
ಇದು ದಾವಣಗೆರೆಯ ಹರಿಹರದಲ್ಲಿರುವ ದೇವರಬೆಳಕೆರೆ ಜಲಾಶಯ. ಸ್ವಚ್ಚಂದ ಪರಿಸರ, ಶಾಂತ ಪ್ರದೇಶದಲ್ಲಿರುವ ಈ ಜಲಾಶಯವನ್ನು ನೋಡುವುದಕ್ಕೆ ಎಂದು ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಬೀಸುವ ಸವಿ ತಂಗಾಳಿಯ ಮಜವೇ ಬೇರೆ.

ಈ ಜಲಾಶಯದಲ್ಲಿ ದುಮ್ಮಿಕ್ಕಿ ಹರಿಯುವ ನೀರನ್ನು ನೋಡುವುದೇ ಒಂದು ಚಂದ. ಹಾಲಿನಂತೆ ಹರಿಯುವ ಈ ನೀರಿನ ಬೆಳ್ಳನೇ ಸಾಲು, ನೋಡುಗರನ್ನು ಸೆಳೆಯುತ್ತದೆ. ಅದರಲ್ಲೂ ವೀಕೆಂಡ್ ಬಂದರೆ ಇಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದರೆ, ಇಲ್ಲಿ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂಬುದೇ ಬೇಸರದ ಸಂಗತಿ.

ಪಾರ್ಕ್ ಆಗಲಿ ಅಥವಾ ಕುಳಿತುಕೊಳ್ಳಲು ಆಸನಗಳಾಗಲಿ ಇಲ್ಲವೇ ಇಲ್ಲ. ಹೀಗಾಗಿ ಈ ಡ್ಯಾಂ ನ್ನು ಅಭಿವೃದ್ದಿ ಪಡಿಸಿ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನು ಮಳೆಯಿಂದ ಡ್ಯಾಂ ಗೆ ಭರ್ಜರಿ ನೀರು ಹರಿದು ಬರುತ್ತಿದ್ದು, ಇದೇ ಕಾರಣ ಭರ್ಜರಿ ಮೀನುಗಳ ಬೇಟೆ ಸಹ ಆರಂಭವಾಗಿದೆ.

ಹರಿಹರದಿಂದ ಕೆಲವೇ ಕೆಲವು ಕಿ.ಮೀ ದೂರದಲ್ಲಿರುವ ಈ ಡ್ಯಾಂಗೆ ಪ್ರತಿನಿತ್ಯ ಸೂರ್ಯಾಸ್ತದ ಸಮಯದಲ್ಲಿ ಪ್ರವಾಸಿಗರು ಬರುತ್ತಾರೆ. ಜಲಾಶಯದಲ್ಲಿ ಮೈತುಂಬಿ ಹರಿಯುವ ದೃಶ್ಯ ಕಣ್ಣಿಗೆ ತಂಪೆರೆಯುತ್ತದೆ. ಆಳೆತ್ತರದಿಂದ ದುಮ್ಮಿಕ್ಕೋ ಬೆಳ್ನೊರೆಯ ಧಾರೆ ನೋಡುಗರ ಕಣ್ಣಿಗೆ ಹಬ್ಬದ ಅನುಭವ.

ಆದ್ರೆ ಇಲ್ಲಿಗೆ ಬಂದವರಿಗೆ ಕುಡಿಯೋಕೆ ನೀರಿಲ್ಲ, ಶೌಚಾಲಯಗಳಂತೂ ಇಲ್ಲವೇ ಇಲ್ಲ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಕೂಡ ಪ್ರವಾಸಿಗರಿಗೆ ಮಾತ್ರ ಕೂಲ್ ಪ್ಲೇಸ್ ಆಗಿದೆ.

ಇಲ್ಲಿನ 33 ಚದರ ಮೈಲಿ ವಿಸ್ತೀರ್ಣದ ಜಲಾಶಯ ನೋಡುವುದೇ ಖುಷಿ. ಆದ್ರೆ, ಮೂಲಭೂತ ಸೌಕರ್ಯಗಳನ್ನು ಸರಿಪಡಿಸಿದರೆ ಇದು ದಾವಣಗೆರೆಯ ಮತ್ತೊಂದು ಪ್ರವಾಸಿ ತಾಣ ಆಗೋದರಲ್ಲಿ ಸಂಶಯವಿಲ್ಲ. ಇನ್ನಾದರೂ ಪ್ರವಾಸೋದ್ಯಮ ಇಲಾಖೆ ಹಾಗೂ ಶಾಸಕರು ಮನಸ್ಸು ಮಾಡಿ ಅಭಿವೃದ್ದಿ ಪಡಿಸುತ್ತಾರಾ ಎಂದು ಕಾದು ನೋಡಬೇಕಿದೆ.