
ಭಾರತ ತಂಡದ ತ್ರಿ ಫಾರ್ಮ್ಯಾಟ್ ಪ್ಲೇಯರ್ ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಟೀಮ್ ಇಂಡಿಯಾ ಪರ ಟೆಸ್ಟ್ ಹಾಗೂ ಟಿ20 ಪಂದ್ಯಗಳನ್ನಾಡಿ ವರ್ಷಗಳೇ ಕಳೆದಿವೆ. ಅದರಲ್ಲೂ ಈ ಬಾರಿಯ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದು ಟಿ20 ಕ್ರಿಕೆಟ್ಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಅಯ್ಯರ್ಗೆ ಇದೀಗ ನಿರಾಸೆಯಾಗಿದೆ. ಈ ನಿರಾಸೆಯ ಬೆನ್ನಲ್ಲೇ ಶ್ರೇಯಸ್ ಅಯ್ಯರ್ಗೆ ಗುಡ್ ನ್ಯೂಸ್ವೊಂದು ಸಿಗಲಿದೆ ಎಂದು ವರದಿಯಾಗಿದೆ.

ಹೌದು, ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಅಂದರೆ ಏಕದಿನ ತಂಡದ ನಾಯಕನಾಗಿ ಅಯ್ಯರ್ ಅವರನ್ನು ಪರಿಗಣಿಸಲಿದ್ದಾರೆ ಎಂದು ವರದಿಯಾಗಿದೆ. ಈ ವರದಿ ಪ್ರಕಾರ ರೋಹಿತ್ ಶರ್ಮಾ ಬಳಿಕ ಶ್ರೇಯಸ್ ಅಯ್ಯರ್ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಶೀಘ್ರದಲ್ಲೇ ಟೀಮ್ ಇಂಡಿಯಾದ ನಾಯಕತ್ವ ಬದಲಾಗಲಿದೆ. ಅದರಂತೆ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ಮುನ್ನ ಶುಭ್ಮನ್ ಗಿಲ್ ಭಾರತ ಏಕದಿನ ತಂಡದ ನಾಯಕರಾಗಲಿದ್ದಾರೆ ಎನ್ನಲಾಗಿತ್ತು.

ಆದರೀಗ ಶ್ರೇಯಸ್ ಅಯ್ಯರ್ ಅವರಿಗೆ ಏಕದಿನ ತಂಡದ ನಾಯಕತ್ವ ನೀಡಲು ಬಿಸಿಸಿಐ ಆಸಕ್ತಿ ತೋರಿದೆ. ಅತ್ತ ಟೆಸ್ಟ್ ಹಾಗೂ ಟಿ20 ತಂಡಗಳನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಟಿ20 ವಿಶ್ವಕಪ್ 2026 ಬಳಿಕ ಸೂರ್ಯಕುಮಾರ್ ಯಾದವ್ ಅವರ ಸ್ಥಾನಕ್ಕೆ ಗಿಲ್ ಆಯ್ಕೆಯಾಗುವುದು ಖಚಿತ. ಇದೇ ಕಾರಣದಿಂದಾಗಿ ಏಷ್ಯಾಕಪ್ಗೆ ಗಿಲ್ ಅವರನ್ನು ಉಪನಾಯಕನಾಗಿ ಹೆಸರಿಸಲಾಗಿದೆ.

ಇದಾಗ್ಯೂ ವರ್ಕ್ಲೋಡ್ ಮ್ಯಾನೇಜ್ ಮಾಡಲು ಶುಭ್ಮನ್ ಗಿಲ್ ಅವರಿಗೆ ಏಕದಿನ ತಂಡದ ನಾಯಕತ್ವ ನೀಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ಅವರ ಬಳಿಕ ಭಾರತ ಏಕದಿನ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುವುದನ್ನು ಎದುರು ನೋಡಬಹುದು.