
ಆಧುನಿಕ ತಂತ್ರಜ್ಞಾನ ಬಳಸಿ ಅಗ್ನಿವೀರರಿಗೆ ತರಬೇತಿ ನೀಡುತ್ತಿರುವ ವಾಯುಸೇನೆ ಅಧಿಕಾರಿಗಳು. ನಾಲ್ಕೂವರೆ ಕೆ.ಜಿ ಬಂದೂಕು ಹಿಡಿದು ಶಕ್ತಿ ಪ್ರದರ್ಶನ ಮಾಡುತ್ತಿರುವ ಅಗ್ನಿವೀರವಾಯು ತಂಡ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಂದೂಕು ಶಸ್ತ್ರಾಸ್ತ್ರಗಳ ಜೋಡಣೆ. ಅಗ್ನಿ ಅವಘಡ ವೇಳೆ ರಕ್ಷಣಾ ಕಾರ್ಯಾಚರಣೆ, ಎದುರಾಳಿಗಳ ಸೆದೆ ಬಡೆದು ಪಾರಾಗುವ ಸಂದರ್ಭದ ಅಣಕು ಪ್ರದರ್ಶನ. ಈ ಸಾಹಸಮಯ ದೃಶ್ಯ ಕಂಡು ಬಂದಿದ್ದು, ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್ಮೆನ್ ತರಬೇತಿ ಶಾಲೆಯಲ್ಲಿ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರವಾಯು ಹುದ್ದೆಗೆ ಆಯ್ಕೆಯಾದ ವೀರರು ಇವರು. ಬೆಳಗಾವಿಯ ಸಾಂಬ್ರಾದ ಏರ್ಮನ್ ತರಬೇತಿ ಶಾಲೆಯಲ್ಲಿ ಮೊದಲ ಅಗ್ನಿವೀರವಾಯು ಬ್ಯಾಚ್ನ ತರಬೇತಿ ಪೂರ್ಣವಾಗಿದೆ.

ಅಗ್ನಿವೀರವಾಯು ಮೊದಲ ಬ್ಯಾಚ್ನ ನಿರ್ಗಮನ ಪಥಸಂಚಲನ ವೈಭವೋಪೇತವಾಗಿ ನೆರವೇರಿತು. ಅಗ್ನಿವೀರವಾಯುಗಳ ಸಾಹಸ ಪ್ರದರ್ಶನ ಕಂಡು ಕುಟುಂಬಸ್ಥರು ಪುಳುಕಿತರಾದರು.

ಅಗ್ನಿವೀರ ವಾಯು ತಂಡ

2022ರ ಡಿಸೆಂಬರ್ 30 ರಂದು ಪ್ರಾರಂಭವಾಗಿದ್ದ ಅಗ್ನಿವೀರವಾಯು ಮೊದಲ ಬ್ಯಾಚ್ನ ತರಬೇತಿ ನಿನ್ನೆ (ಜೂ.3) ಮುಕ್ತಾಯಗೊಂಡಿತು. 22 ವಾರಗಳ ಕಾಲ 2675 ಪ್ರಶಿಕ್ಷಣಾರ್ಥಿಗಳು ಕಠಿಣ ತರಬೇತಿ ಪಡೆದು ದೇಶಸೇವೆಗೆ ಸನ್ನದ್ಧರಾಗಿದ್ದಾರೆ.

ಸಮಾರಂಭದಲ್ಲಿ ಭಾಗವಹಿಸಿದ್ದ ವಾಯುಸೇನೆಯ ಟ್ರೇನಿಂಗ್ ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಏರ್ ಮಾರ್ಷಲ್ ಆರ್. ರಾಧೀಶ್ ಮಾತನಾಡಿ ‘ಮೊದಲ ಬಾರಿ ತರಬೇತಿ ಪೂರ್ಣಗೊಳಿಸಿ ಅಗ್ನಿವೀರವಾಯು ತಂಡ ದೇಶ ಸೇವೆಗೆ ಅಣಿಯಾಗಿದೆ. ಈ ಯುವ ತಂಡ ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ ಎಂದರು.

ಇನ್ನು ತರಬೇತಿ ಅವಧಿಯಲ್ಲಿ ತಾವು ಕಲಿತ ವಿವಿಧ ಕೌಶಲ್ಯಗಳ ಸಾಹಸ ಪ್ರದರ್ಶನ ನೋಡಿ ಅಗ್ನಿವೀರವಾಯು ಕುಟುಂಬಸ್ಥರು ಫುಲ್ ಖುಷ್ ಆದ್ರು. ಬೆಳಗಾವಿ ಏರ ಮನ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಅಗ್ನಿವೀರವಾಯು ತಂಡವನ್ನು ಅದ್ಧೂರಿಯಾಗಿ ಬೀಳ್ಕೊಡಲಾಯಿತು.

ಅಗ್ನಿಪಥ್ ಯೋಜನೆಯಡಿ ದೇಶದಲ್ಲೆ ತರಬೇತಿ ಪೂರ್ಣಗೊಳಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಈ ಶಿಬಿರಾರ್ಥಿಗಳು ಪಾತ್ರರಾದರು. ತರಬೇತಿ ಅವಧಿಯಲ್ಲಿ ತಾವು ಪಡೆದ ವಿವಿಧ ಕೌಶಲ್ಯಗಳನ್ನು ಅಗ್ನಿವೀರರು ಪ್ರದರ್ಶಿಸಿ, ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು.

ಅಗ್ನಿ ಅವಘಡ ವೇಳೆ ರಕ್ಷಣಾ ಕಾರ್ಯಾಚರಣೆ, ತ್ವರಿತವಾಗಿ ಟೆಂಟ್ ನಿರ್ಮಾಣ, ತುರ್ತಾಗಿ ಬಂದೂಕು ಶಸ್ತ್ರಾಸ್ತ್ರಗಳ ಜೋಡಣೆ, ವಿವಿಧ ಶಸ್ತ್ರಾಸ್ತ್ರಗಳ ಬಳಕೆ, ತುರ್ತು ಕಾರ್ಯಾಚರಣೆ ಶೈಲಿ, ಎದುರಾಳಿಗಳ ಕೈಗೆ ಸಿಕ್ಕಿ ಬಿದ್ದಾಗ ಅವರನ್ನು ಸೆದೆ ಬಡಿದು ಪಾರಾಗುವುದು ಸೇರಿ ಕಠಿಣ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ಅಗ್ನಿವೀರರು ನಡೆಸಿದ ಅಣಕು ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಿತು.

ಅಗ್ನಿವೀರವಾಯು ತರಬೇತಿ ಪೂರ್ಣಗೊಳಿಸಿದ ಈ 2675 ಜನ 4 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆಗೆ ಹಾಜರಾಗಲಿದ್ದಾರೆ. 2675 ಅಗ್ನಿವೀರರ ಪೈಕಿ ಉತ್ತಮ ಸಾಧನೆ ತೋರಿದ ಶೇಕಡ 25ರಷ್ಟು ಸಿಬ್ಬಂದಿ ವಾಯುಪಡೆಯಲ್ಲಿಯೇ ಸೇವೆ ಮುಂದುವರಿಸಬಹುದು. ಒಟ್ಟಾರೆಯಾಗಿ ಇಂತಹ ಐತಿಹಾಸಿಕ ಕ್ಷಣಕ್ಕೆ ನಮ್ಮ ಬೆಳಗಾವಿ ಸಾಕ್ಷಿಯಾಗಿದ್ದು ಖುಷಿಯ ವಿಚಾರವೇ ಸರಿ.