದಾಗ್ಯೂ, ಅವರು ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ ಬೌಂಡರಿ, ಸಿಕ್ಸರ್ಗಳಿಂದಲೇ 58 ರನ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದು ಮಾತ್ರವಲ್ಲದೆ, ತಮ್ಮ ಉತ್ತಮ ಫಾರ್ಮ್ ಅನ್ನು ಸಾಭೀತುಪಡಿಸಿದರು.

ಮೇಲೆ ಹೇಳಿದಂತೆ ಶ್ರೇಯಸ್ ಅಯ್ಯರ್ಗೆ, ಈ ಪಂದ್ಯವು ಪಂದ್ಯಕ್ಕಿಂತ ಹೆಚ್ಚಿನ ಪರೀಕ್ಷೆಯಾಗಿತ್ತು. ಅಯ್ಯರ್ ಅವರನ್ನು ನ್ಯೂಜಿಲೆಂಡ್ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದ್ದರೂ, ಅವರ ಪಂದ್ಯದ ಫಿಟ್ನೆಸ್ ನಿರ್ಣಾಯಕವಾಗಿರುತ್ತದೆ. ಇದಕ್ಕಾಗಿಯೇ ಬಿಸಿಸಿಐ ಈ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸುವಂತೆ ಕೇಳಿಕೊಂಡಿತು. ಅದರಂತೆ ಅಯ್ಯರ್ ತನ್ನ ಫಿಟ್ನೆಸ್ ಜೊತೆಗೆ ತನ್ನ ಫಾರ್ಮ್ ಅನ್ನು ಸಾಬೀತುಪಡಿಸಿದ್ದಾರೆ.

ಶ್ರೇಯಸ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಹಳಷ್ಟು ರನ್ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ 60 ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿರುವ ಅಯ್ಯರ್ 1,900 ಕ್ಕೂ ಹೆಚ್ಚು ರನ್ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಏಳು ಶತಕಗಳು ಮತ್ತು ಎಂಟು ಅರ್ಧಶತಕಗಳು ಸೇರಿವೆ.