IPL 2023: ಐಪಿಎಲ್ ಫೈನಲ್ ಪಂದ್ಯ ಮುಗಿದರೂ ಚರ್ಚೆಗಳು ಮಾತ್ರ ಮುಂದುವರೆದಿದೆ. ಅದರಲ್ಲೂ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೋತಿದ್ದು ಈ ಚರ್ಚೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ. ಇದೀಗ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನ ನಡೆಯ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.
ಗುಜರಾತ್ ಟೈಟಾನ್ಸ್-ಸಿಎಸ್ಕೆ ನಡುವಣ ಫೈನಲ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಕೊನೆಯ ಓವರ್ನಲ್ಲಿ ಸಿಎಸ್ಕೆಗೆ ಗೆಲ್ಲಲು 13 ರನ್ಗಳ ಅಗತ್ಯವಿತ್ತು. ಈ ಹಂತದಲ್ಲಿ ದಾಳಿಗಿಳಿದ ಮೋಹಿತ್ ಶರ್ಮಾ 4 ಎಸೆತಗಳಲ್ಲಿ ನೀಡಿದ್ದು ಕೇವಲ 3 ರನ್ ಮಾತ್ರ.
ಆದರೆ ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಸಿಕ್ಸ್ ಹಾಗೂ ಫೋರ್ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಆದರೆ ಅದುವರೆಗೆ ಚೆನ್ನಾಗಿಯೇ ಬೌಲ್ ಮಾಡಿದ್ದ ಮೋಹಿತ್ ಶರ್ಮಾ ಕೊನೆಯ ಎಸೆತಗಳಲ್ಲಿ ಸಿಕ್ಸ್-ಫೋರ್ ಹೊಡೆಸಿಕೊಂಡಿದ್ದೇಕೆ ಎಂಬ ಪ್ರಶ್ನೆ ಇದೀಗ ಗುಜರಾತ್ ಟೈಟಾನ್ಸ್ ಅಭಿಮಾನಿಗಳನ್ನು ಕಾಡುತ್ತಿದೆ.
ಈ ಕಾಡುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಸುನಿಲ್ ಗವಾಸ್ಕರ್. ಮೋಹಿತ್ ಶರ್ಮಾ ಅವರ ಕೊನೆಯ ಎರಡು ಎಸೆತಗಳ ಮೇಲೆ ಪರಿಣಾಮ ಬೀರಿದ್ದು ಗುಜರಾತ್ ಟೈಟಾನ್ಸ್ ತಂಡದ ನಾಯಕ ನಿರ್ಧಾರ ಎಂದು ಗವಾಸ್ಕರ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ಮೋಹಿತ್ ಶರ್ಮಾ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡುತ್ತಿದ್ದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್ ಮಾತ್ರ ನೀಡಿದ್ದರು. ಇದಾಗ್ಯೂ ಹಾರ್ದಿಕ್ ಪಾಂಡ್ಯ ಅವರ ಬಳಿ ಚರ್ಚಿಸುವ ಅಗತ್ಯವೇ ಇರಲಿಲ್ಲ.
ಇನ್ನು ಕೊನೆಯ ಓವರ್ನ 2 ಎಸೆತಗಳು ಬಾಕಿ ಇರುವಾಗ ಅವರಿಗೆ ನೀರು ಕಳುಹಿಸಿರುವುದು ಅಚ್ಚರಿ ಮೂಡಿಸಿತು. ಇದೇ ವೇಳೆ ಹಾರ್ದಿಕ್ ಪಾಂಡ್ಯ ಅವರ ಬಳಿ ಮಾತನಾಡಿದರು. ಬೌಲರ್ ಉತ್ತಮ ಲಯದಲ್ಲಿದ್ದಾಗ, ಮಾನಸಿಕವಾಗಿಯೂ ದೃಢವಾಗಿರುವಾಗ ಯಾರೂ ಕೂಡ ಏನು ಹೇಳಲು ಹೋಗಬಾರದು.
4 ಎಸೆತಗಳನ್ನು ಉತ್ತಮವಾಗಿಯೇ ಮಾಡಿದ್ದರಿಂದ ದೂರದಿಂದ ಚೆನ್ನಾಗಿ ಬೌಲಿಂಗ್ ಮಾಡಿದ್ದೀಯಾ ಎಂದು ಪ್ರೋತ್ಸಾಹಿಸಬೇಕಷ್ಟೇ. ಆದರೆ ಓವರ್ ಮಧ್ಯೆ ನೀರು ತರಿಸಿ, ಹಾರ್ದಿಕ್ ಪಾಂಡ್ಯ ಬಂದು ಚರ್ಚಿಸಿದರು. ಈ ವೇಳೆ ಇದ್ದಕ್ಕಿದ್ದಂತೆ ಮೋಹಿತ್ ಶರ್ಮಾ ಅತ್ತ-ಇತ್ತ ನೋಡುತ್ತಿದ್ದರು. ಅದಕ್ಕೂ ಮೊದಲು ಅವರು ಸಂಪೂರ್ಣವಾಗಿ ಕೇಂದ್ರೀಕೃತರಾಗಿದ್ದರು.
ಈ ಎಲ್ಲಾ ಘಟನೆಗಳ ಬಳಿಕ ಮೋಹಿತ್ ಶರ್ಮಾರ 5ನೇ ಎಸೆತದಲ್ಲಿ ಜಡೇಜಾ ಸಿಕ್ಸ್ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ ಫೋರ್ ಬಾರಿಸಿ ಸ್ಮರಣೀಯ ಜಯ ತಂದುಕೊಟ್ಟರು. ಅಂದರೆ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಬೌಲರ್ ಬಳಿ ಹೋಗಿ ಹಾರ್ದಿಕ್ ಪಾಂಡ್ಯ ಚರ್ಚಿಸಿದ್ದು ಅವರ ಲಯ ತಪ್ಪಲು ಕಾರಣವಾಯಿತು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.