ಎಲ್ಲಿ ನೋಡಿದರೂ ಹಸಿರು ರತ್ನಗಳ ಹೊದ್ದಿರುವ ಬೆಟ್ಟ, ಹಸಿರು ರತ್ನದ ಬೆಟ್ಟಕ್ಕೆ ಮುತ್ತಿಡುತ್ತಿರುವ ಮಂಜು, ಚುಮು ಚುಮು ಚುಮು ಚಳಿಗೆ ಮೈಯೊಡ್ಡಿ ಖುಷಿಯಲ್ಲಿರುವ ಪ್ರವಾಸಿಗರು. ಇಂತಹ ಪ್ರಶಾಂತವಾದ ವಾತಾವರಣ ನಿಮಗೆ ಸೀಗಬೇಕೆಂದರೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲೇಬೇಕು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಭಾರತದ ಸ್ವಿಜರ್ಲ್ಯಾಂಡ್ ಎಂದೆ ಕರೆಸಿಕೊಳ್ಳುತ್ತೆ. ಸದ್ಯ ಭಾರತದ ಈ ಸ್ವಿಜರ್ಲ್ಯಾಂಡ್ ನೋಡೋಕೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಬರುವ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಸಮುದ್ರ ಮಟ್ಟದಿಂದ 3769 ಅಡಿ ಎತ್ತರದಲ್ಲಿದೆ. ಜೋಳರ ಕಾಲದ ಇತಿಹಾಸ ವಿರುವ ಈ ಗೋಪಾಲ ಸ್ವಾಮಿ ದೇವಾಲಯವನ್ನ 1315ರಲ್ಲಿ ನಿರ್ಮಿಸಲಾಗಿದೆ.
ಋತುಮಾನಗಳ ಬೆರಗಿಗೆ ಬೆರಗಾಗುವ ಈ ಪ್ರಕೃತಿ ಸೊಬಗಿನ ಈ ಪುಣ್ಯ ಕ್ಷೇತ್ರದ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ವಿಶಾಲ ಹುಲ್ಲುಗಾವಲು, ಸುಂದರವಾದ ಅರಣ್ಯ. ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಆಕಾಶವನ್ನೇ ಹೊದ್ದು ನಿಂತಿರುವ ಹಾಗೆ ಕಾಣುತ್ತದೆ. ಸದ್ಯ ಪ್ರವಾಸಿಗರು ಬೆಟ್ಟಕ್ಕೆ ಬಂದು ಎಂಜಾಯ್ ಮಾಡುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿಎಸ್ ಬೆಟ್ಟದ ವ್ಯಾಪ್ತಿಗೆ ಬರುವ ಗೋಪಾಲ ಸ್ವಾಮಿ ಬೆಟ್ಟ ಎಲ್ಲರ ಅಚ್ಚು ಮೆಚ್ಚಿನ ತಾಣವಾಗಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ.
ವೀಕೆಂಡ್ನಲ್ಲಂತೂ ಪ್ರವಾಸಿಗರಿಂದ ಗೋಪಾಲಸ್ವಾಮಿ ಬೆಟ್ಟ ಫುಲ್ ರಶ್ ಆಗಿರುತ್ತದೆ. ದೂರದೂರಿನಿಂದ ತಮ್ಮ ಖಾಸಗಿ ವಾಹನದ ಮೂಲಕ ಬರುವ ಪ್ರವಾಸಿಗರು, ಬೆಟ್ಟದ ತಪ್ಪಲಿನಲ್ಲಿ ಪಾರ್ಕ್ ಮಾಡಿ, ಬಸ್ ಮೂಲಕವೇ ಬೆಟ್ಟಕ್ಕೆ ತೆರಳಬೇಕು.
ಸದ್ಯ ಸಾಕಷ್ಟು ಸಂಖ್ಯೆಯಲ್ಲಿ ಬೆಟ್ಟಕ್ಕೆ ಪ್ರವಾಸಿಗರು ಆಗಮಿಸುತಿದ್ದು, ಆಷಾಡ ಮಾಸದ ಚಳಿಯ ಜೊತೆ ಆಗಾಗ ಮುಂಗಾರಿನ ಸಿಂಚನ ಕೂಡ ಆಗುತ್ತಿದೆ. ಇದ್ರಿಂದ ಪ್ರವಾಸಿಗರು ಎಲ್ಲಾ ತರಹದ ವಾತಾವರಣ ಫೀಲ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ.
Published On - 9:03 am, Sun, 25 June 23