
ಕಾಫಿನಾಡಿನ ಪಶ್ಚಿಮ ಘಟ್ಟಗಳ ಸಾಲು ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಆರಂಭವಾಗಿದೆ. ಆದರೂ ಸಮುದ್ರ ಮಟ್ಟದಿಂದ 6 ಸಾವಿರ ಅಡಿ ಎತ್ತರದ ಬೆಟ್ಟವನ್ನೇರಿ ಕುಳಿತಿರುವ, ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮನನ್ನು ನೋಡಲು ಜನರು ಕಾತುರದಿಂದಿದ್ದಾರೆ. ಈ ಬಾರಿ ಎರಡು ದಿನ ಅವಕಾಶವಿದ್ದು, ರಾತ್ರಿ ಬೆಟ್ಟವನ್ನೇರೋಕೆ ನಿರ್ಬಂಧ ಹೇರಲಾಗಿದೆ.

ಈ ಬಾರಿ ಎರಡು ದಿನ , ಅಂದರೆ ಅಕ್ಟೋಬರ್ 19 ಅಕ್ಟೋಬರ್ 20 ಎರಡು ದಿನ ಬರಿಗಾಲಿನಲ್ಲಿ ಬೆಟ್ಟವನ್ನು ಏರಿ ಬೆಟ್ಟದ ತಾಯಿ ದೇವಿರಮ್ಮನ ದರ್ಶನ ಮಾಡಲು ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನ ಸಮಿತಿ ಅವಕಾಶ ಮಾಡಿಕೊಟ್ಟಿದೆ.

ಆದರೆ ರಾತ್ರಿ ಸಮಯದಲ್ಲಿ ಬೆಟ್ಟವನ್ನು ಏರಲು ಭಕ್ತರಿಗೆ ನಿರ್ಬಂಧ ಹೇರಿದೆ. ಹವಾಮಾನ ಇಲಾಖೆ ಭಾರಿ ಮಳೆಯಾಗುವ ಸೂಚನೆ ನೀಡಿದ್ದು, ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದೇವಿರಮ್ಮ ಬೆಟ್ಟದಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮಗಳೊಂದಿಗೆ ಜಿಲ್ಲಾಡಳಿತದ ಆದೇಶದಂತೆ ಬೆಟ್ಟ ಏರುವಂತೆ ಭಕ್ತರಿಗೆ ಮನವಿ ಮಾಡಿದೆ.

ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಉದ್ದೇಶದಿಂದಲೇ ದೇವರಮ್ಮನ ಅಪ್ಪಣೆ ಕೇಳಿ ಎರಡು ದಿನ ಅವಕಾಶವನ್ನ ಕಲ್ಪಿಸಲಾಗಿತ್ತು. ಆದರೆ ಈ ವರ್ಷ ಪಶ್ಚಿಮ ಘಟ್ಟಗಳ ಸಾಲು ಮಳೆಯ ಅಬ್ಬರ ಹೆಚ್ಚಿದೆ ಮಲ್ಲೇನಹಳ್ಳಿಯ ಬೆಂಡಿಗ ಬೆಟ್ಟಗಳ ಸಾಲುಗಳಲ್ಲೂ ಕೂಡ ಮಳೆಯಾಗುತ್ತಿದೆ. ಅತಿ ಹೆಚ್ಚು ಬೆಟ್ಟ ಪ್ರದೇಶದಲ್ಲಿ ಜಾರಿಕೆಯಿದ್ದು, ರಾತ್ರಿ ಸಮಯ ಕಷ್ಟ ಅಗುತ್ತೇ ಭಕ್ತರಿಗೆ ಹೀಗಾಗಿಯೇ ನಿರ್ಬಂಧ ಮಾಡಲಾಗಿದೆ.

ಅಕ್ಟೋಬರ್ 19 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ಹಾಗೂ 20 ರಂದು ಬೆಳಗ್ಗೆ 6 ರಿಂದ ಸಂಜೆ 3 ಗಂಟೆಯವರೆಗೂ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿ ಅಲ್ಲಿನ ಸ್ಥಿತಿ ಅನುಗುಣವಾಗಿ ಕ್ರಮ ವಹಿಸಲಾಗಿದೆ.