
ಐಸಿಸಿ ಟಿ20 ವಿಶ್ವಕಪ್ 2022 ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ಭಾರತ ಕ್ರಿಕೆಟ್ ತಂಡ ಟೂರ್ನಿಯಿಂದ ಹೊರಬಿದ್ದಾಗಿದೆ. ಇದರ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಪ್ರಶ್ನೆಗಳೆದ್ದಿವೆ. ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್ ಕೆಳಗಿಳಿಸಿ ನೂತನ ಕ್ಯಾಪ್ಟನ್ ಮಾಡುವ ಬಗ್ಗೆ ಬಿಸಿಸಿಐ ಯೋಚಿಸುತ್ತಿದೆ ಎಂದು ಕೆಲ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಎಲ್ಲಾದರು ರೋಹಿತ್ ಶರ್ಮ ಅವರನ್ನು ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಸಿದರೆ ಹೊಸ ನಾಯಕ ಯಾರು ಆಗಬಹುದು?. ಇದಕ್ಕೆ ಮೂರು ಹೆಸರುಗಳು ಜೋರಾಗಿ ಕೇಳಿಬರುತ್ತಿವೆ. ಅವರು ಯಾರು ಎಂಬುದು ಇಲ್ಲಿದೆ ನೋಡಿ.

ಕೆಎಲ್ ರಾಹುಲ್: ಕೆಎಲ್ ರಾಹುಲ್ ಸದ್ಯ ಭಾರತ ವೈಟ್-ಬಾಲ್ ಕ್ರಿಕೆಟ್ನ ಉಪ ನಾಯಕರಾಗಿದ್ದಾರೆ. ಈ ಜವಾಬ್ದಾರಿ ಹೊತ್ತು ಸುಮಾರು ಒಂದು ವರ್ಷ ಅಗಿದೆ. ರಾಹುಲ್ ಅವರಿಂದ ಸತತವಾಗಿ ಉತ್ತಮ ಪ್ರದರ್ಶನ ಬರುತ್ತಿಲ್ಲ ನಿಜ. ಆದರೆ, ಫಾರ್ಮ್ಗೆ ಬಂದರೆ ಇವರನ್ನು ಕಟ್ಟಿ ಹಾಕುವುದು ಸುಲಭವಲ್ಲ. ಹೀಗಾಗಿ ರೋಹಿತ್ ಜಾಗಕ್ಕೆ ನಾಯಕನಾಗಲು ರಾಹುಲ್ ಮೊದಲ ಆಯ್ಕೆ ಆಗಿದ್ದಾರೆ.

ಹಾರ್ದಿಕ್ ಪಾಂಡ್ಯ: ಹಾರ್ದಿಕ್ ಟೀಮ್ ಇಂಡಿಯಾದ ಭವಿಷ್ಯ ನಾಯಕ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಿ ಚಾಂಪಿಯನ್ ಮಾಡುವ ವರೆಗೆ ಹಾರ್ದಿಕ್ರಲ್ಲಿ ಇಂಥಹ ಅತ್ಯುತ್ತಮ ನಾಯಕತ್ವದ ಗುಣ ಇದೆ ಎಂಬ ವಿಚಾರ ತಿಳಿದಿರಲೇ ಇಲ್ಲ.

ತಂಡಕ್ಕೆ ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್ನಲ್ಲಿ ನೆರವಾಗುವ ಹಾರ್ದಿಕ್ ಈಗಾಗಲೇ ಭಾರತ ಟಿ20 ತಂಡಕ್ಕೆ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇವರು ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಇವರು ಟೀಮ್ ಇಂಡಿಯಾದ ನಾಯಕನಾಗಿದ್ದಾರೆ. ಹೀಗಾಗಿ ಇವರು ಕೂಡ ರೇಸ್ನಲ್ಲಿದ್ದಾರೆ.

ರಿಷಭ್ ಪಂತ್: ರಿಷಭ್ ಪಂತ್ ಈಗಾಗಲೇ ಭಾರತ ಟಿ20 ತಂಡವನ್ನು ಐದು ಬಾರಿ ನಾಯಕನಗಿ ಮುನ್ನಡೆಸಿದ್ದಾರೆ. ಐಪಿಎಲ್ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಜೊತೆಗೆ ಭಾರತ ಏಕದಿನ ಮತ್ತು ಟಿ20 ತಂಡದ ಉಪ ನಾಯಕನಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅಪಾರ ಅನುಭವ ಹೊಂದಿರುವ ಪಂತ್ ಕೂಡ ಕ್ಯಾಪ್ಟನ್ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ರೋಹಿತ್ ಶರ್ಮಾ ಮೂರು ಮಾದರಿಯ ಕ್ರಿಕೆಟ್ನಲ್ಲಿ ನಾಯಕನಾಗಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಅಂಕಿಆಂಶ ಹೊಂದಿರುವ ರೋಹಿತ್ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಕೂಡ ಮಾಡಲಿಲ್ಲ. ಜೊತೆಗೆ ನಾಯಕತ್ವದಲ್ಲೂ ಎಡವಿದ್ದರು.

ಟಿ20 ವಿಶ್ವಕಪ್ 2022 ರಲ್ಲಿ ರೋಹಿತ್ ತೆಗೆದುಕೊಂಡ ಕೆಲ ನಿರ್ಧಾರಗಳು ತಂಡದ ಸೋಲಿಗೆ ಕೂಡ ಕಾರಣವಾಗಿದ್ದವು. ಮುಖ್ಯವಾಗಿ ಸೆಮಿ ಫೈನಲ್ನಂತಹ ಮಹತ್ವದ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಅತ್ತ ಇಂಗ್ಲೆಂಡ್ ತಂಡದ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ.